ಮುಂಬೈ, ಅ.05: ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಬಾಂಧವ್ಯದ ನಡುವೆ ಕಪ್ಪುಚುಕ್ಕೆಯಾದ 'ಮಂಕಿ ಗೇಟ್' ಪ್ರಕರಣದ ಬಗ್ಗೆ ಟೀಂ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ ಮತ್ತೊಮ್ಮೆ ಸ್ಮರಿಸಿಕೊಂಡಿದ್ದಾರೆ. ರಿಕಿ ಪಾಂಟಿಂಗ್ ಹಾಗೂ ನಾನು ಈ ಪ್ರಕರಣವನ್ನು ಅಂದೇ ಮುಗಿಸಬಹುದಿತ್ತು ಎಂದಿದ್ದಾರೆ.
2008ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಹಾಗೂ ಆಲ್ ರೌಂಡರ್ ಆಂಡ್ರ್ಯೂ ಸೈಮಂಡ್ಸ್ ನಡುವೆ ಕಿತ್ತಾಟ, ಬೈಯ್ದಾಟದ ಪ್ರಕರಣವನ್ನು ಎಳೆಯುವ ಬದಲು ಆಸ್ಟ್ರೇಲಿಯಾದ ನಾಯಕ ರಿಕಿ ಪಾಂಟಿಂಗ್ ಹಾಗೂ ನಾನು(ಅಂದಿನ ನಾಯಕರಾಗಿದ್ದರು) ಕುಳಿತು ಚರ್ಚಿಸಿ ಬಗೆಹರಿಸಬಹುದಾಗಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ಸಿಡ್ನಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಹರ್ಭಜನ್ ಸಿಂಗ್ ಅವರು ತಮ್ಮನ್ನು 'ಮಂಕಿ' ಎಂದು ಕರೆದರು. ಜನಾಂಗೀತ ನಿಂದನೆ ಮಾಡಿದರು ಎಂದು ಸೈಮಂಡ್ಸ್ ದೂರು ನೀಡಿದ್ದರು. ಈ ಪ್ರಕರಣಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡಾ ಸಾಕ್ಷಿಯಾಗಿದ್ದರು.

ಆದರೆ, ಟೀಂ ಇಂಡಿಯಾದ ಆಟಗಾರರು ಆರೋಪವನ್ನು ತಳ್ಳಿ ಹಾಕಿ, ಹರ್ಭಜನ್ ಅವರು 'ಮಾ ಕಿ' ಎಂದು ಹಿಂದಿಯಲ್ಲಿ ಹೇಳಿದರು ಅಷ್ಟೇ ಎಂದಿದ್ದರು. ಮ್ಯಾಚ್ ರೆಫ್ರಿ ಮೈಕ್ ಪ್ರಾಕ್ಟರ್ ಅವರು ಹರ್ಭಜನ್ ಸಿಂಗ್ ಅವರಿಗೆ ಮೂರು ಪಂದ್ಯಗಳ ನಿಷೇಧ ಹೇರಿದರು. ಇದರಿಂದ ಕೋಪಗೊಂಡ ಟೀಂ ಇಂಡಿಯಾ ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ವಾಪಸ್ ತೆರಳುವ ಬೆದರಿಕೆ ಹಾಕಿತ್ತು.
ಕೊನೆಗೆ ಟೂರ್ನಿ ಕೊನೆಗೊಂಡರೂ ಈ ಒಂದು ಪ್ರಕರಣದ ಬಗ್ಗೆ ವಿಷಾದವಿದೆ. ಅದರೆ, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ರಂಥ ದಿಗ್ಗಜರ ಜೊತೆ ಆಡಿದ ಸವಿ ನೆನಪುಗಳಿವೆ ಎಂದು ದಿಲಿಪ್ ಸರ್ದೇಸಾಯಿ ಸ್ಮಾರಕ ಉಪನ್ಯಾಸದ ಸಂದರ್ಭದಲ್ಲಿ ಹೇಳಿದರು.
ನಾಯಕತ್ವದ ಬಗ್ಗೆ: ನಾಯಕ ಆಕ್ರಮಣಕಾರಿ ಮನೋಭಾವ ಹೊಂದಿರಬೇಕು ಅದರೆ, ಇದು ಆಟದಲ್ಲಿ ತೋರಿಸಬೇಕು. ಟಿ20, ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡಗಳಿಗೆ ಪ್ರತ್ಯೇಕ ನಾಯಕರನ್ನು ಹೊಂದುವುದು ತಪ್ಪಲ್ಲ, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಈ ವ್ಯವಸ್ಥೆಯ ಲಾಭ ಪಡೆದುಕೊಂಡಿವೆ ಎಂದಿದ್ದಾರೆ.
ಅನಿಲ್ ಕುಂಬ್ಳೆ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 619 ವಿಕೆಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ 337 ವಿಕೆಟ್ ಪಡೆದುಕೊಂಡಿದ್ದಾರೆ. ಧೋನಿ ಹಾಗೂ ಕೊಹ್ಲಿ ಅವರ ನಾಯಕತ್ವದ ವೈಖರಿಯಲ್ಲಿ ವ್ಯತ್ಯಾಸವಿದೆ ಹೀಗಾಗಿ ಆಟಗಾರರಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಲಿದೆ ಎಂದು ಕುಂಬ್ಳೆ ಅಭಿಪ್ರಾಯಪಟ್ಟರು. (ಐಎಎನ್ಎಸ್)