
ಕೊಲಂಬೋ, ಸೆಪ್ಟೆಂಬರ್ 24: ಏಷ್ಯಾ ಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಂತಹ ದುರ್ಬಲ ತಂಡಗಳ ವಿರುದ್ಧ ದಯನೀಯ ಸೋಲು ಕಂಡು ಲೀಗ್ ಹಂತದಲ್ಲಿಯೇ ಹೊರಬಿದ್ದ ಕಾರಣಕ್ಕೆ ಶ್ರೀಲಂಕಾ ತಂಡದ ನಾಯಕ ಏಂಜೆಲೊ ಮ್ಯಾಥ್ಯೂಸ್ ಅವರ ತಲೆದಂಡ ನೀಡಲಾಗಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ ನಾಯಕ ಸ್ಥಾನದಿಂದ ಮ್ಯಾಥ್ಯೂಸ್ ಅವರನ್ನು ವಜಾಗೊಳಿಸಿ ಟೆಸ್ಟ್ ತಂಡದ ನಾಯಕ ದಿನೇಶ್ ಚಂಡಿಮಾಲ್ ಅವರಿಗೆ ಏಕದಿನ ಕ್ರಿಕೆಟ್ನ ನಾಯಕತ್ವವನ್ನೂ ನೀಡಿದೆ.
2019ರ ವಿಶ್ವಕಪ್ ಕ್ರಿಕೆಟ್ಗೆ ಕೆಲವೇ ಪಂದ್ಯಗಳು ಬಾಕಿ ಇರುವಾಗಲೇ ತಂಡದ ನಾಯಕತ್ವದ ಜವಾಬ್ದಾರಿಯಲ್ಲಿ ಬದಲಾವಣೆ ಮಾಡಲಾಗಿದೆ.
ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯತ್ತ ಹರಿಹಾಯ್ದಿರುವ ಮ್ಯಾಥ್ಯೂಸ್, ತಮ್ಮನ್ನು ಇಲ್ಲಿ ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಶ್ರೀಲಂಕಾ ತಂಡ ಕಳಪೆ ಪ್ರದರ್ಶನ ತೋರಿಸಲು ಆರಂಭಿಸಿದಾಗ 2012ರಲ್ಲಿ ಮ್ಯಾಥ್ಯೂಸ್ ಅವರಿಗೆ ನಾಯಕತ್ವದ ಹೊಣೆಗಾರಿಕೆ ವಹಿಸಲಾಗಿತ್ತು. 2017ರಲ್ಲಿ ಬದಲಾವಣೆ ಮಾಡಲಾಯಿತು. ಒಂದು ವರ್ಷದ ಅವಧಿಯಲ್ಲಿ ತಿರಿಮನ್ನೆ, ಉಪುಲ್ ತರಂಗ, ಕಪುಗೆದರ, ಲಸಿತ್ ಮಾಲಿಂಗ ಮತ್ತು ತಿಸೆರಾ ಪೆರೇರಾ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ಮ್ಯಾಥ್ಯೂಸ್ ಗಾಯಗೊಂಡಿದ್ದರಿಂದ ಕೆಲವೇ ಪಂದ್ಯಗಳಲ್ಲಿ ಆಡಿದ್ದರು.

ಆದರೆ, ಏಷ್ಯಾ ಕಪ್ಗೂ ಮುನ್ನ ಮ್ಯಾಥ್ಯೂಸ್ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ಮರಳಿ ನೀಡಲಾಗಿತ್ತು. ವಿಶ್ವಕಪ್ ಸಮೀಪಿಸುತ್ತಿರುವುದರಿಂದ ಮ್ಯಾಥ್ಯೂಸ್ಗೆ ನಾಯಕತ್ವದ ಹೊಣೆ ನೀಡುವಂತೆ ಕೋಚ್ ಚಂಡಿಕಾ ಹತುರಸಿಂಘ ಒತ್ತಾಯಿಸಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೇರಿದಂತೆ ಎಂಟು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದು, ಆರು ಪಂದ್ಯಗಳಲ್ಲಿ ಸೋತಿರುವುದು ಮ್ಯಾಥ್ಯೂಸ್ ಅವರನ್ನು ಕೆಳಕ್ಕಿಳಿಸಲು ಕಾರಣವಾಗಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿ ಸಿಇಒ ಆಶ್ಲೆ ಡಿ ಸಿಲ್ವಾ ಅವರಿಗೆ ಪತ್ರ ಬರೆದಿರುವ ಮ್ಯಾಥ್ಯೂಸ್, ತಂಡದ ಕಳಪೆ ಪ್ರದರ್ಶನಕ್ಕೆ ತಮ್ಮನ್ನು ಮಾತ್ರ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
'ಆರಂಭದಲ್ಲಿ ಅಚ್ಚರಿಯಾದರೂ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳ ವಿರುದ್ಧ ಹೀನಾಯ ಪ್ರದರ್ಶನದಲ್ಲಿ ನನ್ನನ್ನು ಬಲಿಪಶು ಮಾಡಲಾಗಿದೆ ಎನ್ನುವುದು ತಕ್ಷಣವೇ ಅರ್ಥವಾಗಿದೆ.
ನಾನು ಸೋಲಿನ ಆರೋಪವನ್ನು ಹೊರಲು ಸಿದ್ಧ. ಆದರೆ, ಇದೇ ವೇಳೆ ನಾನು ವಂಚನೆಗೆ ಒಳಗಾಗಿದ್ದೇನೆ ಮತ್ತು ಇಡೀ ಸೋಲಿನ ಅಪವಾದವನ್ನು ನನ್ನೊಬ್ಬನ ತಲೆಗೆ ಕಟ್ಟಲಾಗುತ್ತಿದೆ ಎಂದು ಎನಿಸಿದೆ. ಎಲ್ಲ ನಿರ್ಧಾರಗಳನ್ನೂ ಆಯ್ಕೆದಾರರು ಮತ್ತು ಮುಖ್ಯ ಕೋಚ್ ಪರಸ್ಪರ ಹೊಂದಾಣಿಕೆಯಿಂದ ತೆಗೆದುಕೊಳ್ಳಲಾಗುತ್ತಿತ್ತು.
ನಾನು ಒಪ್ಪಿಕೊಳ್ಳದೇ ಇದ್ದರೂ, ಸೋಲುಗಳಿಗೆ ಕಾರಣವನ್ನು ನಾಯಕನ ಮೇಲೆಯೇ ವಹಿಸಲಾಗುತ್ತದೆ. ನಾಯಕತ್ವದಿಂದ ಕೆಳಕ್ಕಿಳಿಯುವಂತೆ ಆಯ್ಕೆ ಸಮಿತಿ ಮತ್ತು ಮುಖ್ಯ ಕೋಚ್ ಮಾಡಿರುವ ಮನವಿಯನ್ನು ತಕ್ಷಣದಿಂದಲೇ ಗೌರವಿಸುತ್ತೇನೆ ಎಂದಿದ್ದಾರೆ.
ಮ್ಯಾಥ್ಯೂಸ್ ಹೇಳಿಕೆಯಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮತ್ತು ತಂಡದ ನಡುವಣ ಅಸಮಾಧಾನ ಸ್ಫೋಟಗೊಂಡಿದೆ. ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಬಹಿರಂಗವಾಗಿದೆ.