
ದುಬೈ, ಸೆಪ್ಟೆಂಬರ್ 25: ದುಬೈಯ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ vs ಅಫ್ಘಾನಿಸ್ತಾನ ನಡುವಿನ ಏಷ್ಯಾ ಕಪ್ 2018 ಸೂಪರ್ ಫೋರ್ 5ನೇ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತೆ ಭಾರತ ತಂಡದ ನಾಯಕತ್ವವನ್ನು ವಹಿಸಿದ್ದಾರೆ.
ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ಅವರು ಭರ್ಜರಿ ಪ್ರದರ್ಶನ ನೀಡಿದ್ದರು. ಆದರೆ 5ನೇ ಸೂಪರ್ ಫೋರ್ ಪಂದ್ಯದಲ್ಲಿ ಶರ್ಮಾಗೆ ವಿಶ್ರಾಂತಿ ನೀಡಿ ಧೋನಿಗೆ ನಾಯಕತ್ವವನ್ನು ವಹಿಸಲಾಯ್ತು.
ಭಾರತ ತಂಡದ ಅತ್ಯುತ್ತಮ ಕ್ಯಾಪ್ಟನ್ ಹೆಗ್ಗಳಿಕೆ ಪಾತ್ರರಾಗಿರುವ ಧೋನಿ ಇಂದು (ಸೆ.25) ಮತ್ತೆ ಕ್ಯಾಪ್ಟನ್ ಅನ್ನಿಸಿಕೊಳ್ಳುತ್ತಿರುವುದು ಇದು 696 ದಿನಗಳ ಬಳಿಕ. ಜೊತೆಗೆ ಧೋನಿ ನಾಯಕನಾಗಿ ಆಡುತ್ತಿರುವ 200ನೇ ಏಕದಿನ ಪಂದ್ಯ ಇದು ಎಂಬುದೂ ವಿಶೇಷ.

'5ನೇ ಸೂಪರ್ ಫೋರ್ ಪಂದ್ಯದಲ್ಲಿ ಭಾರತದ ಆರಂಭಿಕರಾದ ಶಿಖರ್ ಧವನ್, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿದ್ದಾರೆ. ಜೊತೆಗೆ ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ ಮತ್ತು ಯುಜುವೇಂದ್ರ ಚಾಹಲ್ ಕೂಡ ಪಂದ್ಯದಿಂದ ಹೊರಗಿದ್ದಾರೆ. ಹೀಗಾಗಿ ನಾಯಕನಾಗಿ 200ನೇ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುವ ಅವಕಾಶ ಲಭಿಸಿದೆ' ಎಂದು ಧೋನಿ ಹೇಳಿದರು.
2007ರಲ್ಲಿ ಟಿ20 ವಿಶ್ವ ಕಪ್ ವಿಜೇತ ಭಾರತ ತಂಡವನ್ನು ಧೋನಿ ಮುನ್ನಡೆಸಿದ್ದರು. 2011ರಲ್ಲೂ ಐಸಿಸಿ ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ ಧೋನಿ ನಾಯಕರಾಗಿದ್ದರು. ರಾಜೀವ್ ಗಾಂಧಿ ಖೇಲ್ ರತ್ನ, ಪದ್ಮ ಭೂಷಣ ಪ್ರಶಸ್ತಿ ಸೇರಿದಂತೆ ಅನೇಕ ಗೌರವಕ್ಕೆ ಪಾತ್ರರಾಗಿರುವ ಧೋನಿ ಇಂದಿಗೂ ಕೂಲ್ ಕ್ಯಾಪ್ಟನ್ ಎಂದೇ ಕರೆಸಿಕೊಳ್ಳುವ ಪ್ರೀತಿಯ ಆಟಗಾರ.