ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಮೆಗಾ ಹರಾಜು ಪ್ರಕ್ರಿಯೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿದ್ಧತೆ ಮಾಡಿಕೊಳ್ಳುತ್ತಿದೆ. ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಕಳೆದ ಎರಡು ವರ್ಷಗಳ ಹಿಂದೆ ನಡೆದಿದ್ದು, ಈ ಬಾರಿ ಕ್ರಿಕೆಟ್ ಅಭಿಮಾನಿಗಳಿಗೆ ಐಪಿಎಲ್ ಹರಾಜು ಭಾರೀ ಕುತೂಹಲ ಕೆರಳಿಸಿದೆ.
ಮುಂಬರುವ ಐಪಿಎಲ್ 2025ರ ಟೂರ್ನಿಗಾಗಿ ಎಲ್ಲ ಫ್ರಾಂಚೈಸಿಗಳು ಬಲಿಷ್ಠ ತಂಡ ಕಟ್ಟು ಸಜ್ಜಾಗಿವೆ. ಇಂತಹ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ಡಾ. (ನಾಯಕ) ಕೆ ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿಯಲ್ಲಿ ಗೋವಾ ಪರ ಆಡುತ್ತಿರುವ ಅವರು ಬೆಂಕಿ ಬೌಲಿಂಗ್ ಪ್ರದರ್ಶಿಸುವ ಮೂಲಕ ಮಿಂಚಿದ್ದಾರೆ.

ಕ್ಯಾಪ್ಟನ್ ಕೆ ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ಮತ್ತು ಗೋವಾ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕರ್ನಾಟಕದ ಗೆಲುವಿನ ಓಟಕ್ಕೆ ಅರ್ಜುನ್ ತೆಂಡೂಲ್ಕರ್ ಕಡಿವಾಣ ಹಾಕಿದರು. ಅವರು ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಕರ್ನಾಟಕದ ಬ್ಯಾಟರ್ಗಳನ್ನು ಮಂಡಿಯೂರುವಂತೆ ಮಾಡಿದರು. ಆತಿಥೇಯ ತಂಡದ ವಿರುದ್ಧ 5 ಅಥವಾ 6 ಅಲ್ಲ, 9 ವಿಕೆಟ್ಗಳನ್ನು ಕಬಳಿಸಿ ಸಂಚಲನ ಮೂಡಿಸಿದರು.
ಅರ್ಜುನ್ ತೆಂಡೂಲ್ಕರ್ ಅವರ ಪ್ರದರ್ಶನದ ನೆರವಿನಿಂದ ಗೋವಾ ತಂಡ 189 ರನ್ಗಳ ಭರ್ಜರಿ ಜಯ ದಾಖಲಿಸಿತು. ಎರಡೂ ಇನ್ನಿಂಗ್ಸ್ಗಳಲ್ಲಿ ಅರ್ಜುನ್ ತಮ್ಮ ಬೆಂಕಿ ಬೌಲಿಂಗ್ ಮೂಲಕ ಒಬ್ಬರ ಹಿಂದೆ ಒಬ್ಬರಂತೆ ಕರ್ನಾಟಕ ತಂಡದ ಬ್ಯಾಟರ್ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು.
ಕರ್ನಾಟಕಕ ವಿರುದ್ಧ ಪಂದ್ಯದ ಎರಡೂ ಇನಿಂಗ್ಸ್ಗಳಲ್ಲಿ ಎಡಗೈ ವೇಗಿ ಅರ್ಜುನ್ ಒಟ್ಟು 26.3 ಓವರ್ಗಳು ಬೌಲಿಂಗ್ ಮಾಡಿದರು. ಈ ವೇಳೆ ಅವರು ಕೇವಲ 87 ರನ್ಗಳನ್ನು ನೀಡಿ 9 ವಿಕೆಟ್ಗಳನ್ನು ಕಬಳಿಸಿದರು. ಮೊದಲ ಇನಿಂಗ್ಸ್ನಲ್ಲಿ 13 ಓವರ್ ಬೌಲಿಂಗ್ ಮಾಡಿದ ಅವರು 41 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಎರಡನೇ ಇನ್ನಿಂಗ್ಸ್ನಲ್ಲಿ 13.3 ಓವರ್ ಬೌಲಿಂಗ್ ಮಾಡುವ ಮೂಲಕ 46 ರನ್ ನೀಡಿ 4 ವಿಕೆಟ್ ಪಡೆದು ಗೋವಾ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಅರ್ಜುನ್ ಅವರ ಈ ಪ್ರದರ್ಶನವು ಐಪಿಎಲ್ 2025ರ ಮೆಗಾ ಹರಾಜಿನ ಮೇಲೆ ಆಳವಾದ ಪರಿಣಾಮ ಬೀರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. 2023ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಪದಾರ್ಪಣೆ ಮಾಡಿದ ಅರ್ಜುನ್ ಅವರಿಗೆ ಅಷ್ಟೊಂದು ಅವಕಾಶಗಳು ಸಿಕ್ಕಿರಲಿಲ್ಲ. ಆದರೆ ಈ ಬಾರಿ ಪ್ರತಿ ತಂಡವೂ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯ ಇರುವುದರಿಂದ ಅವರನ್ನು ಮುಂಬೈ ತಂಡದಿಂದ ಕೈ ಬಿಡಬಹುದು. ಆಗ ಯಾವ ತಂಡವು ಅವರನ್ನು ಬಿಡ್ ಮಾಡಬಹುದು ಎಂಬುದು ಕುತೂಹಲ ಮೂಡಿಸಿದೆ.