ಕ್ರಿಕೆಟ್ ಮೈದಾನದಿಂದ ಹಿಡಿದು ವೈಯಕ್ತಿಕ ಜೀವನದವರೆಗೂ ಹಲವು ವಿವಾದಗಳಿಂದ ಸುತ್ತುವರಿದಿದ್ದ ಬಾಂಗ್ಲಾದೇಶದ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಇದೀಗ ಹೊಸ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಅನುಭವಿ ಆಲ್ರೌಂಡರ್ ಶಕೀಬ್ ಅಲ್ ಹಸನ್ ಬಂಧನಕ್ಕೆ ಢಾಕಾ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. ವರದಿಗಳ ಪ್ರಕಾರ, ಐಎಫ್ಐಸಿ ಬ್ಯಾಂಕ್ಗೆ ಸುಮಾರು 3 ಕೋಟಿ ರೂಪಾಯಿ ಪಾವತಿಸದೆ ವಂಚಿಸಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಚೆಕ್ ಬೌನ್ಸ್ ಪ್ರಕರಣದಲ್ಲಿ ಅವರ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ.
ಶಕೀಬ್ ಅಲ್ ಹಸನ್ ವಿರುದ್ಧ ಢಾಕಾದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜಿಯಾದೂರ್ ರೆಹಮಾನ್ ಅವರು ಅರೆಸ್ಟ್ ವಾರೆಂಟ್ ಆದೇಶ ಹೊರಡಿಸಿದ್ದಾರೆ. ಪ್ರಸ್ತುತ ಶಕೀಬ್ ವಿದೇಶದಲ್ಲಿದ್ದು, ಬಾಂಗ್ಲಾದೇಶಕ್ಕೆ ಮರಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂಸಾಚಾರ ತೀವ್ರಗೊಂಡಾಗ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶ ಬಿಟ್ಟು ಪಲಾಯನ ಮಾಡಿದರು. ಇದಾದ ನಂತರ, ಮಾಜಿ ಅವಾಮಿ ಲೀಗ್ ಸಂಸದ ಶಕೀಬ್ ಅವರ ಹೆಸರು ಕೊಲೆ ಆರೋಪದ ಮೇಲೆ ಕೇಳಿಬಂದಾಗ ಅವರು ವಿದೇಶಕ್ಕೆ ಹಾರಿದರು.

ಕಳೆದ ವರ್ಷ ಡಿಸೆಂಬರ್ 15ರಂದು ಚೆಕ್ ವಂಚನೆ ಪ್ರಕರಣದಲ್ಲಿ ಶಕೀಬ್ ಹೆಸರು ಕೇಳಿಬಂದಿತ್ತು. ಡಿಸೆಂಬರ್ 18 ರಂದು ಪ್ರಾಥಮಿಕ ವಿಚಾರಣೆಯ ಸಂದರ್ಭದಲ್ಲಿ ಜನವರಿ 19 ರ ಮೊದಲು ನ್ಯಾಯಾಲಯಕ್ಕೆ ಹಾಜರಾಗುವಂತೆ ಶಕೀಬ್ಗೆ ತಿಳಿಸಲಾಗಿತ್ತು. ಎರಡು ಪ್ರತ್ಯೇಕ ಚೆಕ್ಗಳ ಮೂಲಕ ಸರಿಸುಮಾರು 41.4 ಮಿಲಿಯನ್ ಟಾಕಾ ಅಂದರೆ ಭಾರತದ ಕರೆನ್ಸಿ ಪ್ರಕಾರ 3 ಕೋಟಿ ರೂಪಾಯಿಗಳನ್ನು ಪಾವತಿಸಬೇಕಾಗಿತ್ತು. ಆದರೆ, ಶಕೀಬ್ ಇದುವರೆಗೂ ಹಣ ಪಾವತಿಸಿಲ್ಲ.
ಈ ಸಂಬಂಧ ಐಎಫ್ಐಸಿ ಬ್ಯಾಂಕ್ ಅಧಿಕಾರಿ ಶಾಹಿಬುರ್ ರೆಹಮಾನ್ ಅವರು ಶಕೀಬ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ, ಬ್ಯಾಂಕಿನ ಪರವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಈ ಪ್ರಕರಣದಲ್ಲಿ ಶಕೀಬ್ ಜೊತೆಗೆ ಅವರ ಒಡೆತನದ ಕಂಪನಿ ಅಲ್ ಹಸನ್ ಆಗ್ರೋ ಫಾರ್ಮ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಘಾಜಿ ಶಹಗೀರ್ ಹುಸೇನ್, ನಿರ್ದೇಶಕ ಇಮ್ದಾದುಲ್ ಹಕ್ ಮತ್ತು ಮಲೈಕರ್ ಬೇಗಂ ಕೂಡ ಭಾಗಿಯಾಗಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಬಾಂಗ್ಲಾದೇಶ ತಂಡದಲ್ಲಿ ಶಕೀಬ್ ಅಲ್ ಹಸನ್ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಕೌಂಟಿ ಪಂದ್ಯದ ವೇಳೆ ಕಾನೂನು ಬಾಹಿರ ಬೌಲಿಂಗ್ ಆಕ್ಷನ್ನಿಂದಾಗಿ ಶಕೀಬ್ ಅವರನ್ನು ಬೌಲಿಂಗ್ ಮಾಡಲು ನಿಷೇಧಿಸಲಾಗಿದೆ. ಈ ಕಾರಣದಿಂದಾಗಿ ಅವರಿಗೆ ಮುಂಬರುವ ಐಸಿಸಿ ಟೂರ್ನಿಯ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.
ಶಕೀಬ್ ಅಲ್ ಹಸನ್ ಭಾರತ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದರು. ಅವರು ಢಾಕಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಲು ಬಯಸಿದ್ದರು. ಆದರೆ ಅವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದರಿಂದ ಭದ್ರತೆಯ ಕಾರಣ ನೀಡಿ ದೇಶಕ್ಕೆ ಮರಳಲು ನಿರಾಕರಿಸಿದ್ದರು. ಹೀಗಾಗಿ ತವರಿನಲ್ಲಿ ವೃತ್ತಿಜೀವನದ ಕೊನೆಯ ಟೆಸ್ಟ್ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ.