ಏಷ್ಯಾಕಪ್ ಆಟಗಾರರ ಆಯ್ಕೆ ಸಭೆ: ಭಾರತ ತಂಡದಲ್ಲಿ ಈ 13 ಆಟಗಾರರಿಗೆ ಸ್ಥಾನ; ಈ ಐವರಲ್ಲಿ ಯಾರಿಗೆ ಅವಕಾಶ?

ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡು ಏಕದಿನ ಹಾಗೂ ಟಿ ಟ್ವೆಂಟಿ ಎರಡೂ ಸರಣಿಗಳನ್ನೂ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಸದ್ಯ ಯುಎಸ್ ನೆಲದಲ್ಲಿ ಬೀಡು ಬಿಟ್ಟಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಮೊದಲ 3 ಪಂದ್ಯಗಳು ವೆಸ್ಟ್ ಇಂಡೀಸ್ ನೆಲದಲ್ಲಿಯೇ ಜರುಗಿದವು. ಆದರೆ ಉಳಿದ 2 ಟಿ ಟ್ವೆಂಟಿ ಪಂದ್ಯಗಳು ಯುಎಸ್ನ ಫ್ಲೋರಿಡಾದ ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ ಕ್ರೀಡಾಂಗಣದಲ್ಲಿ ಆಯೋಜನೆಯಾಗಿತ್ತು.
ಏಕದಿನ ಸರಣಿಯಲ್ಲಿ ವೈಟ್ ವಾಶ್ ಸಾಧನೆ ಮಾಡಿದ್ದ ಟೀಮ್ ಇಂಡಿಯಾ ಟಿ ಟ್ವೆಂಟಿ ಸರಣಿಯಲ್ಲಿ 4-1 ಅಂತರದಲ್ಲಿ ಗೆದ್ದು ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಹೀಗೆ ಫ್ಲೋರಿಡಾದಲ್ಲಿನ ಕೊನೆಯ 2 ಟಿ ಟ್ವೆಂಟಿ ಪಂದ್ಯಗಳನ್ನು ಮುಗಿಸಿರುವ ಟೀಮ್ ಇಂಡಿಯಾ ಸದ್ಯ ಅಲ್ಲಿಯೇ ಬೀಡು ಬಿಟ್ಟಿದ್ದು, ಇತ್ತ ಬಿಸಿಸಿಐ ಆಯ್ಕೆಗಾರರು ಮುಂಬರುವ ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಬೇಕಾದ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ.
ಹೌದು, ಇದೇ ತಿಂಗಳ ಕೊನೆಯ ವಾರದಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಗೆ ಎಲ್ಲಾ ಕ್ರಿಕೆಟ್ ಬೋರ್ಡ್ಗಳು ತಮ್ಮ ತಂಡಗಳನ್ನು ಪ್ರಕಟಿಸಲು ಇಂದೇ ( ಆಗಸ್ಟ್ 8 ) ಕೊನೆಯ ದಿನವಾಗಿದ್ದು, ಬಿಸಿಸಿಐ ಆಯ್ಕೆಗಾರರ ಸಮಿತಿ ಇಂದು ಸಂಜೆಯ ವೇಳೆಗೆ ಸಭೆ ನಡೆಸಿ ಆಟಗಾರರನ್ನು ಪ್ರಕಟಿಸಲಿದೆ. ಮುಂಬೈನಲ್ಲಿ ಬಿಸಿಸಿಐ ಆಯ್ಕೆಗಾರರ ಸಮಿತಿಯ ಸದಸ್ಯರು ಆನ್ಲೈನ್ ಮೂಲಕ ಯುಎಸ್ನಲ್ಲಿರುವ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಜತೆ ಸಭೆ ನಡೆಸಲಿದ್ದಾರೆ. ಈ ಸಭೆಯ ನಂತರ ಬಿಸಿಸಿಐ ಅಧಿಕೃತವಾಗಿ ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಬಿಸಿಸಿಐ ಬಹಿರಂಗಪಡಿಸಲಿದೆ.

ತಂಡದಲ್ಲಿ ಈ 13 ಆಟಗಾರರಿಗೆ ಸ್ಥಾನ ಖಚಿತ
ಬಿಸಿಸಿಐ ಮುಂಬರುವ ಏಷ್ಯಾಕಪ್ ಟೂರ್ನಿಗಾಗಿ 15 ಆಟಗಾರರ ತಂಡವನ್ನು ಪ್ರಕಟಿಸಬೇಕಿದೆ. ಹಾಗೂ ಇಬ್ಬರು ರಿಸರ್ವ್ ಆಟಗಾರರನ್ನು ಕೂಡ ತಂಡದ ಜತೆ ಕಳಿಸಬಹುದಾಗಿದೆ. ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಮರಳಲಿದ್ದು ಈ ಇಬ್ಬರಿಗೂ ಸಹ ಸ್ಥಾನ ಖಚಿತ. ಇನ್ನುಳಿದಂತೆ ಐಪಿಎಲ್ ಮೂಲಕ ಕಮ್ ಬ್ಯಾಕ್ ಮಾಡಿರುವ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಹಾಗೂ ಯಜುವೇಂದ್ರ ಚಹಾಲ್ ಕೂಡ ಏಷ್ಯಾಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಖಚಿತ. ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡಿರುವ ಅರ್ಷದೀಪ್ ಸಿಂಗ್ ಹಾಗೂ ದೀಪಕ್ ಹೂಡಾ ಕೂಡ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗುವ ತಂಡದಲ್ಲಿ ಈ ಕೆಳಕಂಡ 13 ಆಟಗಾರರು ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಸ್ಥಾನ ಗಿಟ್ಟಿಸಿಕೊಳ್ಳುವ 13 ಆಟಗಾರರು:ರೋಹಿತ್ ಶರ್ಮಾ (ನಾಯಕ),
ಕೆಎಲ್ ರಾಹುಲ್,
ವಿರಾಟ್ ಕೊಹ್ಲಿ,
ಸೂರ್ಯಕುಮಾರ್ ಯಾದವ್,
ರಿಷಭ್ ಪಂತ್ ( ವಿಕೆಟ್ ಕೀಪರ್ ,
ಹಾರ್ದಿಕ್ ಪಾಂಡ್ಯ (ಉಪನಾಯಕ),
ರವೀಂದ್ರ ಜಡೇಜಾ,
ದಿನೇಶ್ ಕಾರ್ತಿಕ್,
ಭುವನೇಶ್ವರ್ ಕುಮಾರ್,
ಜಸ್ಪ್ರೀತ್ ಬುಮ್ರಾ,
ಯುಜುವೇಂದ್ರ ಚಾಹಲ್,
ಅರ್ಷದೀಪ್ ಸಿಂಗ್,
ದೀಪಕ್ ಹೂಡಾ.

ತಂಡದ ಉಳಿದ 2 ಸ್ಥಾನಕ್ಕಾಗಿ ಐವರ ನಡುವೆ ಪೈಪೋಟಿ
ಇತ್ತೀಚೆಗೆ ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಹೂಡಾ ಉತ್ತಮ ಪ್ರದರ್ಶನ ನೀಡಿರುವ ಕಾರಣದಿಂದಾಗಿ ಆರಂಭಿಕ ಆಟಗಾರ ಇಶಾನ್ ಕಿಶನ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಅನುಮಾನ ಮೂಡಿಸಿದೆ. ಅಷ್ಟೇ ಅಲ್ಲದೆ ಇಬ್ಬರು ವಿಕೆಟ್ ಕೀಪರ್ಗಳಾದ ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ತಂಡದಲ್ಲಿರುವ ಕಾರಣ ಇಶಾನ್ ಕಿಶನ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಸ್ಪಿನ್ ಬೌಲರ್ಗಳಾದ ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯಿ, ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ಈ ನಾಲ್ವರಲ್ಲಿ ಬಿಸಿಸಿಐ ಯಾರಿಗೆ ಮಣೆ ಹಾಕಲಿದೆ ಎಂಬ ಪ್ರಶ್ನೆ ಮೂಡಿದೆ. ಈ ಮೂಲಕ ಒಟ್ಟು ಐವರು ಆಟಗಾರರ ನಡುವೆ ತಂಡದಲ್ಲಿ ಉಳಿದಿರುವ 2 ಸ್ಥಾನಗಳಿಗಾಗಿ ಪೈಪೋಟಿ ಏರ್ಪಟ್ಟಿದ್ದು, ಈ ಪೈಕಿ ಇನ್ನುಳಿದ ಮೂವರಲ್ಲಿ ಇಬ್ಬರು ಆಟಗಾರರಿಗೆ ರಿಸರ್ವ್ ಆಟಗಾರನಾಗಿ ಸ್ಥಾನ ಸಿಗುವ ಸಾಧ್ಯತೆಗಳಿವೆ. ಹೀಗಾಗಿ ಈ ಐವರಲ್ಲಿ ಇಬ್ಬರು ಆಟಗಾರರು ತಂಡದಲ್ಲಿ ಸ್ಥಾನ ಪಡೆದುಕೊಂಡರೆ, ಇನ್ನಿಬ್ಬರು ರಿಸರ್ವ್ ಆಟಗಾರರಾಗಿ ಆಯ್ಕೆಯಾಗಲಿದ್ದಾರೆ ಹಾಗೂ ಯಾರಾದರೂ ಓರ್ವ ಆಟಗಾರ ಅವಕಾಶ ವಂಚಿತರಾಗಲಿದ್ದಾರೆ.

ಹಾರ್ದಿಕ್ ಪಾಂಡ್ಯ ಉಪನಾಯಕ
ಇನ್ನು ಟೀಮ್ ಇಂಡಿಯಾದ ಪೂರ್ಣಾವಧಿ ಉಪನಾಯಕ ಕೆಎಲ್ ರಾಹುಲ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದರೂ ಸಹ ಬಿಸಿಸಿಐ ಉಪನಾಯಕನ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯಗೆ ಏಷ್ಯಾಕಪ್ ಟೂರ್ನಿಯಲ್ಲಿ ನೀಡಲಿದೆ. ಸದ್ಯ ಸಾಲು ಸಾಲು ಗಾಯದ ಸಮಸ್ಯೆ ಹಾಗೂ ಅನಾರೋಗ್ಯದಿಂದ ಬಳಲಿರುವ ಕೆಎಲ್ ರಾಹುಲ್ ಉಪ ನಾಯಕತ್ವದ ಜವಾಬ್ದಾರಿ ಇಲ್ಲದೇ ಆಟವನ್ನಾಡಲು ಬಿಸಿಸಿಐ ಈ ತೀರ್ಮಾನ ಕೈಗೊಳ್ಳಲಿದೆ ಎನ್ನಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications