ತಂಡದಲ್ಲಿ ಈ 13 ಆಟಗಾರರಿಗೆ ಸ್ಥಾನ ಖಚಿತ
ಬಿಸಿಸಿಐ ಮುಂಬರುವ ಏಷ್ಯಾಕಪ್ ಟೂರ್ನಿಗಾಗಿ 15 ಆಟಗಾರರ ತಂಡವನ್ನು ಪ್ರಕಟಿಸಬೇಕಿದೆ. ಹಾಗೂ ಇಬ್ಬರು ರಿಸರ್ವ್ ಆಟಗಾರರನ್ನು ಕೂಡ ತಂಡದ ಜತೆ ಕಳಿಸಬಹುದಾಗಿದೆ. ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಮರಳಲಿದ್ದು ಈ ಇಬ್ಬರಿಗೂ ಸಹ ಸ್ಥಾನ ಖಚಿತ. ಇನ್ನುಳಿದಂತೆ ಐಪಿಎಲ್ ಮೂಲಕ ಕಮ್ ಬ್ಯಾಕ್ ಮಾಡಿರುವ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಹಾಗೂ ಯಜುವೇಂದ್ರ ಚಹಾಲ್ ಕೂಡ ಏಷ್ಯಾಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಖಚಿತ. ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡಿರುವ ಅರ್ಷದೀಪ್ ಸಿಂಗ್ ಹಾಗೂ ದೀಪಕ್ ಹೂಡಾ ಕೂಡ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗುವ ತಂಡದಲ್ಲಿ ಈ ಕೆಳಕಂಡ 13 ಆಟಗಾರರು ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಸ್ಥಾನ ಗಿಟ್ಟಿಸಿಕೊಳ್ಳುವ 13 ಆಟಗಾರರು:ರೋಹಿತ್ ಶರ್ಮಾ (ನಾಯಕ),
ಕೆಎಲ್ ರಾಹುಲ್,
ವಿರಾಟ್ ಕೊಹ್ಲಿ,
ಸೂರ್ಯಕುಮಾರ್ ಯಾದವ್,
ರಿಷಭ್ ಪಂತ್ ( ವಿಕೆಟ್ ಕೀಪರ್ ,
ಹಾರ್ದಿಕ್ ಪಾಂಡ್ಯ (ಉಪನಾಯಕ),
ರವೀಂದ್ರ ಜಡೇಜಾ,
ದಿನೇಶ್ ಕಾರ್ತಿಕ್,
ಭುವನೇಶ್ವರ್ ಕುಮಾರ್,
ಜಸ್ಪ್ರೀತ್ ಬುಮ್ರಾ,
ಯುಜುವೇಂದ್ರ ಚಾಹಲ್,
ಅರ್ಷದೀಪ್ ಸಿಂಗ್,
ದೀಪಕ್ ಹೂಡಾ.
ತಂಡದ ಉಳಿದ 2 ಸ್ಥಾನಕ್ಕಾಗಿ ಐವರ ನಡುವೆ ಪೈಪೋಟಿ
ಇತ್ತೀಚೆಗೆ ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಹೂಡಾ ಉತ್ತಮ ಪ್ರದರ್ಶನ ನೀಡಿರುವ ಕಾರಣದಿಂದಾಗಿ ಆರಂಭಿಕ ಆಟಗಾರ ಇಶಾನ್ ಕಿಶನ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಅನುಮಾನ ಮೂಡಿಸಿದೆ. ಅಷ್ಟೇ ಅಲ್ಲದೆ ಇಬ್ಬರು ವಿಕೆಟ್ ಕೀಪರ್ಗಳಾದ ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ತಂಡದಲ್ಲಿರುವ ಕಾರಣ ಇಶಾನ್ ಕಿಶನ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಸ್ಪಿನ್ ಬೌಲರ್ಗಳಾದ ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯಿ, ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ಈ ನಾಲ್ವರಲ್ಲಿ ಬಿಸಿಸಿಐ ಯಾರಿಗೆ ಮಣೆ ಹಾಕಲಿದೆ ಎಂಬ ಪ್ರಶ್ನೆ ಮೂಡಿದೆ. ಈ ಮೂಲಕ ಒಟ್ಟು ಐವರು ಆಟಗಾರರ ನಡುವೆ ತಂಡದಲ್ಲಿ ಉಳಿದಿರುವ 2 ಸ್ಥಾನಗಳಿಗಾಗಿ ಪೈಪೋಟಿ ಏರ್ಪಟ್ಟಿದ್ದು, ಈ ಪೈಕಿ ಇನ್ನುಳಿದ ಮೂವರಲ್ಲಿ ಇಬ್ಬರು ಆಟಗಾರರಿಗೆ ರಿಸರ್ವ್ ಆಟಗಾರನಾಗಿ ಸ್ಥಾನ ಸಿಗುವ ಸಾಧ್ಯತೆಗಳಿವೆ. ಹೀಗಾಗಿ ಈ ಐವರಲ್ಲಿ ಇಬ್ಬರು ಆಟಗಾರರು ತಂಡದಲ್ಲಿ ಸ್ಥಾನ ಪಡೆದುಕೊಂಡರೆ, ಇನ್ನಿಬ್ಬರು ರಿಸರ್ವ್ ಆಟಗಾರರಾಗಿ ಆಯ್ಕೆಯಾಗಲಿದ್ದಾರೆ ಹಾಗೂ ಯಾರಾದರೂ ಓರ್ವ ಆಟಗಾರ ಅವಕಾಶ ವಂಚಿತರಾಗಲಿದ್ದಾರೆ.
ಹಾರ್ದಿಕ್ ಪಾಂಡ್ಯ ಉಪನಾಯಕ
ಇನ್ನು ಟೀಮ್ ಇಂಡಿಯಾದ ಪೂರ್ಣಾವಧಿ ಉಪನಾಯಕ ಕೆಎಲ್ ರಾಹುಲ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದರೂ ಸಹ ಬಿಸಿಸಿಐ ಉಪನಾಯಕನ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯಗೆ ಏಷ್ಯಾಕಪ್ ಟೂರ್ನಿಯಲ್ಲಿ ನೀಡಲಿದೆ. ಸದ್ಯ ಸಾಲು ಸಾಲು ಗಾಯದ ಸಮಸ್ಯೆ ಹಾಗೂ ಅನಾರೋಗ್ಯದಿಂದ ಬಳಲಿರುವ ಕೆಎಲ್ ರಾಹುಲ್ ಉಪ ನಾಯಕತ್ವದ ಜವಾಬ್ದಾರಿ ಇಲ್ಲದೇ ಆಟವನ್ನಾಡಲು ಬಿಸಿಸಿಐ ಈ ತೀರ್ಮಾನ ಕೈಗೊಳ್ಳಲಿದೆ ಎನ್ನಲಾಗುತ್ತಿದೆ.