
ಬೆಂಗಳೂರು, ಮಾರ್ಚ್ 31: ಟೀಮ್ ಇಂಡಿಯಾದ ಮಾಜಿ ನಾಯಕ, ಕನ್ನಡಿಗ ಅನಿಲ್ ಕುಂಬ್ಳೆ ಕೂಡ ಕೊರೊನಾವೈರಸ್ ವಿರುದ್ಧದ ಹೊರಾಟಕ್ಕೆ ತನ್ನ ನೆರವಿತ್ತಿದ್ದಾರೆ. ಕೋವಿಡ್-19 ಹತ್ತಿಕ್ಕುವುದಕ್ಕಾಗಿ ಸ್ಪಿನ್ ಮಾಂತ್ರಿಕ ಕುಂಬ್ಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪರಿಹಾರ ನಿಧಿಗೆ ಧನ ಸಹಾಯ ಮಾಡಿದ್ದಾರೆ.
ವಿಶ್ವವನ್ನೇ ಆತಂಕಕ್ಕೀಡುವ ಮಾಡಿರುವ ಮಾರಕ ಕೊರೊನಾವೈರಸ್ ಸೋಂಕು ಜಗತ್ತಿನಲ್ಲಿ 806080 ಮಂದಿಗೆ ತಗುಲಿದೆ. 39575 ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲೂ 1205 ಮಂದಿಗೆ ಸೋಂಕು ಹಬ್ಬಿದ್ದು, 32 ಮಂದಿ ಸಾವಿಗೀಡಾಗಿದ್ದಾರೆ.
ಕೊರೊನಾ ವಿರುದ್ಧದ ಹೋರಾಟಕ್ಕೆ ನೆರವಿತ್ತಿರುವ ಬಗ್ಗೆ ಟ್ವೀಟ್ ಮಾಡಿರುವ ಕುಂಬ್ಳೆ, 'ಕೊರೊನಾವನ್ನು ಬೌಲ್ ಔಟ್ ಮಾಡಲು ನಾವೆಲ್ಲರೂ ಒಗ್ಗಟ್ಟಾಗಬೇಕಿದೆ. ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ನಾನು ಪ್ರಧಾನಿ ಮತ್ತು ಮುಖ್ಯಮಂತ್ರಿ ನಿಧಿಗೆ ದೇಣಿಗೆ ನೀಡಿದ್ದೇನೆ. ದಯವಿಟ್ಟು ಮನೆಯಲ್ಲೇ ಇದ್ದು ಸೋಂಕಿನಿಂದ ರಕ್ಷಿಸಿಕೊಳ್ಳಿ' ಎಂದು ಬರೆದುಕೊಂಡಿದ್ದಾರೆ.
ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ಭಾರತದ ಅನೇಕ ಕ್ರೀಡಾಪಟುಗಳು ನೆರವಿತ್ತಿದ್ದಾರೆ. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿ, ಸುರೇಶ್ ರೈನಾ, ಅಜಿಂಕ್ಯ ರಹಾನೆ, ಬಿಸಿಸಿಐ, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ಪಿವಿ ಸಿಂಧು, ರೋಹಿತ್ ಶರ್ಮಾ, ಯೂಸುಫ್ ಪಠಾಣ್-ಇರ್ಫಾನ್ ಪಠಾಣ್ ಮೊದಲಾದವರು ಸಹಾಯ ಮಾಡಿದ್ದಾರೆ.