
ಕೊಲಂಬೊ, ಏಪ್ರಿಲ್ 18: ಏಕದಿನ ತಂಡಕ್ಕೆ ದಿಮುತ್ ಕರುಣಾರತ್ನೆ ಅವರನ್ನು ನೂತನ ನಾಯಕನನ್ನಾಗಿ ನೇಮಕ ಮಾಡಿದ ಮರುದಿನವೇ ಶ್ರೀಲಂಕಾ ಕ್ರಿಕೆಟ್ ಮಂಡಳಿ, ಮೇ 30ರಂದು ಇಂಗ್ಲೆಂಡ್ನಲ್ಲಿ ಆರಂಭವಾಗಲಿರುವ ಕ್ರಿಕೆಟ್ ವಿಶ್ವಕಪ್ಗೆ ತನ್ನ 15 ಆಟಗಾರರ ಪ್ರಾಥಮಿಕ ತಂಡವನ್ನು ಪ್ರಕಟಿಸಿದೆ.
ಏಕದಿನ ಕ್ರಿಕೆಟ್ನಲ್ಲಿ ಕೇವಲ 17 ಪಂದ್ಯವನ್ನಾಡಿರುವ ಕರುಣಾರತ್ನೆ ಅವರನ್ನು ನಾಯಕನನ್ನಾಗಿ ನೇಮಕ ಮಾಡಿ ಅಚ್ಚರಿ ಮೂಡಿಸಿದ್ದ ಕ್ರಿಕೆಟ್ ಶ್ರೀಲಂಕಾ, ಇದೀಗ ವಿಶ್ವ ಸಮರಕ್ಕೆ ಸಿದ್ದ ಪಡಿಸಿರುವ 15 ಆಟಗಾರರ ಪಟ್ಟಿಯಲ್ಲೂ ಕೆಲ ಅಚ್ಚರಿ ತಂದಿದೆ. ಪ್ರಮುಖವಾಗಿ ಅನುಭವಿ ಬ್ಯಾಟ್ಸ್ಮನ್ ದಿನೇಶ್ ಚಾಂದಿಮಾಲ್ ಅವರನ್ನು ಕೈ ಬಿಡಲಾಗಿದೆ.
ಗಾಯದ ಸಮಸ್ಯೆ ಕಾರಣ ವಿಶ್ರಾಂತಿಯಲ್ಲಿದ್ದ ಸ್ಟಾರ್ ಆಲ್ರೌಂಡರ್ ಏಂಜಲೊ ಮ್ಯಾಥ್ಯೂಸ್ ಮರಳಿದ್ದಾರೆ. ಜೊತೆಗೆ ಆರಂಭಿಕ ಬ್ಯಾಟ್ಸ್ಮನ್ಗಳಾದ ಅವಿಷ್ಕ ಫರ್ನಾಂಡೊ ಮತ್ತು ಲಾಹಿರು ತಿರಿಮನ್ನೆ ಕೂಡ ತಂಡದಲ್ಲಿ ಮರಳಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ನಾಯಕ ಹಾಗೂ ಆರಂಭಿಕ ಬ್ಯಾಟ್ಸ್ಮನ್ ದಿಮುತ್ ಕರುಣಾರತ್ನೆಗೆ ಈ ಆಟಗಾರರಲ್ಲಿ ಒಬ್ಬರು ಜತೆಯಾಗಲಿದ್ದಾರೆ.
ಶ್ರೀಲಂಕಾ ತಂಡ ಮೇ 18 ಮತ್ತು 21ರಂದು ಐರ್ಲೆಂಡ್ ವಿರುದ್ಧ ಪೂರ್ವ ಸಿದ್ಧತಾ ಪಂದ್ಯಗಳನ್ನಾಡಲಿದ್ದು, ಬಳಿಕ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಎದುರು ಅಭ್ಯಾಸ ಪಂದ್ಯಗಳನ್ನಾಡಲಿದೆ. 1996ರ ವಿಶ್ವ ಚಾಂಪಿಯನ್ಸ್ ಜೂನ್ 1ರಂದು ನ್ಯೂಜಿಲೆಂಡ್ ಎದುರು ತನ್ನ ವಿಶ್ವ ಕಪ್ ಅಭಿಯಾನ ಆರಂಭಿಸಲಿದೆ.
ವಿಶ್ವ ಕಪ್ಗೆ ಶ್ರೀಲಂಕಾದ ಪ್ರಾಥಮಿಕ ತಂಡ
ದಿಮುತ್ ಕರುಣಾರತ್ನೆ (ನಾಯಕ), ಅವಿಷ್ಕ ಫರ್ನಾಂಡೊ, ಲಾಹಿರು ತಿರಿಮನ್ನೆ, ಕುಶಲ್ ಪೆರೆರಾ (ವಿಕೆಟ್ಕೀಪರ್), ಕುಶಲ್ ಮೆಂಡಿಸ್, ಧನಂಜಯ ಡಿ'ಸಿಲ್ವಾ, ಜೀವನ್ ಮೆಂಡಿಸ್, ಮಲಿಂಡಾ ಸಿರಿವರ್ಧನ, ಏಂಜಲೊ ಮ್ಯಾಥ್ಯೂಸ್, ತಿಸಾರ ಪೆರೆರಾ, ಇಸುರು ಉದಾನ, ಲಸಿತ್ ಮಾಲಿಂಗ, ಸುರಂಗ ಲಕ್ಮಲ್, ಜೆಫ್ರಿ ವಾಂಡರ್ಸ್ಸೆ, ನುವಾನ್ ಪ್ರದೀಪ್.
ಸ್ಟ್ಯಾಂಡ್ ಬೈಗಳು: ಒಶಾದ ಫರ್ನಾಂಡೊ, ಕಸುನ್ ರಜಿತಾ, ವಣಿಂಧು ಹಸರಂಗ ಮತ್ತು ಏಂಜಲೊ ಪೆರೆರಾ.