ಮೇ 27 ಸೋಮವಾರ, ಚೆನ್ನೈನಲ್ಲಿ ನಡೆದ ಐಪಿಎಲ್ 2024ರ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ಎದುರು ಶ್ರೇಯಸ್ ಅಯ್ಯರ್ ಮುನ್ನೆಡೆಸಿದ ಕೋಲ್ಕತ್ತಾ ನೈಟ್ ರೈಡರ್ಸ್ 8 ವಿಕೆಟ್ಗಳ ಅಂತರದಿಂದ ಗೆದ್ದು ಬೀಗಿತ್ತು.
ಟ್ರೋಫಿ ಗೆದ್ದ ಖುಷಿಗೆ ಮೈದಾನ ತುಂಬ ಕೆಕೆಆರ್ ಆಟಗಾರರು, ಸಿಬ್ಬಂದಿ ಹಾಗು ಮಾಲೀಕ ಶಾರುಖ್ ಖಾನ್ ಸಂಭ್ರಮಾಚರಣೆ ಮಾಡಿ ಕುಣಿದು ಕುಪ್ಪಳಿಸಿದರು. ಮತ್ತೊಂದೆಡೆ ತನ್ನ ತಂಡ ಹೀನಾಯವಾಗಿ ಸೋತಿದಕ್ಕೆ ಕಾವ್ಯಾ ಮಾರನ್ ಸ್ಟೇಡಿಯಂನಲ್ಲಿ ಅಳಲು ಪ್ರಾರಂಭಿಸಿದ್ದರು.

ಎಷ್ಟೇ ಪ್ರಯತ್ನಿಸಿದ್ದರೂ ಕಾವ್ಯಾ ಮಾರನ್ ಅವರು ತನ್ನ ಕಣ್ಣೀರನ್ನು ತಡೆಯಲು ಸಾಧ್ಯವಾಗಲಿಲ್ಲ. ನೋವಿನಲ್ಲೂ ವಿಜೇತ ಕೆಕೆಆರ್ ತಂಡಕ್ಕೆ ಚಪ್ಪಾಳೆ ತಟ್ಟುತ್ತಲೇ ಅಭಿನಂದಿಸಿದ್ದರು.
ಆದರೆ ಕಾವ್ಯ ಮಾರನ್ ಆಳುತ್ತಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ಈ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಲೆ ಇವೆ.
ಈ ವಿಡಿಯೋ ನೋಡಿದ ಬಾಲಿವುಡ್ ಸ್ಟಾರ್ ನಟ 'ಬಿಗ್ ಬಿ' ಖ್ಯಾತಿಯ ಅಮಿತಾಭ್ ಬಚ್ಚನ್ ಅವರು ಬೇಸರಗೊಂಡಿದ್ದಾರೆ. ತಮ್ಮ ಬ್ಲಾಗ್ನಲ್ಲಿ ಶಾರುಖ್ ಖಾನ್- ಚುಹಿ ಚಾವ್ಲಾ ಮಾಲೀಕತ್ವದ ಕೆಕೆಆರ್ ಗೆದ್ದಿರುವುದಕ್ಕೆ ಅಭಿನಂದಿಸಿದ್ದಾರೆ. ಅಲ್ಲದೆ, ಎಸ್ಆರ್ಹೆಚ್ ಸೋತಿದಕ್ಕೆ ನಿರಾಶೆಯಾಗಿದೆ ಎಂದು ಬರೆದಿದ್ದಾರೆ.
2024ರ ಐಪಿಎಲ್ ಋತುವಿನಲ್ಲಿ ಸನ್ ರೈಸಸ್ ಹೈದರಾಬಾದ್ ಅತ್ಯುತ್ತಮ ತಂಡವಾಗಿತ್ತು. ಕಾವ್ಯಾ ಮಾರನ್ ತ್ನನ್ನ ಕಣ್ಣೀರನ್ನು ತಡೆಯಲು ಪ್ರಯತ್ನಿಸುತ್ತಿರುವ ವಿಡಿಯೋ ನೋಡಿ ಬೇಸರವಾಯಿತು.
ತನಗೆ ನೋವಾಗಿದೆ ಎಂದು ತೋರಿಸಲು ಕಾವ್ಯಾ ಬಯಸಲಿಲ್ಲ. ಅವಳ ಸ್ಥಿತಿ ನೋಡಿ ನನಗೆ ಬೇಸರ ತಂದಿದೆ. ಅದರೆ ಪರವಾಗಿಲ್ಲ, ನಾಳೆ ನಿನ್ನದಮ್ಮಾ ಎಂದು ಅಮಿತಾಭ್ ಬರೆಯುವ ಮೂಲಕ ಕಾವ್ಯಾ ಮಾರನ್ ಅವರನ್ನು ಸಮಾಧಾನ ಮಾಡಿದ್ದಾರೆ.
ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ 18.3 ಓವರ್ಗಳಲ್ಲಿ 113 ರನ್ಗಳಿಗೆ ಆಲೌಟ್ ಆಗಿತ್ತು. ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್ನಲ್ಲಿ ಕಡಿಮೆ ಮೊತ್ತ ಆಲೌಟ್ ಆದ ತಂಡ ಎಂಬ ಕೆಟ್ಟ ದಾಖಲೆಗೆ ಹೈದರಾಬಾದ್ ಕಾರಣವಾಗಿತ್ತು.
ಹೈದರಾಬಾದ್ ಪರ ನಾಯಕ ಪ್ಯಾಟ್ ಕಮ್ಮಿನ್ಸ್ 24 ರನ್ ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರು. ಉಳಿದ ಯಾವುದೇ ಬ್ಯಾಟರ್ಗಳಿಂದ ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ.
ಈ ಗುರಿಯನ್ನು ಬೆನ್ನಟ್ಟಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ 10.3 ಓವರ್ಗಳಲ್ಲಿ 2 ವಿಕೆಟ್ಗೆ 114 ರನ್ ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿತು. ವೆಂಕಟೇಶ್ ಅಯ್ಯರ್ ಕೇವಲ 26 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ಗಳಿಂದ ಅಜೇಯ 52 ರನ್ ಗಳಿಸಿದರು.
ರಹಮಾನುಲ್ಲಾ ಗುರ್ಬಾಜ್ 32 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 39 ರನ್ ಗಳಿಸಿದರು. ವೆಂಕೆಟೇಶ್ ಅಯ್ಯರ್ ಮತ್ತು ರಹಮಾನುಲ್ಲಾ ಗುರ್ಬಾಜ್ ಎರಡನೇ ವಿಕೆಟ್ಗೆ 91 ರನ್ಗಳ ಜೊತೆಯಾಟ ಆಡುವ ಮೂಲಕ ಕೆಕೆಆರ್ಗೆ ಗೆಲುವು ತಂದು ಕೊಟ್ಟರು.