

ಬೆಂಗಳೂರು, ಸೆಪ್ಟೆಂಬರ್ 07: ರಣಜಿ, ಏಕದಿನ ಕ್ರಿಕೆಟ್, ಭಾರತ ಎ ಸೇರಿದಂತೆ ಎಲ್ಲಾ ಬಗೆಯ ಪಿಚ್ ಹಾಗೂ ಎಲ್ಲಾ ಮಾದರಿಯಲ್ಲಿ ಅಗ್ರಗಣ್ಯ ಬ್ಯಾಟ್ಸ್ ಮನ್ ಆಗಿ ಹೊರಹೊಮ್ಮಿರುವ ಕರ್ನಾಟಕದ ಮಯಾಂಕ್ ಅಗರವಾಲ್ ಅವರು ಇನ್ನು ಟೀಂ ಇಂಡಿಯಾಕ್ಕೆ ಆಯ್ಕೆಯಾಗಿಲ್ಲದಿರುವುದರ ಬಗ್ಗೆ ಬರೀ ಫ್ಯಾನ್ಸ್ ಅಷ್ಟೇ ಅಲ್ಲ ಈಗ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಕೂಡಾ ಪ್ರಶ್ನಿಸಿದ್ದಾರೆ.
ಸೆಪ್ಟೆಂಬರ್ 15ರಿಂದ ಯುಎಇನಲ್ಲಿ ನಡೆಯಲಿರುವ 14ನೇ ಏಷ್ಯಾ ಕಪ್ ಟೂರ್ನಮೆಂಟ್ ಗಾಗಿ ರೋಹಿತ್ ಶರ್ಮಾ ನೇತೃತ್ವದ 16 ಮಂದಿ ಸದಸ್ಯರ ಭಾರತ್ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿ ಪ್ರಕಟಿಸಿ, ಕೆಲ ದಿನಗಳು ಕಳೆದಿವೆ.
ಆದರೆ, ತಂಡದ ಆಯ್ಕೆ ಬಗ್ಗೆ ಪ್ರಶ್ನೆಗಳು ಮಾತ್ರ ಇನ್ನೂ ಮುಗಿದಿಲ್ಲ. ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿರುವುದು ಒಂದೆಡೆಯಾದರೆ, ಯುವ ವೇಗಿ ಖಲೀಲ್ ಅಹ್ಮದ್ ಗೆ ಸ್ಥಾನ ಕಲ್ಪಿಸಲಾಗಿದೆ.
ಆದರೆ, ಕಳೆದ ವರ್ಷಪೂರ್ತಿ ಉತ್ತಮ ಪ್ರದರ್ಶನ ನೀಡಿದರೂ ಭಾರತ ತಂಡಕ್ಕೆ ಆಯ್ಕೆಯಾಗುವ ಅದೃಷ್ಟ ಮಾತ್ರ ಮಯಾಂಕ್ ಅವರ ಕೈಗೂಡಿಲ್ಲ. ಈ ಬಗ್ಗೆ ಪ್ರಶ್ನಿಸಿ ಟ್ವೀಟ್ ಮಾಡಿರುವ ಹರ್ಭಜನ್ ಸಿಂಗ್, ಈ ತಂಡದಲ್ಲಿ ಮಯಾಂಕ್ ಎಲ್ಲಿ? ಅಷ್ಟೊಂದು ರನ್ ಗಳಿಸಿದರೂ ತಂಡದಲ್ಲಿ ಕಾಣಿಸುತ್ತಿಲ್ಲ. ಒಬ್ಬಬ್ಬರಿಗೆ ಒಂದೊಂದು ರೀತಿ ಮಾನದಂಡ ಎನಿಸುತ್ತದೆ ಎಂದಿದ್ದಾರೆ.
ಮಯಾಂಕ್ ಅವರು ಆಯ್ಕೆಯಾಗದಿರುವುದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್, ಕಳೆದ 10-12 ತಿಂಗಳಲ್ಲಿ ಮಯಾಂಕ್ ಪ್ರದರ್ಶನ ಉತ್ತಮವಾಗಿದೆ. ತಂಡ ಸೇರಲು ಇನ್ನೊಂದೆ ಮೆಟ್ಟಿಲು ಬಾಕಿಯಿದೆ. ಸೂಕ್ತ ಸಮಯದಲ್ಲಿ ತಂಡ ಸೇರಲಿದ್ದಾರೆ ಎಂದಿದ್ದಾರೆ.