ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್ನಲ್ಲಿ ಮತ್ತೊಂದು ಅಮೋಘ ಗೆಲುವು ಸಾಧಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಸರ್ವಾಂಗೀಣ ಪ್ರದರ್ಶನ ನೀಡಿದ್ದು ದಕ್ಷಿಣ ಆಫ್ರಿಕಾ ತಂಡವನ್ನು ಭಾರೀ ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಶತಕವನ್ನು ಸಿಡಿಸಿದ್ದು ದಾಖಲೆಯ 49ನೇ ಏಕದಿನ ಶತಕವನ್ನು ಸಿಡಿಸಿದಂತಾಗಿದೆ. ಕೊಹ್ಲಿ ತಮ್ಮ 35ನೇ ಹುಟ್ಟುಹಬ್ಬದಂದೇ ಈ ಶತಕ ಸಿಡಿಸಿ ಮತ್ತಷ್ಟು ಸ್ಮರಣೀಯವಾಗಿಸಿಕೊಂಡರು.
ವಿರಾಟ್ ಕೊಹ್ಲಿಯ ಈ ದಾಖಲೆಗೆ ಎಲ್ಲೆಡೆಯಿಂದ ಭಾರೀ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಮಾಜಿ ಕೋಚ್ ಅನಿಲ್ ಕುಂಬ್ಳೆ ಕೂಡ ವಿರಾಟ್ ಕೊಹ್ಲಿ ಆಟವನ್ನು ಮುಕ್ತಕಂಠದಿಂದ ಹೊಗಳಿದಿದ್ದಾರೆ. ಅಲ್ಲದೆ ಕೊಹ್ಲಿಯ ಒಟ್ಟಾರೆ ವೃತ್ತಿ ಜೀವನದ ಮೇಲಿನ ಅವರ ಬದ್ಧತೆಯನ್ನು ಕೊಂಡಾಡಿದ್ದಾರೆ.

"ವಿರಾಟ್ ಕೊಹ್ಲಿ ಅವರ ಈವರೆಗಿನ ವೃತ್ತಿ ಜೀವನ ನಿಜಕ್ಕೂ ಅದ್ಭುತ. ಅದರಲ್ಲೂ ಏಕದಿನ ಕ್ರಿಕೆಟ್ನಲ್ಲಿ ಬಹುತೇಕ 60ರ ಸನಿಹದಲ್ಲಿ ಅವರ ಸರಾಸರಿ ಇರುವುದು ಹಾಸ್ಯಾಸ್ಪದ. ಆತ 90ಕ್ಕೂ ಅಧಿಕ ಸ್ಟ್ರೈಕ್ರೇಟ್ನಲ್ಲಿ ಬಲಿಷ್ಠ ವಾಗಿ ಮುನ್ನುಗ್ಗುತ್ತಾರೆ. ಸಂಪೂರ್ಣ 50 ಓವರ್ ಆಡುವವರೆಗೂ ಆತನಲ್ಲಿ ರನ್ ದಾಹ ಇರುವುದನ್ನು ನೀವು ಕಾಣಬಹುದು" ಎಂದಿದ್ದಾರೆ ಅನಿಲ್ ಕುಂಬ್ಳೆ.
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 24 ಎಸೆತಗಳಲ್ಲಿ 40 ರನ್ ಬಾರಿಸಿ ವಿಕೆಟ್ ಕಳೆದುಕೊಂಡ ಬಳಿಕ ಹಾಗೂ ಶುಬ್ಮನ್ ಗಿಲ್ ಔಟಾದ ನಂತರ ಒತ್ತಡವನ್ನು ಅದ್ಭಿತವಾಗಿ ನಿಭಾಯಿಸಿದರು ಎಂದು ಕುಂಬ್ಳೆ ಹೇಳಿದ್ದಾರೆ. ಶ್ರೇಯಸ್ ಐಯ್ಯರ್ ಜೊತೆಗೆ ಸೇರಿಕೊಂಡು ಕೊಹ್ಲಿ 134 ರನ್ಗಳ ಅದ್ಭುತ ಜೊತೆಯಾಟದಲ್ಲಿ ಭಾಗುಯಾದರು. ಐಯ್ಯರ್ ಈ ಪಂದ್ಯದಲ್ಲಿ 77 ರನ್ಗಳ ಕೊಡುಗೆ ನೀಡಿ ಗಮನಸೆಳೆದಿದ್ದಾರೆ.
"ಆತ ಈ ಹಿಂದೆ ಯಾವ ರೀತಿಯಲ್ಲಿ ಆಡುತ್ತಿದ್ದರೀ ಅದೇ ರೀತಿಯಲ್ಲಿ ಆಡುತ್ತಿರುವುದನ್ನು ನೋಡುತ್ತಿದ್ದೇವೆ. ಈ ಬಾರಿ ಆತ ಅದ್ಭುತವಾದ ಇನ್ನಿಂಗ್ಸ್ ಆಡಿದ್ದರು. ಇದು ಭಾರತಕ್ಕೆ ಬಹಳ ಅಗತ್ಯವಾಗಿತ್ತು. ರೋಹಿತ್ ಶರ್ಮಾ ಅವರಿಂದ ಉತ್ತಮ ಆರಂಭ ಪಡೆದರು ಕೂಡ ಕೊಹ್ಲಿ ಒತ್ತಡವನ್ನು ಅನುಭವಿಸಬೇಕಾಯಿತು. ಪಿಚ್ನಲ್ಲಿ ಸಾಕಷ್ಟು ಏರಿಳಿತಗಳು ಇದ್ದ ಕಾರಣ ಇಲ್ಲಿ ಬ್ಯಾಟಿಂಗ್ ನಡೆಸುವುದು ಸುಲಭವಾಗಿರಲಿಲ್ಲ" ಎಂದಿದ್ದಾರೆ ಅನಿಲ್ ಕುಂಬ್ಳೆ.
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಭರ್ಜರಿ ಶತಕ ಹಾಗೂ ಬೌಲಿಂಗ್ ವಿಭಾಗದಲ್ಲಿ ರವೀಂದ್ರ ಜಡೇಜಾ ಅವರ ಐದು ವಿಕೆಟ್ಗಳ ಗೊಂಚಲಿನ ಕಾರಣದಿಂದಾಗಿ 243 ರನ್ಗಳ ಅಂತರದ ಬೃಹತ್ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ 8ನೇ ಗೆಲುವು ತನ್ನದಾಗಿಸಿಕೊಂಡಿದ್ದು ಕೊನೆಯ ಒಂದು ಲೀಗ್ ಪಂದ್ಯ ಮಾತ್ರ ಭಾರತ ತಂಡಕ್ಕೆ ಉಳಿದುಕೊಂಡಿದೆ. ಕೊನೆಯ ಲೀಗ್ ಪಂದ್ಯದಲಕ್ಲಿ ಭಾರತಕ್ಕೆ ನೆದರ್ಲೆಂಡ್ಸ್ ತಂಡ ಎದುರಾಳಿಯಾಗಿರಲಿದ್ದು ಅಜೇಯವಾಗಿಉ ಸೆಮಿಫೈನಲ್ಗೆ ಪ್ರವೇಶಿಸುದು ಭಾರತದ ಗುರಿಯಾಗಿದೆ.