
ದಿಗ್ಗಜ ಕ್ರಿಕೆಟಿಗ ಸಚಿನ್ ತಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಈ ಬಾರಿಯ ಆವೃತ್ತಿಯಲ್ಲಿ ಗೋವಾ ಪರವಾಗಿ ಆಡುತ್ತಿದ್ದು ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಶುಕ್ರವಾರ ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅರ್ಜುನ್ ತಂಡೂಲ್ಕರ್ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ತಮ್ಮ ವೃತ್ತಿ ಜೀವನದ ಅತ್ಯುತ್ತಮ ಟಿ20 ಸಾಧನೆ ಮಾಡಿದ್ದಾರೆ.
ಈ ಪಂದ್ಯದಲ್ಲಿ ಹೈದರಾಬಾದ್ ತಂಡ ಅರ್ಜುನ್ ತೆಂಡೂಲ್ಕರ್ ದಾಳಿಗೆ ಅಕ್ಷರಶಃ ನಲುಗಿತ್ತು. ಉತ್ತಮ ಸ್ಥಿತಿಯಲ್ಲಿದ್ದ ಹೈದರಾಬಾದ್ ತಂಡಕ್ಕೆ ಆಘಾತ ನೀಡುವಲ್ಲಿ ಅರ್ಜುನ್ ಯಶಸ್ವಿಯಾದರು . ತಮ್ಮ ನಾಲ್ಕು ಓವರ್ಗಳ ಕೋಟಾದಲ್ಲಿ ಅರ್ಜುನ್ ಕೇವಲ 10 ರನ್ಗಳನ್ನು ಮಾತ್ರವೇ ನೀಡಿದ್ದು ಒಂದು ಮೇಡನ್ ಓವರ್ ಹಾಗೂ ನಾಲ್ಕು ವಿಕೆಟ್ ಸಂಪಾದಿಸಿದ್ದಾರೆ. ಕೇವಲ 2.50 ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟು ಅದ್ಭುತ ಯಶಸ್ಸು ಸಾಧಿಸಿದರು.
ಅರ್ಜುನ್ ತೆಂಡುಲ್ಕರ್ ಅವರ ಅಮೋಘ ಬೌಲಿಂಗ್ ದಾಳಿಯ ಮಧ್ಯೆ ಹೈದರಾಬಾದ್ ತಂಡ ಗೋವಾ ತಂಡಕ್ಕೆ ಸವಾಲಿನ ಗುರಿ ನಿಗದಿಪಡಿಸುವಲ್ಲಿ ಯಶಸ್ವಿಯಾಗಿದೆ. ಹೈದರಾಬಾದ್ ನಾಯಕ ತನ್ಮಯ್ ಅಗರ್ವಾಲ್ 55 ರನ್ಗಳಿಸಿದರೆ ತಿಲಕ್ ವರ್ಮಾ 62 ರನ್ಗಳಿಸಿ ತಂಡಕ್ಕೆ ನೆರವಾದರು. ಹೀಗಾಗಿ ನಿಗದಿತ 20 ಓವರ್ಗಳಲ್ಲಿ ಹೈದರಾಬಾದ್ ತಂಡ 177 ರನ್ಗಳನ್ನು ಗಳಿಸಲು ಯಶಸ್ವಿಯಾಯಿತು.
ಇನ್ನು ಅರ್ಜುನ್ ತೆಂಡೂಲ್ಕರ್ ಈ ಪಂದ್ಯದಲ್ಲಿ ತಮ್ಮ ಮೊದಲ ಓವರ್ನಲ್ಲಿ ಕೇವಲ 1 ರನ್ ಮಾತ್ರವೇ ನೀಡಿದ್ದರು. ಮೂರನೇ ಓವರನ್ನು ಮೇಡನ್ ಮಾಡಿದ್ದರು. ಇನ್ನು ಡೆತ್ ಓವರ್ನಲ್ಲಿ ಮತ್ತೆ ಬೌಲಿಂಗ್ ದಾಳಿಗೆ ಇಳಿದ ಅರ್ಜುನ್ ಆ ಸಂದರ್ಭದಲ್ಲಿ ಎರಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅರ್ಜುನ್ ಬಲಿಯಾದವರಲ್ಲಿ ತಿಲಕ್ ವರ್ಮಾ, ವಿಕೆಟ್ ಕೀಪರ್ ಪ್ರತೀಕ್ ರೆಡ್ಡಿ, ಬುದ್ಧಿ ರಾಹುಲ್ ಮತ್ತು ಟಿ ರವಿತೇಜ ಸೇರಿದ್ದಾರೆ. ಅರ್ಜುನ್ ತಮ್ಮ 4-ಓವರ್ ಸ್ಪೆಲ್ನಲ್ಲಿ 17 ಡಾಟ್ ಬಾಲ್ಗಳನ್ನು ಬೌಲ್ ಮಾಡಿ ಮಿಂಚಿದ್ದಾರೆ.
ಆದರೆ ಈ ಪಂದ್ಯವನ್ನು ಗೋವಾ 37 ರನ್ಗಳ ಅಂತರದಿಂದ ಸೋತು ನಿರಾಸೆ ಅನುಭವಿಸಿದೆ. 178 ರನ್ಗಳ ಗುರಿಯನ್ನು ಬೆನ್ನಟ್ಟಿದ ಗೋವಾ ಬ್ಯಾಟಿಂಗ್ನಲ್ಲಿ ಎಡವಿತು. 140 ರನ್ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಳ್ಳುವ ಮೂಲಕ ನಿರಾಸೆ ಅನುಭವಿಸಿತು. ಹೈದರಾಬಾದ್ ಪರವಾಗಿ ರವಿ ತೇಜ 4 ವಿಕೆಟ್ ಕಿತ್ತು ಮಿಂಚಿದರು.