
ದುಬೈ, ಸೆಪ್ಟೆಂಬರ್ 29: ರೋಹಿತ್ ಶರ್ಮಾ ಅವರ ನಾಯಕತ್ವಕ್ಕೆ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರು ಪ್ರಭಾವಿತರಾಗಿದ್ದಾರಂತೆ. ಹೀಗೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಏಷ್ಯಾಕಪ್ ನಲ್ಲಿನ ರೋಹಿತ್ ಅವರ ನಾಯಕತ್ವ ತನ್ನ ಗಮನ ಸೆಳೆದಿದೆ ಎಂದು ಶಾಸ್ತ್ರಿ ಹೇಳಿದ್ದಾರೆ. (ಚಿತ್ರ ಕೃಪೆ: ಬಿಸಿಸಿಐ)
ದುಬೈಯ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ (ಸೆಪ್ಟೆಂಬರ್ 29) ಮುಕ್ತಾಯಗೊಂಡ 2018ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ 7ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಫೈನಲ್ ನಲ್ಲಿ ಭಾರತ ತಂಡ ಬಾಂಗ್ಲಾವನ್ನು 3 ವಿಕೆಟ್ ನಿಂದ ಮಣಿಸಿ ಪ್ರಶಸ್ತಿ ಜಯಿಸಿತ್ತು.
ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ನಾಯಕತ್ವವನ್ನು ವಹಿಸಿದ್ದ ರೋಹಿತ್ ಶರ್ಮಾ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದರು. ರೋಹಿತ್ ಕ್ಯಾಪ್ಟನ್ಸಿಯಲ್ಲಿ ಭಾರತ ಈ ಏಷ್ಯಾ ಕಪ್ ನಲ್ಲಿ 5 ಜಯ ಮತ್ತು ಒಂದು ಪಂದ್ಯವನ್ನು ಅಫ್ಘಾನ್ ಜೊತೆ ಟೈ ಗೊಳಿಸಿಕೊಂಡಿತ್ತು (ಟೈ ಆದ 5ನೇ ಸೂಪರ್ ಫೋರ್ ನಲ್ಲಿ ಧೋನಿ ನಾಯಕತ್ವ ವಹಿಸಿದ್ದರು).
ಟೂರ್ನಿಯಲ್ಲಿ ಒಟ್ಟು ಐದು ಇನ್ನಿಂಗ್ಸ್ ಆಡಿದ್ದ ಶರ್ಮಾ ಅವರು ಕ್ರಮವಾಗಿ 23, 52, 83, 111 ಮತ್ತು 48 ರನ್ ಗಳಿಸಿ ತಂಡಕ್ಕೆ ಬಲ ತುಂಬಿದ್ದರು. ಪಂದ್ಯದ ವೇಳೆ ತಂಡದ ನಿಭಾವಣೆಯನ್ನೂ ಚೆನ್ನಾಗೇ ಮಾಡಿದ್ದರು. ಇದನ್ನೇ ಉಲ್ಲೇಖಿಸಿರುವ ಶಾಸ್ತ್ರಿ 'ರೋಹಿತ್ ಅವರು ಶಾಂತತೆಯಿಂದಲೇ ಪ್ರಭಾವಿಸಿದರು' ಎಂದಿದ್ದಾರೆ.
'ರೋಹಿತ್ ಅವರ ಶಾಂತ ಸ್ವಭಾವ ಸೆಳೆಯುತ್ತದೆ. ಅವರ ನಾಯಕತ್ವದಲ್ಲೂ ಶಾಂತತೆಯ ಸೆಳೆತವಿತ್ತು. ಪಾಕಿಸ್ತಾನ, ಬಾಂಗ್ಲಾದಂತ ಬಲಿಷ್ಠ ತಂಡಗಳೆದುರು ಸಾವಾಲು ಸ್ವೀಕರಿಸಲಿದ್ದಾಗಲೂ ತಂಡವನ್ನು ತಣ್ಣಗೇ ನಿಭಾಯಿಸಿಬಿಟ್ಟರು' ಎಂದು ರವಿ ಶಾಸ್ತ್ರಿ ಏಷ್ಯಾ ಕಪ್ ಫೈನಲ್ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.