
ದುಬೈ, ಸೆಪ್ಟೆಂಬರ್ 20: ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2018ರ ಟೂರ್ನಿಯಿಂದ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್ ಮತ್ತು ಶಾರ್ದೂಲ್ ಠಾಕೂರ್ ಹೊರಬಿದ್ದಿದ್ದಾರೆ. ಮೂವರೂ ಗಾಯಕ್ಕೆ ತುತ್ತಾಗಿರುವುದು ಇದಕ್ಕೆ ಕಾರಣ.
ಬುಧವಾರ (ಸೆಪ್ಟೆಂಬರ್ 19) ನಡೆದ ಭಾರತ vs ಪಾಕಿಸ್ತಾನ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಅವರು 17.5 ಓವರ್ ನಲ್ಲಿ ಬೌಲಿಂಗ್ ಮಾಡುತ್ತಿದ್ದವರು ಸ್ನಾಯು ಸೆಳೆತಕ್ಕೊಳಗಾಗಿ ಕುಸಿದರು. ಅವರನ್ನು ವೈದ್ಯಕೀಯ ಸಿಬ್ಬಂದಿ ಮೈದಾನದಿಂದ ಹೊರಕ್ಕೆ ಒಯ್ಯುವಂತಾಗಿತ್ತು.
'ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಸೊಂಟ ನೋವಿಗೆ ಈಡಾಗಿದ್ದಾರೆ. ಅವರೀಗ ವೈದ್ಯಕೀಯ ಉಪಚಾರದಲ್ಲಿದ್ದಾರೆ. ಹಾಗಾಗಿ ಪಾಂಡ್ಯ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಹಾರ್ದಿಕ್ ಸ್ಥಾನವನ್ನು ದೀಪಕ್ ಚಾಹರ್ ತುಂಬಲಿದ್ದಾರೆ' ಎಂದು ಬಿಸಿಸಿಐ ಹೇಳಿದೆ.
ಗಾಯದ ಕಾರಣಕ್ಕಾಗಿ ಪಂದ್ಯಾಟದಿಂದ ಹೊರ ಬೀಳುತ್ತಿರುವ ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್ ಮತ್ತು ಶಾರ್ದೂಲ್ ಠಾಕೂರ್ ಬದಲಿಗೆ ದೀಪಕ್ ಚಾಹರ್, ರವೀಂದ್ರ ಜಡೇಜಾ ಮತ್ತು ಸಿದ್ಧಾರ್ಥ್ ಕೌಲ್ ಅವರು ಗುರುವಾರ (ಸೆಪ್ಟೆಂಬರ್ 20) ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ.