
ಬಿಸಿಸಿಐ ನಡೆ ಕುರಿತು ಕಿಡಿಕಾರಿದ ಅಮಿತ್ ಮಿಶ್ರಾ
ವಿರಾಟ್ ಕೊಹ್ಲಿ ಹೇಳಿಕೆಗಳ ನಂತರ ಪ್ರತಿಕ್ರಿಯಿಸಿರುವ ಅಮಿತ್ ಮಿಶ್ರಾ ಆಟಗಾರರಿಗೆ ಮಾಹಿತಿ ನೀಡಬೇಕಾದದ್ದು ಬಿಸಿಸಿಐನ ಕರ್ತವ್ಯ ಮತ್ತು ಆ ಮಾಹಿತಿಯನ್ನು ಪಡೆದುಕೊಳ್ಳುವುದು ಆ ಆಟಗಾರನ ಹಕ್ಕು ಎಂದಿದ್ದಾರೆ. ಯಾವುದೇ ಆಟಗಾರನನ್ನಾಗಲಿ ಅಥವಾ ನಾಯಕನನ್ನಾಗಲಿ ತಂಡದಿಂದ ಅಥವಾ ನಾಯಕನ ಸ್ಥಾನದಿಂದ ಬಿಸಿಸಿಐ ತೆಗೆದುಹಾಕಲು ತೀರ್ಮಾನಿಸಿದರೆ ಆ ಆಟಗಾರನಿಗೆ ಕೆಲ ದಿನಗಳ ಮುಂಚೆಯೇ ಮಾಹಿತಿಯನ್ನು ನೀಡಬೇಕು, ಅದನ್ನು ಬಿಟ್ಟು ಕೆಲ ನಿಮಿಷಗಳು ಬಾಕಿ ಇರುವಾಗ ಬಿಸಿಸಿಐ ಆ ಆಟಗಾರನಿಗೆ ತಮ್ಮ ನಿರ್ಧಾರವನ್ನು ತಿಳಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಹಾಗೂ ಇನ್ನೂ ಮುಂದುವರೆದು ಮಾತನಾಡಿರುವ ಅಮಿತ್ ಮಿಶ್ರಾ ಬಿಸಿಸಿಐ ಮುಂಚಿತವಾಗಿ ಆ ಆಟಗಾರನಿಗೆ ವಿಷಯವನ್ನು ತಿಳಿಸಿದರೆ ತಾನು ಎಲ್ಲಿ ತಪ್ಪು ಮಾಡಿದ್ದಾನೆ ಮತ್ತು ಸರಿಪಡಿಸಿಕೊಳ್ಳಬೇಕಾದ ಅಂಶಗಳೇನು ಎಂಬುದನ್ನು ತಿಳಿದುಕೊಂಡು ಸರಿ ಹಾದಿಗೆ ಬರಲಿದ್ದಾನೆ ಎಂದು ಅಭಿಪ್ರಾಯಪಟ್ಟರು.

ಈ ರೀತಿ ನಡೆಯುತ್ತಿರುವುದು ಇದೇ ಮೊದಲೇನಲ್ಲ ಎಂದ ಅಮಿತ್ ಮಿಶ್ರಾ!
ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕುತ್ತಿರುವ ವಿಷಯವನ್ನು ವಿರಾಟ್ ಕೊಹ್ಲಿಗೆ ಅಂತಿಮ ಕ್ಷಣದಲ್ಲಿ ಬಿಸಿಸಿಐ ತಿಳಿದಿತ್ತು ಎಂಬ ವಿಷಯದ ಕುರಿತಾಗಿ ಕೆಂಡ ಕಾರಿರುವ ಅಮಿತ್ ಮಿಶ್ರಾ ಬಿಸಿಸಿಐ ಆಟಗಾರರನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ ಎಂದಿದ್ದಾರೆ. ಈ ಹಿಂದೆ ಸಾಕಷ್ಟು ಬಾರಿ ಬಿಸಿಸಿಐ ಆಟಗಾರರನ್ನು ಈ ರೀತಿ ನಡೆಸಿಕೊಂಡಿದ್ದು ಸರಿಯಾದ ಮಾಹಿತಿ ನೀಡದೆ ತಂಡದಿಂದ ಕೈಬಿಟ್ಟಿದೆ ಎಂಬ ಆರೋಪವನ್ನು ಅಮಿತ್ ಮಿಶ್ರಾ ಮಾಡಿದ್ದಾರೆ. ಈ ಮೂಲಕ ಬಿಸಿಸಿಐ ತನ್ನನ್ನು ಕೂಡ ಸರಿಯಾದ ಮಾಹಿತಿ ನೀಡದೇ ತಂಡದಿಂದ ತೆಗೆದು ಹಾಕಿತ್ತು ಎಂಬ ಆಕ್ರೋಶವನ್ನು ಪರೋಕ್ಷವಾಗಿ ಅಮಿತ್ ಮಿಶ್ರಾ ಇಲ್ಲಿ ವ್ಯಕ್ತಪಡಿಸಿದರು.

ದೇಶದ ಪರ ಆಡುವ ಆಟಗಾರರಿಗೆ ತಕ್ಕ ಮರ್ಯಾದೆ ಸಿಗುತ್ತಿಲ್ಲ!
ಬಿಸಿಸಿಐ ಆಟಗಾರರಿಗೆ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ ಮತ್ತು ತೆಗೆದುಕೊಳ್ಳುವ ನಿರ್ಧಾರವನ್ನು ಬೇಗನೆ ತಿಳಿಸುವುದಿಲ್ಲ ಎಂಬುದರ ಕುರಿತು ಕಿಡಿಕಾರಿರುವ ಅಮಿತ್ ಮಿಶ್ರಾ ದೇಶಕ್ಕಾಗಿ ಆಡುವ ಆಟಗಾರರಿಗೆ ತಕ್ಕನಾದ ಮರ್ಯಾದೆಯನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ. ಆಟಗಾರರು ಕಷ್ಟಪಟ್ಟು ದೇಶಕ್ಕಾಗಿ ಆಡುತ್ತಾರೆ ಆದರೆ ದೇಶಕ್ಕಾಗಿ ಆಡುವ ಆಟಗಾರರಿಗೆ ಬಿಸಿಸಿಐ ನೀಡಬೇಕಾದ ಮರ್ಯಾದೆಯನ್ನು ನೀಡುವುದಿಲ್ಲ ಎಂದು ಅಮಿತ್ ಮಿಶ್ರಾ ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications












