ದುಬೈ, ಜೂನ್ 10: ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರ ಅನಿಲ್ ಕುಂಬ್ಳೆಯವರನ್ನು ಅದೇ ಹುದ್ದೆಯಲ್ಲಿ ಕೆಲ ದಿನಗಳ ಕಾಲ ಮುಂದುವರಿಸಲು ಭಾರತೀಯ ಕ್ರಿಕೆಟ್ ಸಂಸ್ಥೆ (ಬಿಸಿಸಿಐ) ಚಿಂತನೆ ನಡೆಸಿದೆ.
ದುಬೈನಲ್ಲಿ ಬಿಸಿಸಿಐನ ಮುಖ್ಯ ಕಾರ್ಯ ನಿರ್ವಾಹಕ ರಾಹುಲ್ ಜೊಹ್ರಿ ನೇತೃತ್ವದಲ್ಲಿ ನಡೆದ ಬಿಸಿಸಿಐ ಸಲಹಾ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ಸದ್ಯಕ್ಕೆ ಭಾರತೀಯ ಪುರುಷರ ಕ್ರಿಕೆಟ್ ತಂಡವು ಲಂಡನ್ ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದೆ.

ಈ ಹಿನ್ನೆಲೆಯಲ್ಲಿ ನೂತನ ಕೋಚ್ ಆಯ್ಕೆ ಹೊಣೆ ಹೊತ್ತಿರುವ ಬಿಸಿಸಿಐ ಸಲಹಾ ಮಂಡಳಿಗೆ ಅದು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸೂಚನೆ ನೀಡಿದೆ. ಆನಂತರ, ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ.
ಇದೇ ಮಾಸಾಂತ್ಯಕ್ಕೆ ಕುಂಬ್ಳೆಯವರ ಕೋಚ್ ಸೇವೆಯ ಒಂದು ವರ್ಷದ ಒಪ್ಪಂದ ಮುಕ್ತಾಯವಾಗಲಿದೆ. ಆದರೆ, ಅಷ್ಟರೊಳಗೆ ನೂತನ ಕೋಚ್ ನೇಮಕ ಸಾಧ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಅನಿಲ್ ಕುಂಬ್ಳೆಯವರನ್ನು ಅದೇ ಹುದ್ದೆಯಲ್ಲಿ ಕೆಲ ದಿನಗಳ ಕಾಲ ಮುಂದುವರಿಸುವ ಬಗ್ಗೆ ಬಿಸಿಸಿಐ ಆಲೋಚಿಸಿದೆ.
ಜೂನ್ 26ರಂದು ಬಿಸಿಸಿಐನ ವಾರ್ಷಿಕ ಮಹಾಸಭೆ ನಡೆಯಲಿದ್ದು ಅಂದು ಕುಂಬ್ಳೆಯವರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.