ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಆಡಿದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ರನ್ ಗಳಿಸುವಲ್ಲಿ ಹಿಂದೆ ಉಳಿದಿದ್ದರು. ಇಂತಹ ಪರಿಸ್ಥಿತಿಯಲ್ಲಿ ಫಾರ್ಮ್ಗೆ ಮರಳಲು ವಿರಾಟ್ ಕೊಹ್ಲಿ ಮತ್ತೊಮ್ಮೆ ದೇವರ ಮೊರೆ ಹೋಗಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಇಬ್ಬರು ಮಕ್ಕಳೊಂದಿಗೆ ವೃಂದಾವನಕ್ಕೆ ಭೇಟಿ ನೀಡಿದ್ದಾರೆ.
ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ವೃಂದಾವನದಲ್ಲಿ ಪ್ರೇಮಾನಂದ ಜಿ ಮಹಾರಾಜ್ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದಿದ್ದಾರೆ. ವಿರಾಟ್ ಕುಟುಂಬದ ಫೋಟೋಗಳು ಮತ್ತು ವೀಡಿಯೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ವೃಂದಾವನದಲ್ಲಿ ಮಹಾರಾಜ್ ಜಿಯವರ ಆಶೀರ್ವಾದವನ್ನು ಪಡೆದ ವಿರಾಟ್ ಕೊಹ್ಲಿ ಶಾಲು ಹೊದಿಸಿ, ಅನುಷ್ಕಾ ಶರ್ಮಾ ಚುನಾರಿ ತೊಡಿಸಿ ಗೌರವಿಸಲಾಗಿದೆ. ಈ ವೇಳೆ ವಿಶೇಷವಾಗಿ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಪುತ್ರಿ ವಾಮಿಕಾ ಹಾಗೂ ಮಗ ಅಕಾಯ್ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಇಬ್ಬರ ಮುಖವನ್ನೂ ಮರೆಮಾಚಲಾಗಿದೆ. ಯಾಕೆಂದರೆ ಇಬ್ಬರಿಗೂ ತಮ್ಮ ಮಕ್ಕಳನ್ನು ಮಾಧ್ಯಮದ ಮುಂದೆ ತರಲು ಇಷ್ಟವಿಲ್ಲ. ಹೀಗಾಗಿ ಸ್ಟಾರ್ ದಂಪತಿ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ.
ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಉತ್ತರಾಖಂಡದ ಕೈಂಚಿ ಧಾಮ್ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಸ್ಟಾರ್ ದಂಪತಿ ನೀಮ್ ಕರೋಲಿ ಬಾಬಾ ಅವರನ್ನು ಭೇಟಿ ಮಾಡಲು ಬಂದಿದ್ದರು. ಈ ಹಿಂದೆ ವಿರಾಟ್ಗೆ ದೇವರಲ್ಲಿ ನಂಬಿಕೆ ಮತ್ತು ಭಕ್ತಿ ಕಡಿಮೆಯಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಅವರು ಹೆಚ್ಚಾಗಿ ದೇವರ ಆರಾಧನೆಯಲ್ಲಿ ಮುಳಗಿ ಹೋಗಿದ್ದಾರೆ.
ಈ ವೇಳೆ ಮಹಾರಾಜ್ ಜಿಯವರೊಂದಿಗೆ ಮಾತನಾಡಿದ ಅನುಷ್ಕಾ, ನಾವು ಕಳೆದ ಬಾರಿ ಇಲ್ಲಿಗೆ ಬಂದಾಗ, ನನ್ನ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳಿದ್ದವು. ನಾನು ನಿಮ್ಮನ್ನು ಕೇಳಬೇಕೆಂದು ಭಾವಿಸಿದ್ದು, ಆದರೆ, ಅಂದು ಹಲವು ಜನರು ಇಲ್ಲಿ ಕುಳಿತಿದ್ದರು. ಅಲ್ಲದೆ, ಅವರೆಲ್ಲರೂ ಒಂದಲ್ಲ ಒಂದು ಪ್ರಶ್ನೆಗಳನ್ನು ಕೇಳುತ್ತಿದ್ದರು. ನಾನು ನಿಮ್ಮೊಂದಿಗೆ ಮನಸ್ಸಿನಲ್ಲಿ ಮಾತನಾಡುತ್ತಿರುವಂತೆ ಭಾಸವಾಗುತ್ತಿದೆ. ಮರುದಿನ ನಾನು ಏಕಂತ್ ವ್ರತಲಾಪ್ ಕಾರ್ಯಕ್ರಮವನ್ನು ನೋಡುತ್ತಿದೆ. (ಪ್ರೇಮಾನಂದರ ಆನ್ಲೈನ್ ಕಾರ್ಯಕ್ರಮ) ಅಲ್ಲಿ ನನ್ನ ಮನಸ್ಸಿನಲ್ಲಿರುವ ಪ್ರಶ್ನೆಗಳನ್ನೇ ಹಾಕಿದ್ದೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪ್ರೇಮಾನಂದ ಮಹಾರಾಜ್, ನೀನು ತುಂಬಾ ಧೈರ್ಯಶಾಲಿ. ಜಗತ್ತಿನಲ್ಲಿ ಇಷ್ಟೊಂದು ಗೌರವ-ಕೀರ್ತಿ ಇ ಪಡೆದ ನಂತರ ಭಕ್ತಿಮಾರ್ಗಕ್ಕೆ ತಿರುಗುವುದು ತುಂಬಾ ಕಷ್ಟ. ನಿಮ್ಮ ಭಕ್ತಿಗೆ ಖಂಡಿತವಾಗಿಯೂ ಉತ್ತರ ಸಿಗುತ್ತದೆ ಎಂದು ನುಡಿದಿದ್ದಾರೆ.