ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಆಲ್ರೌಂಡರ್ ಅಕ್ಷರ್ ಪಟೇಲ್ ಅಲಭ್ಯವಾಗಲಿದ್ದಾರೆ ಎಂದು ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿದೆ. ಅಕ್ಷರ್ ಬದಲಿಗೆ ವಾಶಿಂಗ್ಟನ್ ಸುಂದರ್ ಭಾರತ ತಂಡಕ್ಕೆ ಬದಲಿ ಆಟಗಾರನಾಗಿ ಸೇರ್ಪಡೆಯಾಗಿದ್ದಾರೆ. ಭಾನುವಾರ ನಡೆಯಲಿರುವ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಈ ಮಾಹಿತಿ ಹಂಚಿಕೊಂಡಿದೆ.
ಶನಿವಾರ ಬೆಳಗ್ಗೆಯೇ ಈ ಬಗ್ಗೆ ವರದಿಗಳು ಹರದಾಡಿದ್ದವು. ವಾಶಿಂಗ್ಟನ್ ಸುಂದರ್ ಆಲ್ರೌಮಡರ್ ಅಕ್ಷರ್ ಪಟೇಲ್ ಅವರ ಬದಲಿಗೆ ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಅಲ್ಲದೆ ಸಿಂದರ್ ಶ್ರೀಲಂಕಾಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿಗಳು ಕುಡ ಹೊರಬಿದ್ದಿದ್ದವು. ಆದರೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಲಭ್ಯವಾಗಿರಲಿಲ್ಲ. ಇದೀಗ ಬಿಸಿಸಿಐ ಇದನ್ನು ಖಚಿತಪಡಿಸಿದೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿ ಗೆಲುವಿನ ಸನಿಹಕ್ಕೆ ಪಂದ್ಯವನ್ನು ಕೊಂಡೊಯ್ದಿದ್ದ ಅಕ್ಷರ್ ಪಟೇಲ್ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಅವರು ಫೈನಲ್ ಪಂದ್ಯದಲ್ಲಿ ಆಡುವ ಸಾಧ್ಯತೆ ಬಹುತೇಕ ಇಲ್ಲ ಎನ್ನಲಾಗಿದೆ. ಅದೇ ಕಾರಣದಿಂದಾಗಿ ಟೀಮ್ ಇಂಡಿಯಾ ಫೈನಲ್ ಪಂದ್ಯಕ್ಕೂ ಮುನ್ನ ವಾಶಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.
ಬಾಂಗ್ಲಾದೇಶ ವಿರುದ್ಧದ ಸೂಪರ್ 4 ಹಂತದ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ವೇಳೆ ಅಕ್ಷರ್ ಪಟೇಲ್ ಮಹತ್ವದ ಪಾತ್ರವಹಿಸಿದ್ದರು. ಪ್ರಮುಖ ಆಟಗಾರರು ವಿಕೆಟ್ ಕಳೆದುಕೊಂಡಿದ್ದರೂ ಅಕ್ಷರ್ ದೊಟ್ಟ ಹೋರಾಟವನ್ನು ನಡೆಸಿದ್ದರು. ಆದರೆ ಈ ಸಂದರ್ಭದಲ್ಲಿ ಅಕ್ಷರ್ ತೊಡೆನೋವಿಗೆ ಒಳಗಾಗಿದ್ದಾರೆ. ಹೀಗಾಗಿ ಚಿಕಿತ್ಸೆ ಪಡೆದು ಬ್ಯಾಟಿಂಗ್ ಮುಂದುವರಿಸಿದ್ದರು.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 34 ಎಸೆತಗಳನ್ನು ಎದುರಿಸಿದ್ದ ಅಕ್ಷರ್ ಪಟೇಲ್ 42 ರನ್ಗಳನ್ನು ಬಾರಿಸಿದ್ದರು. ಕೊನೆಯ ಹಂತದಲ್ಲಿ ಭಾರತಕ್ಕೆ ನಿರೀಕ್ಷೆ ಮೂಡಿಸಿದ್ದರಾದರೂ ಮುಸ್ತಫಿಜುರ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಮುಂದಾಗಿ ವಿಕೆಟ್ ಕಳೆದುಕೊಂಡಿದ್ದರು. ಈ ಮೂಲಕ ಭಾರತದ ಗೆಲುವಿನ ಕನಸು ಭಗ್ನಗೊಂಡಿತು.
ಇತ್ತಂಡಗಳ ಸಂಪೂರ್ಣ ಸ್ಕ್ವಾಡ್
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ವಾಷಿಂಗ್ಟನ್ ಸುಂದರ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮಾ
ಶ್ರೀಲಂಕಾ: ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ದಸುನ್ ಶನಕ (ನಾಯಕ), ಪಾತುಮ್ ನಿಸ್ಸಂಕ, ಕುಸಲ್ ಪೆರೇರ, ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದುನಿತ್ ವೆಲ್ಲಲಾಗೆ, ಪ್ರಮೋದ್ ಮದುಶನ್, ಮಥೀಶ ಪತಿರಣ, ಸಹನ್ ಅರಚ್ಚಿಗೆ, ದುಶನ್ ಹೇಮಂತ, ಕಸುನ್ ರಜಿತ, ಬಿನೂರ ಫೆರ್ನಾಂಡೋ, ದಿಮುತ್ ಕರುಣಾರತ್ನ