ಚಕ್ ದೆ ಇಂಡಿಯಾ ಚಿತ್ರವನ್ನು ನೀವು ನೋಡಿರಬಹುದು. ಈ ಚಿತ್ರದಲ್ಲಿನ ಕಬೀರ್ ಖಾನ್ ಪಾತ್ರ ನಿಮ್ಮ ಕಣ್ಣಂಚಲ್ಲಿ ನೀರು ತರಿಸಿರಬಹುದು. ತಾನು ಮಾಡಲಾಗದ ಸಾಧನೆಯನ್ನು ಒಂದು ಲೇಡಿ ಸೈನ್ಯ ಕಟ್ಟಿಕೊಂಡು ಸಾಧಿಸಿದ ಸಾಧಕನ ಸಾಧನೆಗೆ ಎಲ್ಲರೂ ಭೇಷ ಎಂದಿದ್ದರು. ಇದು ತೆರೆಯ ಮೇಲಿನ ಕಹಾನಿ. ಆದರೆ ಭಾನುವಾರ ಭಾರತ ತಂಡ ಮಹಿಳಾ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿದಾಗ, ತಂಡದ ಕೋಚ್ ಬಗ್ಗೆ ಮಾತುಗಳು ಕೇಳಿ ಬಂದವು. ಭಾರತ ಮಹಿಳಾ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವಲ್ಲಿ ಕೋಚ್ ಅಮೋಲ್ ಮುಜುಂದಾರ್ ಪಾತ್ರ ದೊಡ್ಡದು.
ದಕ್ಷಿಣ ಆಫ್ರಿಕಾ ತಂಡವನ್ನು 52 ರನ್ಗಳಿಂದ ಟೀಮ್ ಇಂಡಿಯಾ ಮಣಿಸಿ ಚೊಚ್ಚಲ ಬಾರಿಗೆ ಮಹಿಳಾ ಏಕದಿನ ವಿಶ್ವಕಪ್ ಮುಕುಟವನ್ನು ಮುಡಿಗೇರಿಸಿಕೊಂಡಿತು. ಈ ವೇಳೆ ಎಲ್ಲರೂ ಆಟಗಾರರ ಸಾಧನೆಯನ್ನು ಕೊಂಡಾಡಿದರು. ಜೊತೆಗೆ ತಂಡವನ್ನು 2 ವರ್ಷಗಳ ಹಿಂದೆ ಕಟ್ಟಲು ಆರಂಭಿಸಿದ ಕೋಚ್ ಅಮೂಲ್ ಮುಜುಂದಾರ್ ಅವರ ಸಾಧನೆಯನ್ನು ಕೊಂಡಾಡಿದರು. ಹರ್ಮನ್ ಪ್ರಿತ್ ಕೌರ್ ಫೈನಲ್ ಗೆದ್ದ ಬಳಿಕ ಕೋಚ್ ಅವರ ಕಾಳಿಗೆ ಬೀಳುತ್ತಿರುವ ದೃಶ್ಯ ಕಂಡ ಮೇಲೆ ಎಲ್ಲರೂ, ಕೋಚ್ ಸಾಧನೆಯ ಹುಡುಕಾಟ ನಡೆಸಿದ್ದಾರೆ.

ಅಮೋಲ್ ಮುಜುಂದಾರ್.. ಭಾರತ ದೇಶೀಯ ಕ್ರಿಕೆಟ್ನಲ್ಲಿ ದೊಡ್ಡ ಹೆಸರು. ದೇಶೀಯ ಕ್ರಿಕೆಟ್ನಲ್ಲಿ 11 ಸಾವಿರಕ್ಕೂ ಹೆಚ್ಚು ರನ್ ಕಲೆ ಹಾಕಿದ ಸರದಾರ. ಆಡಿದ 171 ಪಂದ್ಯಗಳಲ್ಲಿ 48.13ರ ಸರಾಸರಿಯಲ್ಲಿ 30 ಶತಕ ಹಾಗೂ 60 ಅರ್ಧಶತಕ ಸಿಡಿಸಿದ್ದಾರೆ. ಆದರೂ ಸಹ ಇವರಿಗೆ ಭಾರತ ತಂಡದ ಕರೆ ಬಾರಲಿಲ್ಲ. ಸ್ಥಿರ ಪ್ರದರ್ಶನ ನೀಡಿದರೂ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಆಗ ತಂಡದಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಅವರಂತಹ ದಿಗ್ಗಜ ಆಟಗಾರರು ಮೊದಲಿನಿಂದಲೂ ತಂಡದಲ್ಲಿ ಇದ್ದರು. ಹೀಗಾಗಿ ಇವರು ಭಾರತ ತಂಡವನ್ನು ಪ್ರತಿನಿಧಿಸುವ ಕನಸು ನನಸಾಗಲಿಲ್ಲ. ಆದರೂ ಕನಸನ್ನು ಬಿಡದ ಮುಜುಂದಾರ್ ಈಗ ಯಶಸ್ಸು ಕಂಡಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ ದೊಡ್ಡ ಸಾಧನೆ ಮಾಡಿ ಅವಕಾಶ ಸಿಗದೇ ಇದ್ದರೂ ಅಮೋಲ್ ಮಜುಂದಾರ್ ಕ್ರಿಕೆಟ್ ಬಿಡಲಿಲ್ಲ. ತಮ್ಮಲ್ಲಿನ ಅನುಭವವನ್ನು ಮುಂದಿನ ತಲೆಮಾರಿಗೆ ನೀಡಲು ಮುಂದಾದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತುದಾರರಾಗಿ, ಮುಂಬೈ ಹಾಗೂ ರಾಜಸ್ಥಾನ ರಾಯಲ್ಸ್ನ ಸಹಾಯಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದರು. ಅಂತಿಮವಾಗಿ 2023ರಲ್ಲಿ ಇವರನ್ನು ಭಾರತ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಇಲ್ಲಿಂದ ಅಮೋಲ್ ಅವರ ಹೊಸ ಇನಿಂಗ್ಸ್ ಆರಂಭವಾಯಿತು.

ಡ್ರೆಸ್ಸಿಂಗ್ ರೂಮ್ನಲ್ಲಿ ಅಮೋಲ್ ಮುಜುಂದಾರ್ ಮಾಡಿದ ಆ ಒಂದು ಭಾಷಣ ಆಟಗಾರ್ತಿಯರಿಗೆ ಸ್ಪೂರ್ತಿಯ ಸೆಲೆಯಾಯಿತು. ಈ ತಂಡವನ್ನು ಸೋಲಲು ಕಟ್ಟಿಲ್ಲ. ನಿಮ್ಮಲ್ಲಿಯ ಪ್ರತಿಯೊಬ್ಬ ಆಟಗಾರ್ತಿ ಭಾರತದ ಗೌರವ ಎಂದು ತಿಳಿಸಿದ್ದರು. ಬಳಿಕ ಮಾತನಾಡಿದ ಹರ್ಮನ್ ಪ್ರೀತ್ ಕೌರ್ ಕೋಚ್ ನಮ್ಮ ಮುಂದೆ ಕನ್ನಡಿಯನ್ನು ಇಟ್ಟಿದ್ದಾರೆ ಎಂದು ತಿಳಿಸಿದ್ದರು.