ಭಾರತ ತಂಡದ ಮಾಜಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಪ್ರಸಕ್ತ ವಿಜಯ್ ಹಜಾರೆ ಟ್ರೋಫಿಯಲ್ಲಿ ಗೋವಾ ಪರ ಆಡುತ್ತಿದ್ದಾರೆ. ಈ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದ್ದಾರೆ. ಒಡಿಶಾ ವಿರುದ್ಧ ಮೂರು ವಿಕೆಟ್ಗಳನ್ನು ಪಡೆಯುವ ಮೂಲಕ ಅರ್ಜುನ್ ತೆಂಡೂಲ್ಕರ್ ತಮ್ಮ ಹೆಸರಿನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಈ ಮೂಲಕ ತಮ್ಮ ತಂದೆ ಸಚಿನ್ ತೆಂಡೂಲ್ಕರ್ ಸಂತಸಕ್ಕೆ ಅರ್ಜುನ್ ತೆಂಡೂಲ್ಕರ್ ಕಾರಣವಾಗಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯ ಒಡಿಶಾ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ವೈಟ್-ಬಾಲ್ ಕ್ರಿಕೆಟ್ನಲ್ಲಿ ತಮ್ಮ 50 ವಿಕೆಟ್ಗಳನ್ನು ಪೂರೈಸಿದ್ದಾರೆ. 2021 ರಲ್ಲಿ ಮುಂಬೈ ಪರ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಅರ್ಜುನ್, ಇದುವರೆಗೆ ಆಡಿದ 41 ವೈಟ್-ಬಾಲ್ ಪಂದ್ಯಗಳಲ್ಲಿ 51 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅರ್ಜುನ್ 17 ಲಿಸ್ಟ್ ಎ ಪಂದ್ಯಗಳಲ್ಲಿ 24 ಬ್ಯಾಟರ್ಗಳನ್ನು ಔಟ್ ಮಾಡಿದ್ದಾರೆ. ಹಾಗೆಯೇ 24 ಟಿ20 ಪಂದ್ಯಗಳಲ್ಲಿ 27 ವಿಕೆಟ್ಗಳನ್ನು ಪಡೆದಿದ್ದಾರೆ.

ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರು ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ ಅರ್ಜುನ್ ಸತತ 5ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಲು ಸಜ್ಜಾಗಿದ್ದಾರೆ.
ಐಪಿಎಲ್ 2025 ರ ಮೆಗಾ ಹರಾಜಿನ ಮುನ್ನ ಐದು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಅರ್ಜುನ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿರಲಿಲ್ಲ. ನಂತರ ಮೆಗಾ ಹರಾಜು ಪ್ರಕ್ರಿಯೆಯ ಎರಡನೇ ದಿನದ ಕೊನೆಯ ಕೆಲವು ನಿಮಿಷಗಳಲ್ಲಿ ಅರ್ಜುನ್ ಅವರಿಗೆ ಮೂಲ ಬೆಲೆಗೆ ಬಿಡ್ ಮಾಡಲಾಗಿತ್ತು. ಅರ್ಜುನ್ ಮೊದಲ ಬಾರಿಗೆ 2021 ರಲ್ಲಿ ಮುಂಬೈ ಸೇರಿದರೆ, 2023 ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದರು. ಅರ್ಜುನ್ ಐಪಿಎಲ್ನಲ್ಲಿ ಮುಂಬೈ ಪರ 3 ವಿಕೆಟ್ಗಳನ್ನು ಹೊಂದಿದ್ದಾರೆ.
ಭಾರತ ಅಂಡರ್-19 ತಂಡದಲ್ಲಿ ಸ್ಥಾನ ಪಡೆಯುವ ಮೊದಲು ಅರ್ಜುನ್ ತೆಂಡೂಲ್ಕರ್ ಜೂನಿಯರ್ ಕ್ರಿಕೆಟ್ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು. ಅರ್ಜುನ್ 2020/21 ಋತುವಿನಲ್ಲಿ ಮುಂಬೈ ಪರ ಹಿರಿಯ ಕ್ರಿಕೆಟ್ ಆಡಿದ್ದರು. ನಂತರ ಅವರು 2022/23 ಋತುವಿಗೂ ಮುನ್ನ ಗೋವಾ ತಂಡಕ್ಕೆ ತೆರಳಿದರು. ಅವರು ಗೋವಾ ಪರ ಪ್ರಥಮ ದರ್ಜೆ ಮತ್ತು ಲಿಸ್ಟ್ ಎ ಪಾದಾರ್ಪಣೆ ಮಾಡಿದರು. ಅರ್ಜುನ್ ರೆಡ್ ಕ್ರಿಕೆಟ್ನಲ್ಲಿ ಉತ್ತಮ ಆರಂಭವನ್ನು ಮಾಡಿದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಇಲ್ಲಿವರೆಗೆ ಅವರು 17 ಪ್ರಥಮ ದರ್ಜೆ ಪಂದ್ಯಗಳಲ್ಲಿ 37 ವಿಕೆಟ್ ಮತ್ತು 532 ರನ್ ಗಳಿಸಿದ್ದಾರೆ.