
ಭಾರತ ತಂಡವನ್ನು ಭವಿಷ್ಯದಲ್ಲಿ ಮುನ್ನಡೆಸುವ ಸಾಮರ್ಥ್ಯ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಲ್ಲಿದೆ ಎಂದು ಮಂಗಳವಾರ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೇಳಿದ್ದಾರೆ. ವೈಟ್ಬಾಲ್ ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಖಂಡಿತಾ ಮುನ್ನಡೆಸಲಿದ್ದು ಅದಕ್ಕೆ ಪೂರಕವಾಗಿ ಅರ್ಹತೆಗಳು ಆತನಲ್ಲಿದೆ ಎಂದಿದ್ದಾರೆ ಹರ್ಭಜನ್ ಸಿಂಗ್.
ಹಾಂಕಾಂಗ್ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತನಾಡಿರುವ ಹರ್ಭಜನ್ ಸಿಂಗ್ ಹಾರ್ದಿಕ್ ಪಾಂಡ್ಯ ತನಗೆ ಎಂಎಸ್ ಧೋನಿಯನ್ನು ನೆನಪಿಸಿದ್ದಾರೆ ಎಂದಿದ್ದಾರೆ. ತನ್ನ ಇನ್ನಿಂಗ್ಸ್ಅನ್ನು ಲೆಕ್ಕಾಚಾರ ಮಾಡುವ ವಿಚಾರದಲ್ಲಿ ಹಾಗೂ ಪಂದ್ಯದ ಸಂದರ್ಭದಲ್ಲಿ ಶಾಂತಚಿತ್ತದಿಂದ ವರ್ತಿಸುವ ರೀತಿಯಿಂದಾಗಿ ಎಂಎಸ್ ಧೋನಿ ನೆನಪಿಗೆ ಬರುತ್ತಾರೆ ಎಂದಿದ್ದಾರೆ ಹರ್ಭಜನ್ ಸಿಂಗ್.
ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೀಡಿದ ಆಲ್ರೌಂಡರ್ ಪ್ರದರ್ಶನದ ನಂತರ ಭಜ್ಜಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನಿಡಿರುವ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಕೇವಲ 26 ರನ್ಗಳನ್ನು ನೀಡಿ ಮೂರು ವಿಕೆಟ್ ಸಂಪಾದಿಸಿದ್ದಾರೆ. ನಂತರ ಬ್ಯಾಟಿಂಗ್ನಲ್ಲಿ ಕೇವಲ 17 ಎಸೆತಗಳಲ್ಲಿ 33 ರನ್ಗಳನ್ನು ಸಿಡಿಸುವ ಮೂಲಕ ಭಾರತ ತಂಡಕ್ಕೆ ಜಯವನ್ನು ತಂದಿತ್ತಿದ್ದಾರೆ.
"ಆತ ನಾಯಕನಾಗಬೇಕು. ನನ್ನ ಪ್ರಕಾರ ಆತ ನಾಯಕನಾಗುತ್ತಾನೆ. ಇತ್ತೀಚಿನ ದಿನಗಳಲ್ಲಿ ಅವರು ತನ್ನ ಭಿನ್ನ ವ್ಯಕ್ತಿತ್ವವನ್ನು ವ್ಯಕ್ತಪಡಿಸಿದ್ದಾರೆ. ತಾಳ್ಮೆ, ಹಾಗೂ ಶಾಂತಚಿತ್ತದ ವಿಚಾರದಲ್ಲಿ ಅವರು ಎಂಎಸ್ ಧೋನಿಯನ್ನು ನೆನಪಿಸುತ್ತಿದ್ದಾರೆ. ಅವರು ಅದ್ಭುತವಾಗಿ ಬ್ಯಾಟಿಂಗ್ ನಡೆಸುತ್ತಿದ್ದು ತನ್ನಲ್ಲಿರುವ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟುಕೊಂಡಿದ್ದಾರೆ" ಎಂದಿದ್ದಾರೆ ಹರ್ಭಜನ್ ಸಿಂಗ್.
ಕಳೆದ ವರ್ಷ ಟಿ20 ವಿಶ್ವಕಪ್ನ ಬಳಿಕ ಫಿಟ್ನೆಸ್ನ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಸುಮಾರು ಐದು ತಿಂಗಳುಗಳ ಕಾಲ ಹಾರ್ದಿಕ್ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಅವರು ದೂರವುಳಿದುಕೊಂಡಿದ್ದರು. ಆದರೆ ಐಪಿಎಲ್ 2022ರಲ್ಲಿ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ ಅವರು ಸಂಪೂರ್ಣ ಫಿಟ್ ಆಗಿದ್ದು ಮಾತ್ರವಲ್ಲದೆ ಅದ್ಭುತ ಪ್ರದರ್ಶನ ನೀಡುತ್ತಾ ಮಿಂಚಲು ಆರಂಭಿಸಿದರು.
"ಹಾರ್ದಿಕ್ ಪಾಂಡ್ಯ ಭವಿಷ್ಯದಲ್ಲಿ ಭಾರತ ತಂಡದ ನಾಯಕನಾಗುವುದನ್ನು ನಾನು ನೋಡುತ್ತೇನೆ. ಪಾಕಿಸ್ತಾನದ ವಿರುದ್ಧದ ಪಂದ್ಯದ ಸಮಯದಲ್ಲಿ ಮತ್ತು ಐಪಿಎಲ್ನಲ್ಲಿ ಅವರು ತಮ್ಮ ಮನೋಧರ್ಮವನ್ನು ಪ್ರದರ್ಶಿಸಿದ ರೀತಿ ಅದ್ಭುತವಾಗಿದೆ. ರಾಷ್ಟ್ರೀಯ ತಂಡದ ನಾಯಕನಾಗುವ ಎಲ್ಲಾ ಸಾಮರ್ಥ್ಯಗಳನ್ನು ಅವರು ಪಡೆದಿದ್ದಾರೆ ಎಂಬುದು ನನ್ನ ಅನಿಸಿಕೆ." ಎಂದು ಹರ್ಭಜನ್ ಸಿಂಗ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.