Asia Cup 2022: ಆ ಆಟಗಾರನ ಅಬ್ಬರದಿಂದ ಏಷ್ಯಾಕಪ್ಗೆ ಆಯ್ಕೆಯಾಗುವುದಿಲ್ಲ ಶ್ರೇಯಸ್ ಐಯ್ಯರ್!

ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ನಿರತವಾಗಿರುವ ಟೀಮ್ ಇಂಡಿಯಾ ಇದೇ ತಿಂಗಳ ಕೊನೆಯ ವಾರದಂದು ಆರಂಭವಾಗಲಿರುವ ಪ್ರತಿಷ್ಟಿತ ಏಷ್ಯಾಕಪ್ ಟೂರ್ನಿಯಲ್ಲಿ ಸೆಣಸಾಡಲಿದೆ.
ಇನ್ನು ಏಷ್ಯಾಕಪ್ ಮುಕ್ತಾಯದ ನಂತರದ ಕೆಲವೇ ದಿನಗಳಲ್ಲಿ ಪ್ರತಿಷ್ಠಿತ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಕೂಡ ಆರಂಭವಾಗಲಿದ್ದು, ಟೀಮ್ ಇಂಡಿಯಾ ಮುಂಬರುವ ಈ 2 ಮಹಾ ಟೂರ್ನಿಗಳಿಗಾಗಿ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಸದ್ಯ ಟೀಮ್ ಇಂಡಿಯಾದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರ ಸಂಖ್ಯೆ ದೊಡ್ಡ ಮಟ್ಟದಲ್ಲಿಯೇ ಇದ್ದು, ಯಾವ ಆಟಗಾರರನ್ನು ಮುಂಬರುವ ಏಷ್ಯಾಕಪ್ ಟೂರ್ನಿಗೆ ಆಯ್ಕೆ ಮಾಡಬೇಕು ಮತ್ತು ಯಾವ ಆಟಗಾರರನ್ನು ಕೈಬಿಡಬೇಕು ಎಂಬ ಗೊಂದಲ ಬಿಸಿಸಿಐ ಆಯ್ಕೆಗಾರರಲ್ಲಿ ಮೂಡಿದೆ.
ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದಾಗಿನಿಂದ ಇಲ್ಲಿಯವರೆಗೂ ಏನಿಲ್ಲವೆಂದರೂ ಕನಿಷ್ಠ 5 ಯುವ ಆಟಗಾರರು ಭಾರತ ತಂಡದ ಪರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು, ಇವರ ಜತೆಗೆ ಫಾರ್ಮ್ ಕಳೆದುಕೊಂಡು ತಂಡದಿಂದ ಹೊರಬಿದ್ದಿದ್ದ ಆಟಗಾರರೂ ಸಹ ಕಂಬ್ಯಾಕ್ ಮಾಡಿರುವುದು ಆಟಗಾರರ ಸಂಖ್ಯೆಯನ್ನು ಅತಿ ದೊಡ್ಡ ಮಟ್ಟಕ್ಕೆ ಹೆಚ್ಚಿಸಿದೆ ಎಂದೇ ಹೇಳಬಹುದು. ಹೀಗಾಗಿ ಮುಂಬರುವ ಏಷ್ಯಾಕಪ್ ಟೂರ್ನಿಗೆ ಆಯ್ಕೆಗಾರರು ಯಾರಿಗೆ ಮಣೆ ಹಾಕಲಿದ್ದಾರೆ ಎಂಬ ಚರ್ಚೆಗಳು ಇದೀಗ ಆರಂಭವಾಗಿದ್ದು, ಬಿಸಿಸಿಐ ಬಲ್ಲ ಮೂಲಗಳ ಮಾಹಿತಿ ಪ್ರಕಾರ ಶ್ರೇಯಸ್ ಅಯ್ಯರ್ ಅವರಿಗೆ ಅವಕಾಶ ಲಭಿಸುವುದು ಕಷ್ಟ ಎನ್ನಲಾಗುತ್ತಿದೆ.

ಶ್ರೇಯಸ್ ಬದಲು ಈ ಆಟಗಾರನಿಗೆ ಮಣೆ
ಶ್ರೇಯಸ್ ಅಯ್ಯರ್ ಭಾರತ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರೂ ಸಹ ಮುಂಬರುವ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಯಲ್ಲಿ ಸ್ಥಾನ ಸಿಗುವುದು ಅನುಮಾನ ಮೂಡಿಸಿದೆ. ಹೌದು, ಹೆಚ್ಚಾಗಿ ಮೂರನೇ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಶ್ರೇಯಸ್ ಅಯ್ಯರ್ ಬದಲಾಗಿ ಇದೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅಯ್ಯರ್ ಅವರಿಗಿಂತ ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿರುವ ದೀಪಕ್ ಹೂಡಾಗೆ ಬಿಸಿಸಿಐ ಮಣೆ ಹಾಕುವ ಸಾಧ್ಯತೆಗಳು ಹೆಚ್ಚಿವೆ.

ದೀಪಕ್ ಹೂಡಾ ಆಯ್ಕೆಗೆ ಕಾರಣವೇನು?
ಹಲವು ದಿನಗಳಿಂದ ತಂಡದ ಪರ ಆಡುತ್ತಿರುವ ಶ್ರೇಯಸ್ ಅಯ್ಯರ್ ಅವರಿಗಿಂತ ದೀಪಕ್ ಹೂಡಾಗೆ ಬಿಸಿಸಿಐ ಅವಕಾಶ ನೀಡಲು ಮುಂದಾಗಬಹುದು ಎಂಬುದಕ್ಕೆ ಪ್ರಮುಖ ಕಾರಣ ಇತ್ತೀಚಿನ ದಿನಗಳಲ್ಲಿ ದೀಪಕ್ ಹೂಡಾ ಅಬ್ಬರಿಸಿರುವುದು ಹಾಗೂ ಶ್ರೇಯಸ್ ಅಯ್ಯರ್ ಮಂಕಾಗಿರುವುದು. ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯ ಮೊದಲ 3 ಪಂದ್ಯಗಳಲ್ಲಿಯೂ ಆಡುವ ಅವಕಾಶ ಪಡೆದಿರುವ ಶ್ರೇಯಸ್ ಅಯ್ಯರ್ ಈ ಪಂದ್ಯಗಳಲ್ಲಿ ಗಳಿಸಿರುವ ಒಟ್ಟು ರನ್ 34 ಮಾತ್ರ. ಅತ್ತ ದೀಪಕ್ ಹೂಡಾ ತನ್ನ ಕೊನೆಯ 4 ಟಿ ಟ್ವೆಂಟಿ ಪಂದ್ಯಗಳಲ್ಲಿ ಕ್ರಮವಾಗಿ 21, ಅಜೇಯ 47, 104 ಮತ್ತು 33 ರನ್ ಕಲೆಹಾಕಿದ್ದು ಆಯ್ಕೆಗಾರರ ಮನ ಗೆದ್ದಿದ್ದಾರೆ.

ದೀಪಕ್ ಹೂಡಾ ಬ್ಯಾಕಪ್ ಆಟಗಾರ
ಇನ್ನು ದೀಪಕ್ ಹೂಡಾರನ್ನು ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಲಾಗುವ ತಂಡಕ್ಕೆ ಆಯ್ಕೆ ಮಾಡಿದರೂ ಸಹ ಆಡುವ ಬಳಗದಲ್ಲಿ ಹೆಚ್ಚು ಅವಕಾಶ ಲಭಿಸುವುದಿಲ್ಲ ಎನ್ನಬಹುದು. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಇರುವ ಕಾರಣ ದೀಪಕ್ ಹೂಡಾರನ್ನು ವಿರಾಟ್ ಕೊಹ್ಲಿಯ ಬ್ಯಾಕಪ್ ಆಟಗಾರನಾಗಿ ಮಾತ್ರ ಆಯ್ಕೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ತಂಡದ ಆಟಗಾರರಲ್ಲಿ ಯಾರಾದರೊಬ್ಬರು ಗಾಯದ ಸಮಸ್ಯೆಗೆ ಒಳಗಾದರೆ ದೀಪಕ್ ಹೂಡಾ ಬ್ಯಾಟ್ ಹಿಡಿದು ಕಣಕ್ಕಿಳಿಯುವ ಅವಕಾಶ ಪಡೆಯಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications