
ಬೆಂಗಳೂರು, ಅಕ್ಟೋಬರ್ 25: ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಅವರಿಗೆ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಮ್ಯಾಚ್ ರೆಫರಿ ದಂಡ ವಿಧಿಸಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ನಡುವಿನ ಪಂದ್ಯದಲ್ಲಿ ತಮಿಳುನಾಡು ಪರ ಮೈದಾನಕ್ಕಿಳಿದಿದ್ದ ಅಶ್ವಿನ್ಗೆ ದಂಡ ವಿಧಿಸಲಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 25) ನಡೆದ ಫೈನಲ್ ಪಂದ್ಯದಲ್ಲಿ ತಮಿಳುನಾಡು ಪರ 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಆರ್ ಅಶ್ವಿನ್ ಅಚ್ಚರಿಗೀಡು ಮಾಡಿದ್ದರು. ಆದರೆ ಅಶ್ವಿನ್ ಕ್ರೀಸ್ನಲ್ಲಿ ಹೆಚ್ಚು ಕಾಲ ನಿಲ್ಲಲಿಲ್ಲ. ಕೇವಲ 8 ರನ್ ಬಾರಿಸಿ ವಿ ಕೌಶಿಕ್ ಓವರ್ನಲ್ಲಿ ಕೆಎಲ್ ರಾಹುಲ್ಗೆ ಕ್ಯಾಚಿತ್ತು ನಿರ್ಗಮಿಸಿದರು.
ಅಶ್ವಿನ್ ಬ್ಯಾಟಿಂಗ್ಗೆ ಬರುವಾಗ ಅವರು ಧರಿಸಿದ್ದ ಹೆಲ್ಮೆಟ್ನಲ್ಲಿ ಬಿಸಿಸಿಐ ಲೋಗೋವಿತ್ತು. ದೇಸಿ ಕ್ರಿಕೆಟ್ನಲ್ಲಿ ಬಿಸಿಸಿಐ ಲೋಗೋ (ಚಿಹ್ನೆ) ಇರುವ ಸಮವಸ್ತ್ರ ಧರಿಸುವಂತಿಲ್ಲ. ಹೀಗಾಗಿ ನಿಯಮ ಉಲ್ಲಂಘಿಸಿರುವ ಅಶ್ವಿನ್ಗೆ ಮ್ಯಾಚ್ ರೆಫರೀ ಚಿನ್ಮಯ್ ಶರ್ಮಾ ದಂಡ ವಿಧಿಸಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟಿದ್ದ ತಮಿಳುನಾಡು ತಂಡ, ಅಭಿನವ್ ಮುಕುಂದ್ 85, ಬಾಬಾ ಅಪರಾಜಿತ್ 66, ವಿಜಯ್ ಶಂಕರ್ 38, ಶಾರುಖ್ ಖಾನ್ 27 ರನ್ ನೆರವಿನೊಂದಿಗೆ 49.5 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದು 252 ರನ್ ಮಾಡಿತ್ತು. ತಮಿಳುನಾಡು ಇನ್ನಿಂಗ್ಸ್ನಲ್ಲಿ ರಾಜ್ಯ ತಂಡದ ಅಭಿಮನ್ಯು ಮಿಥುನ್ 34 ರನ್ಗೆ 5 ವಿಕೆಟ್ ಮುರಿದು ಗಮನ ಸೆಳೆದರು.
ಗುರಿ ಬೆಂಬತ್ತಿದ ಕರ್ನಾಟಕ, ಕೆಎಲ್ ರಾಹುಲ್ 52 (72 ಎಸೆತ), ಮಯಾಂಕ್ ಅಗರ್ವಾಲ್ 69 (55 ಎಸೆತ), ದೇವದತ್ ಪಡಿಕ್ಕಲ್ 11 ರನ್ನೊಂದಿಗೆ 23 ಓವರ್ಗೆ 1 ವಿಕೆಟ್ ನಷ್ಟದಲ್ಲಿ 146 ರನ್ ಮಾಡಿತು. ಅನಂತರ ಮಳೆ ಸುರಿದಿದ್ದರಿಂದ ವಿಜೆಡಿ (ವಿ ಜಯದೇವನ್) ನಿಯಮದ ಆಧಾರದಲ್ಲಿ ಕರ್ನಾಟಕ 60 ರನ್ ಗೆಲುವನ್ನಾಚರಿಸಿತು (ಈ ನಿಯಮದ ಪ್ರಕಾರ ಕರ್ನಾಟಕ 23 ಓವರ್ಗೆ 86 ರನ್ ಬಾರಿಸಬೇಕಿತ್ತು).