
ಭಾರತೀಯ ಜನತಾ ಪಕ್ಷದ ಪಾಲಿನ ಆಲ್ ರೌಂಡರ್, ಟ್ರಬಲ್ ಶೂಟರ್ ಅರುಣ್ ಜೇಟ್ಲಿ ಅವರು ಕ್ರಿಕೆಟ್ ಪ್ರೇಮಿಯಾಗಿದ್ದರು. ಬಿಸಿಸಿಐ ಉಪಾಧ್ಯಕ್ಷ ಮತ್ತು ದೆಹಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದ ಜೇಟ್ಲಿ ಅನೇಕ ಕ್ರಿಕೆಟರ್ ಗಳಿಗೆ ಮಾರ್ಗದರ್ಶಿಯಾಗಿದ್ದರು ಎಂದು ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಸ್ಮರಿಸಿದ್ದಾರೆ.
ಅಪರೂಪದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಜೇಟ್ಲಿ ಶನಿವಾರ(ಆಗಸ್ಟ್ 24)ದಂದು ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಭಾರತೀಯ ಕ್ರಿಕೆಟ್ ಕಂಡ ಸ್ಪೋಟಕ ಆರಂಭಿಕ ಆಟಗಾರ ಸೆಹ್ವಾಗ್ ಅವರು ಜೇಟ್ಲಿ ಬಗ್ಗೆ ಅಪಾರ ಪ್ರೀತಿ, ವಿಶ್ವಾಸ.
2004ರಲ್ಲಿ ವಿರೇಂದ್ರ ಸೆಹ್ವಾಗ್ ಅವರ ಮದುವೆಯನ್ನು ಜೇಟ್ಲಿ ತಮ್ಮ ನಿವಾಸದಲ್ಲೇ ನಡೆಸಿದ್ದರು. ಜೇಟ್ಲಿ ಅಧಿಕೃತ ಬಂಗಲೆಯಲ್ಲಿ ಮದುವೆಗೆ ಸಿದ್ಧತೆ ಮಾಡಿಕೊಟ್ಟಿದ್ದ ಜೇಟ್ಲಿ ಬಗ್ಗೆ ಸೆಹ್ವಾಗ್ ಟ್ವೀಟ್ ಮಾಡಿ"ವೈಯಕ್ತಿಕವಾಗಿ ಜೇಟ್ಲಿ ಅವರೊಂದಿಗೆ ನನ್ನದು ಬಹಳ ಸುಂದರವಾದ ಸಂಬಂಧ. ನನ್ನ ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಅವರ ಪ್ರೀತಿಪಾತ್ರರ ಜೊತೆ ಇವೆ. ಓಂ ಶಾಂತಿ "ಎಂದಿದ್ದಾರೆ.
ದೆಹಲಿ ಕ್ರಿಕೆಟ್ ನಂಟು: ದೆಹಲಿ ಹಾಗೂ ಡಿಸ್ಟ್ರಿಕ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಅಧ್ಯಕ್ಷರಾಗಿ 13 ವರ್ಷಗಳ ಅರುಣ್ ಜೇಟ್ಲಿ ಆಡಳಿತ ನಡೆಸಿದ್ದರು. ಬಿಸಿಸಿಐ ಉಪಾಧ್ಯಕ್ಷರಾಗಿದ್ದರು. ಐಪಿಎಲ್ ಹಗರಣದಿಂದ ಎನ್ ಶ್ರೀನಿವಾಸನ್ ಸ್ಥಾನ ಕಳೆದುಕೊಂಡಾಗ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಜೇಟ್ಲಿ ಹೆಸರು ಕೇಳಿ ಬಂದಿತ್ತು. ಆದರೆ, ಹಗರಣಕ್ಕೀಡಾದ ಡಿಡಿಸಿಎಯಿಂದಲೂ ಜೇಟ್ಲಿ ದೂರಾದರು.