ಬೆಂಗಳೂರು, ಡಿ.1: ಇಂಡಿಯನ್ ಪ್ರಿಮಿಯರ್ ಲೀಗ್ ನ ಪ್ರಮುಖ ತಂಡ ಮುಂಬೈ ಇಂಡಿಯನ್ಸ್ ನ ಉತ್ತಮ ಹುದ್ದೆಯನ್ನು ಅನಿಲ್ ಕುಂಬ್ಳೆ ತೊರೆದಿರುವುದು ಕ್ರೀಡಾಭಿಮಾನಿಗಳಿಗೆ ಗೊತ್ತಿರುತ್ತದೆ. ಆದರೆ, ಯಶಸ್ಸಿನ ಹಾದಿಯಲ್ಲಿರುವ ತಂಡವನ್ನು ಕುಂಬ್ಳೆ ಅವರು ಬಿಡುತ್ತಿರುವುದೇಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದ ಇಲ್ಲಸಲ್ಲದ ವರದಿಗಳಲ್ಲಿ ಕುಂಬ್ಳೆ ಅವರು ಅಲ್ಲಗೆಳೆದು ಟ್ವೀಟ್ ಮಾಡಿದ್ದಾರೆ.
ಸೋಮವಾರದಂದು ಮುಂಬೈ ಇಂಡಿಯನ್ಸ್ ತಂಡ ಪತ್ರಿಕಾ ಪ್ರಕಟಣೆ ಹೊರಡಿಸಿ ಚೀಫ್ ಮೆಂಟರ್ ಸ್ಥಾನದಿಂದ ಅನಿಲ್ ಕುಂಬ್ಳೆ ಅವರು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹುದ್ದೆಯನ್ನು ತೊರೆಯುತ್ತಿದ್ದಾರೆ ಎನ್ನಲಾಗಿತ್ತು.
ಇದನ್ನು ಉಲ್ಲೇಖಿಸಿ ಕೆಲ ಪ್ರಮುಖ ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮಗಳು ಕುಂಬ್ಳೆ ಅವರು ಮುಂಬೈ ಇಂಡಿಯನ್ಸ್ ತೊರೆಯಲು 'ಸ್ವಹಿತಾಸಕ್ತಿ' ಯೇ ಕಾರಣ ಎಂದು ಪ್ರಕಟಿಸಿದ್ದರು. ಅದರೆ, ಇದನ್ನು ಅಲ್ಲಗೆಳೆದಿರುವ ಕುಂಬ್ಳೆ ಅವರು ಡಿಸೆಂಬರ್ 1 ರಂದು ಟ್ವಿಟ್ಟರ್ ನಲ್ಲಿ ಇದು ಸತ್ಯಕ್ಕೆ ದೂರವಾದ ಸುದ್ದಿ, ರಬ್ಬೀಶ್ ನಾನು ಸ್ವಹಿತಾಸಕ್ತಿಯಿಂದ ತಂಡವನ್ನು ತೊರೆದಿಲ್ಲ, ಇದು ಕಾರಣವಲ್ಲ ಎಂದಿದ್ದಾರೆ.
ಕುಂಬ್ಳೆ ಅವರ ಮಾರ್ಗದರ್ಶನದಲ್ಲಿ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಹಾಗೂ ಚಾಂಪಿಯನ್ಸ್ ಲೀಗ್ ಟ್ವೆಂಟಿ 20 ಪ್ರಶಸ್ತಿ ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
'ನಾನು ಕ್ರಿಕೆಟ್ ನ ಇತರೆ ಸಾಧ್ಯತೆಗಳತ್ತ ಗಮನ ಹರಿಸುತ್ತಿದ್ದೇನೆ. ಹೀಗಾಗಿ ಮುಂಬೈ ಇಂಡಿಯನ್ಸ್ ನ ಚೀಫ್ ಮೆಂಟರ್ ಹುದ್ದೆಯನ್ನು ತೊರೆಯುತ್ತಿದ್ದೇನೆ. ಅಂಬಾನಿ ಕುಟುಂಬ ಮುಖ್ಯವಾಗಿ ಶ್ರೀಮತಿ ನೀತಾ ಅಂಬಾನಿ, ಆಕಾಶ್ ಅಂಬಾನಿ ಹಾಗೂ ನಿಖಿಲ್ ಮೆಸ್ವಾನಿ ಅವರ ಬೆಂಬಲದಿಂದ ನಾವು ಹೆಚ್ಚಿನ ಯಶಸ್ಸು ಕಾಣಲು ಸಾಧ್ಯವಾಯಿತು' ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)