ಪ್ರೀತಿ ಹಾಗೂ ಆಕ್ರೋಶವನ್ನು ವ್ಯಕ್ತಪಡಿಸುವ ಹಕ್ಕು ಅಭಿಮಾನಿಗಳಿಗಿದೆ: ಅರ್ಶ್ದೀಪ್ ಸಿಂಗ್

ಟೀಮ್ ಇಂಡಿಯಾದ ಯುವ ವೇಗದ ಬೌಲರ್ ಅರ್ಶ್ದೀಪ್ ಸಿಂಗ್ ಭಾರತದ ಪರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ವೇಗಿ. ಐಪಿಎಲ್ನಲ್ಲಿ ನೀಡಿರುವ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ಈಗ ಟೀಮ್ ಇಂಡಿಯಾದಲ್ಲಿಯೂ ಸ್ಥಾನವನ್ನು ಪಡೆದುಕೊಂಡಿದ್ದು ಮಿಂಚುತ್ತಿದ್ದಾರೆ. ಕಿವೀಸ್ ವಿರುದ್ಧದ ಏಕದಿನ ಸರಣಿಯಲ್ಲಿಯೂ ಭಾರತ ತಂಡದ ಭಾಗವಾಗಿರುವ ಅರ್ಶ್ದೀಪ್ ಸಿಂಗ್ ಮಾಧ್ಯಮದ ಜೊತೆಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಅಭಿಮಾನಿಗಳು ಕ್ರಿಕೆಟಿಗರನ್ನು ಟ್ರೋಲ್ ಮಾಡುವ ವಿಚಾರವಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾದ ಯುವ ವೇಗದ ಬೌಲರ್ ಅರ್ಶ್ದೀಪ್ ಸಿಂಗ್ ಇತ್ತೀಚೆಗೆ ಕ್ರಿಕೆಟಿಗರನ್ನು ಟ್ರೋಲ್ ಮಾಡುವ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಅಭಿಮಾನಿಗಳಿಗೆ ತಮ್ಮ ಪ್ರೀತಿ ಹಾಗೂ ಕೋಪವನ್ನು ವ್ಯಕ್ತಪಡಿಸುವ ಹಕ್ಕು ಇದೆ. ಆಟಗಾರರು ಇದೆರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದ ಅರ್ಶ್ದೀಪ್
ಸ್ವತಃ ಅರ್ಶ್ದೀಪ್ ಸಿಂಗ್ ಕಳೆದ ಏಷ್ಯಾಕಪ್ನ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನಿಂದನೆಗೆ ಒಳಗಾಗಿದ್ದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಸಿಫ್ ಅಲಿ ನೀಡಿದ್ದ ಕ್ಯಾಚನ್ನು ಕೈಚೆಲ್ಲಿದ್ದ ಅರ್ಶ್ದೀಪ್ ವಿರುದ್ಧ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಆದರೆ ಈ ಯುವ ಪ್ರತಿಭಾವಂತ ಕ್ರಿಕೆಟಿಗನಿಗೆ ಅಷ್ಟೇ ಪ್ರಮಾಣದಲ್ಲಿ ಬೆಂಬಲ ಕೂಡ ದೊರೆತಿತ್ತು.

ಅಭಿಮಾನಿಗಳ ಭಾವನೆಯನ್ನು ಸಮಾನವಾಗಿ ಸ್ವೀಕರಿಸಬೇಕು
"ಜನರು ನಮ್ಮನ್ನು ಹಾಗೂ ನಮ್ಮ ಆಟವನ್ನು ಸಾಕಷ್ಟು ಇಷ್ಟಪಡುತ್ತಾರೆ. ನಾವು ಯಾವಾಗ ನಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತೇವೋ ಆಗ ನಮ್ಮ ಮೇಲೆ ಪ್ರೀತಿ ವ್ಯಕ್ತಪಡಿಸುತ್ತಾರೆ. ಯಾವಾಗ ನಮ್ಮಿಂದ ಉತ್ತಮ ಪ್ರದರ್ಶನ ಬರುವುದಿಲ್ಲವೋ ಆಗ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ" ಎಂದು ಅರ್ಶ್ದೀಪ್ ಸಿಂಗ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ. ಅಭಿಮಾನಿಗಳು ಕ್ರಿಕೆಟರ್ಗಳ ಮೇಲೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಾಗ ಸ್ವೀಕರಿಸುತ್ತೇವೆಯೋ ಹಾಗೇ ಅಕ್ರೋಶವನ್ನು ಕೂಡ ಸಮಾನವಾಗಿ ಸ್ವೀಕರಿಸಬೇಕು ಎಂದಿದ್ದಾರೆ ಅರ್ಶ್ದೀಪ್ ಸಿಂಗ್.

ವಿಶ್ವಕಪ್ನಲ್ಲಿ ಮಿಂಚಿದ್ದ ಯುವ ವೇಗಿ
ಇನ್ನು ಯುವ ವೇಗಿ ಅರ್ಶ್ದೀಪ್ ಸಿಂಗ್ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಮೆಲ್ಬೋರ್ನ್ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ನಾಲ್ಕು ವಿಕೆಟ್ಗಳ ಜಯ ಗಳಿಸುವಲ್ಲಿ ಅರ್ಶ್ದೀಪ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಆ ಪಂದ್ಯದಲ್ಲಿ ಅವರು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರನ್ನು ಗೋಲ್ಡನ್ ಡಕ್ಗೆ ಔಟ್ ಮಾಡಿದ್ದರೆ ಮೊಹಮ್ಮದ್ ರಿಜ್ವಾನ್ ಮತ್ತು ಆಸಿಫ್ ಅಲಿ ಅವರನ್ನು ಕೂಡ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಪಂದ್ಯದಲ್ಲಿ ನಾಲ್ಕು ಓವರ್ಗಳಲ್ಲಿ 3/32 ವಿಕೆಟ್ ಪಡೆದು ಮಿಂಚಿದ್ದರು.

ಏಕದಿನ ತಂಡದಲ್ಲಿಯೂ ಅವಕಾಶ ಪಡೆದ ಅರ್ಶ್ದೀಪ್
ಟಿ20 ವಿಶ್ವಕಪ್ ನಂತರ ಅರ್ಶ್ದೀಪ್ ಸಿಂಗ್ ಏಕದಿನ ತಂಡಕ್ಕೆ ಕೂಡ ಆಯ್ಕೆಯಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಏಕದಿನ ಮಾದರಿಗೆ ಅವರು ಪದಾರ್ಪಣೆ ಮಾಡಿದ್ದಾರೆ. ಭಾರತ ಏಕದಿನ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಬಗ್ಗೆ ಮಾತನಾಡಿದ ಅವರು "ಭಾರತ ಟಿ20 ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡ ಬಳಿಕ ಏಕದಿನ ತಂಡದಲ್ಲಿ ಅವಕಾಶ ದೊರೆತಿರುವುದು ಖುಷಿ ನೀಡಿದೆ. ಪ್ರತಿಯೊಬ್ಬ ಯುವಕ ಕೂಡ ಭಾರತದ ಪರವಾಗಿ ಆಡುವ ಕನಸು ಕಾಣುತ್ತಿರುತ್ತಾರೆ. ಅಂಥಾ ಅವಕಾಶ ನನಗೆ ದೊರೆತಿರುವುದರಿಂದ ದೇಶವನ್ನು ಪ್ರತಿನಿಧಿಸುವುದರ ಜೊತೆಗೆ ಭಾರತ ತಂಡದ ಪರವಾಗಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುವುದು ನನ್ನ ಗುರಿಯಾಗಿದೆ" ಎಂದಿದ್ದಾರೆ ಅರ್ಶ್ದೀಪ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications