ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಅಂತಿಮ ಹಂತಕ್ಕೆ ಬಂತು ನಿಂತಿದೆ. ನಾಳೆ ಅಂದರೆ ಭಾನುವಾರ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಚಾಂಪಿಯನ್ಸ್ ಟ್ರೋಫಿ ಎ ಗುಂಪಿನ ಕೊನೆಯ ಪಂದ್ಯ ನಡೆಯಲಿದೆ. ಉಭಯ ದೇಶಗಳ ನಡುವಿನ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ ಆತಿಥ್ಯ ವಹಿಸಿದೆ. ನ್ಯೂಜಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಬಹುದು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರ ಕಾಲಿನಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಂಡಿತ್ತು.
ನ್ಯೂಜಿಲೆಂಡ್ ವಿರುದ್ಧ ಮೊಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡಿದರೆ, ಬದಲಿ ಬೌಲರ್ ಯಾರು? ಎಂಬ ಪ್ರಶ್ನೆ ಶುರುವಾಗಿದೆ. ನ್ಯೂಜಿಲೆಂಡ್ ಎದುರು ಶಮಿ ಅದ್ಭುತ ಅಂಕಿ-ಅಂಶವನ್ನು ಹೊಂದಿದ್ದಾರೆ. ಹೀಗಾಗಿ ಶಮಿಗೆ ಸಮನಾಗಿ ನ್ಯೂಜಿಲೆಂಡ್ ತಂಡಕ್ಕೆ ಕಾಟ ನೀಡಬಲ್ಲ ಟೀಮ್ ಇಂಡಿಯಾ ವೇಗಿ ಯಾರು? ಎಂಬುದು ಕುತೂಹಲ ಮೂಡಿಸಿದೆ.

ನ್ಯೂಜಿಲೆಂಡ್ ತಂಡದಲ್ಲಿ ಐದು ಆಕ್ರಮಣಕಾರಿ ಬ್ಯಾಟರ್ಗಳು ಇರುವುದರಿಂದ ಟೀಮ್ ಇಂಡಿಯಾ ಪರ ಅನುಭವಿ ವೇಗದ ಬೌಲರ್ ಕಣಕ್ಕಿಳಿಯಬೇಕು. ಇಂತಹ ಪರಿಸ್ಥಿತಿಯಲ್ಲಿ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಟೀಮ್ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಸಾಧ್ಯತೆಯಿದೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಬದಲಿಗೆ ವೇಗಿ ಅರ್ಷದೀಪ್ ಸಿಂಗ್ ಆಡಬಹುದು. ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರೊಂದಿಗೆ ಅರ್ಷದೀಪ್ ಸಿಂಗ್ ಸಾಕಷ್ಟು ಅಭ್ಯಾಸ ಮಾಡಿದ್ದಾರೆ. ಅರ್ಷದೀಪ್ ಸಿಂಗ್ 13 ಓವರ್ಗಳನ್ನು ಬೌಲಿಂಗ್ ಮಾಡಿದ್ದ, ಮೊಹಮ್ಮದ್ ಶಮಿ ಕೇವಲ ಆರು-ಏಳು ಓವರ್ಗಳನ್ನು ಬೌಲ್ ಮಾಡಿದ್ದಾರೆ.
ಫೆಬ್ರವರಿ 23 ರಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೂರನೇ ಓವರ್ ನಂತರ ಮೊಹಮ್ಮದ್ ಶಮಿ ಅವರ ಬಲಗಾಲಿಗೆ ಫಿಸಿಯೋ ಚಿಕಿತ್ಸೆ ನೀಡಬೇಕಾಯಿತು. ಅಭ್ಯಾಸ ಅವಧಿಯಲ್ಲಿ ಆಟಗಾರರನ್ನು ನೋಡಿದರೆ ಭಾರತವು ಸೆಮಿಫೈನಲ್ಗೆ ಮುನ್ನ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಬಹುದು ಎಂಬ ಸೂಚನೆ ಸಿಕ್ಕಿದೆ. ಟೀಮ್ ಇಂಡಿಯಾದಲ್ಲಿ ಬದಲಾವಣೆ ಆಗುತ್ತದೆಯೋ ಇಲ್ಲವೋ ಎಂದು ಹೇಳಲಾಗುವುದಿಲ್ಲ ಎಂದು ಕೆಎಲ್ ರಾಹುಲ್ ಮಾಧ್ಯಮಗಳೊಂದಿಗೆ ಮಾತನಾಡುವಾಗ ಹೇಳಿದ್ದಾರೆ. ಆದರೆ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಬೌಲಿಂಗ್ ತಂಡದಲ್ಲಿ ಬದಲಾವಣೆ ಆಗಬಹುದು ಎಂದು ಸುಳಿವು ನೀಡಿದ್ದಾರೆ.