
ಅಫ್ಘಾನಿಸ್ತಾನದ ವಿರುದ್ಧ ಹೀನಾಯ ಸೋಲು ಅನುಭವಿಸಿದ ಶ್ರೀಲಂಕಾ ತಂಡ ಆರಂಭಿಕ ಪಂದ್ಯದಲ್ಲಿಯೇ ಮುಖಭಂಗವನ್ನು ಅನುಭವಿಸಿತ್ತು. ಆದರೆ ಆ ಪಂದ್ಯದ ಮುಕ್ತಾಯದ ಬಳಿಕ ಶ್ರೀಲಂಕಾ ತಂಡದ ನಾಯಕ ದಾಸುನ್ ಶನಕ ಬಾಂಗ್ಲಾದೇಶ ತಂಡವನ್ನು ಕೆಣಕಿ ಹೇಳಿಕೆಯೊಂದನ್ನು ನೀಡಿದ್ದಾರೆ. ಆದರೆ ಶ್ರೀಲಂಕಾ ನಾಯಕನ ಈ ಹೇಳಿಕೆಗೆ ಬಾಂಗ್ಲಾದೇಶದ ಆಟಗಾರ ಮೆಹದಿ ಹಸನ್ ನೇರವಾಗಿ ಪ್ರತಿಕ್ರಿಯಿಸಲು ಬಯಸಿಲ್ಲ. ಆದರೆ ಶ್ರೀಲಂಕಾ ನಾಯಕನಿಗೆ ಒಂದು ಎಚ್ಚರಿಕೆಯ ಸಂದೇಶವನ್ನು ಕೊಟ್ಟಿದ್ದಾರೆ.
ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡ ಕೇವಲ 105 ರನ್ಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಅಫ್ಘಾನಿಸ್ತಾನವನ್ನು ಕೇವಲ ಎರಡು ವಿಕೆಟ್ ಕಳೆದುಕೊಂಡು ಇನ್ನೂ 58 ಎಸೆತಗಳನ್ನು ಬಾಕಿಯಿರುವಂತೆಯೇ ಗೆದ್ದು ಬೀಗಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಅಫ್ಘಾನಿಸ್ತಾನ ಮೇಲುಗೈ ಸಾಧಿಸಿದೆ.
ಈ ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಶ್ರೀಲಂಕಾ ತಂಡದ ನಾಯಕ ದಾಸುನ್ ಶನಕ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ನೀಡಿದ ಹೇಳಿಕೆ ಬಾಂಗ್ಲಾದೇಶ ತಂಡವನ್ನು ಕೆಣಕುವಂತೆ ಮಾಡಿದೆ. "ಅಫ್ಘಾನಿಸ್ತಾನ ತಂಡ ವಿಶ್ವದರ್ಜೆಯ ಬೌಲಿಂಗ್ ವಿಭಾಗವನ್ನು ಹೊಂದಿದೆ. ಬಾಂಗ್ಲಾದೇಶ ತಂಡದಲ್ಲಿ ಮುಸ್ತಫಿಜುರ್ ಉತ್ತಮ ಬೌಲರ್ ಎಂದು ಗೊತ್ತಿದೆ. ಶಕೀಬ್ ಅಲ್ ಹಸನ್ ಕೂಡ ವಿಶ್ವದರ್ಜೆಯ ಆಟಗಾರ. ಅವರನ್ನು ಹೊರತುಪಡಿಸಿ ಉಳಿದ ಯಾರೂ ಕೂಡ ವಿಶ್ವದರ್ಜೆಯ ಬೌಲರ್ಗಳನ್ನು ಆ ತಂಡ ಹೊಂದಿಲ್ಲ. ಹಾಗಾಗಿ ಬಾಂಗ್ಲಾದೇಶಕ್ಕೆ ಹೋಲಿಸಿದರೆ ಬಾಂಗ್ಲಾದೇಶ ಸುಲಭದ ಎದುರಾಳಿ" ಎಂದು ಹೇಳಿಕೆ ನೀಡಿದ್ದರು.
ಆದರೆ ಈ ಹೇಳಿಕೆಗೆ ಅದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದಕ್ಕೆ ಬಾಂಗ್ಲಾದೇಶದ ಆಟಗಾರ ಮೆಹದಿ ಹಸನ್ ಹಿಂದೇಟು ಹಾಕಿದ್ದಾರೆ. ಆದರೆ ಎಲ್ಲಾ ತಂಡಗಳು ಕೂಡ ಉತ್ತಮ ಹಾಗೂ ಕೆಟ್ಟ ದಿನಗಳನ್ನು ಹೊಂದಿರುತ್ತದೆ. ಈ ಪ್ರಶ್ನೆಗೆ ಉತ್ತಮ ಮೈದಾನದಲಲ್ಉ ಮುಖಾಮುಖಿಯಾದಾಗಲೇ ದೊರೆಯುತ್ತದೆ ಎಂದಿದ್ದಾರೆ.
"ಯಾವ ತಂಡ ಉತ್ತಮ ಯಾವ ತಂಡ ದುರ್ಬಲ ಎಂಬುದನ್ನು ನಾನು ಉತ್ತರಿಸುವುದಕ್ಕೆ ಸಾಧ್ಯವಿಲ್ಲ. ಮೈದಾನದಲ್ಲಿ ಎರಡು ತಂಡಗಳು ಮುಖಾಮುಖಿಯಾದಾಗಲೇ ಇದಕ್ಕೆ ಉತ್ತರ ದೊರೆಯುತ್ತದೆ. ಒಂದು ಕೆಟ್ಟ ದಿನದಂದು ಕೆಟ್ಟ ಪ್ರದರ್ಶನ ನೀಡಿದರೆ ಒಳ್ಳೆಯ ತಂಡ ಕೂಡ ಸೋಲು ಅನುಭವಿಸುತ್ತದೆ. ಅದೇ ರೀತಿ ಕೆಟ್ಟ ತಂಡ ಕೂಡ ಉತ್ತಮವಾಗಿ ಆಡಿದರೆ ಪಂದ್ಯವನ್ನು ಗೆಲ್ಲುತ್ತದೆ" ಎಂದಿದ್ದಾರೆ ಮೆಹದಿ ಹಸನ್.