
ಬೆಂಗಳೂರು, ಸೆಪ್ಟೆಂಬರ್ 14: ಏಷ್ಯಾಕಪ್ ಟೂರ್ನಮೆಂಟ್ ಗಳಲ್ಲೇ ಬಾಂಗ್ಲಾದೇಶದಲ್ಲಿ ಆಯೋಜನೆಗೊಂಡಿದ್ದ 2016ರ ಟೂರ್ನಮೆಂಟ್ ವಿಶಿಷ್ಟವಾಗಿತ್ತು ಎನ್ನಬಹುದು. ಬಾಂಗ್ಲಾದೇಶದಲ್ಲೂ 2012, 2014 ರ ನಂತರ ಸತತವಾಗಿ ಮೂರನೇ ಬಾರಿಗೆ 2016ರಲ್ಲಿ ಏಷ್ಯಾಕಪ್ ಆಯೋಜಿಸಲಾಗಿತ್ತು.
ಅದರಲ್ಲೂ ಟ್ವೆಂಟಿ20 ಮಾದರಿಯಲ್ಲಿ ಏಷ್ಯಾಕಪ್ ಆಯೋಜನೆಗೊಂಡಿದ್ದು ವಿಶೇಷ. ಈ ಟೂರ್ನಮೆಂಟ್ ನಲ್ಲಿ ಆಟಗಾರರು ಅಭ್ಯಾಸ ಮಾಡುವಾಗ, ಪಂದ್ಯಕ್ಕೆ ಹಾಜರಾಗುವಾಗ ಸಮಸ್ಯೆ ಎದುರಿಸಿದ್ದರು. ದೆಹಲಿಯಂತೆ ಢಾಕಾದಲ್ಲೂ ಭಾರಿ ಸಂಚಾರ ದಟ್ಟಣೆ ಎದುರಿಸಬೇಕಾಗಿತ್ತು.
ಢಾಕಾದ ಟ್ರಾಫಿಕ್ ಸಮಸ್ಯೆ ಜೊತೆಗೆ ಸೊಳ್ಳೆಗಳ ದಾಳಿಯಿಂದ ಭಾರತದ ಆಟಗಾರರು ತತ್ತರಿಸಿದ್ದರು. ಒಂದೋ, ಎರಡೋ ಸೊಳ್ಳೆಗಳಾಗಿದ್ದರೆ ಹುಕ್, ಪುಲ್, ಕಟ್ ಮಾಡಿದಂತೆ ಕಚಕ್ ಎಂದು ಕೊಚ್ಚಿ ಕೊಲ್ಲಲು ಕೊಹ್ಲಿ, ರೈನಾ ಎಲ್ಲರೂ ಸಜ್ಜಾಗಿದ್ದರು. ಆದರೆ, ಲಕ್ಷಾಂತರ ಸಂಖ್ಯೆಯಲ್ಲಿ ಸೊಳ್ಳೆಗಳು ದಾಳಿ ಮಾಡುತ್ತಿವೆ. ನೆಟ್ ಅಭ್ಯಾಸವನ್ನೇ ಹಾಳುಗೆಡವುತ್ತಿವೆ ಎಂದು ಖುದ್ದು ರೈನಾ ಅವರೇ ದೂರಿದ್ದರು.
ನೆಟ್ ಪ್ರಾಕ್ಟೀಸ್ ಗೆ ಹೋದರೆ ಸೊಳ್ಳೆ ಕಾಟ ಜಾಸ್ತಿ ಎಂದು ಶಿಖರ್ ಧವನ್ ಹೇಳಿದ್ದರು. ಇನ್ನು ವಿರಾಟ್ ಕೊಹ್ಲಿ ಹಾಗೂ ಯುವರಾಜ್ ಸಿಂಗ್ ಇಬ್ಬರು ಟವೆಲ್ ಬಳಸಿ ಸೊಳ್ಳೆ, ನುಸಿ ಪೀಡೆಯಿಂದ ಪಾರಾಗುತ್ತಿದ್ದರು.
2011ರ ವಿಶ್ವಕಪ್ ಸಂದರ್ಭದಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ಢಾಕಾ ಸಿಟಿ ಕಾರ್ಪೊರೇಷನ್ (ಡಿಸಿಸಿ) ವಿಶೇಷ ತಂಡವೊಂದನ್ನು ರೂಪಿಸಿತ್ತು. ಆದರೆ, 2016ರ ಏಷ್ಯಾಕಪ್ ಗೆ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಎಬಿಪಿ ನ್ಯೂಸ್ ವರದಿ ಮಾಡಿತ್ತು.