ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 30 ರಿಂದ ಆರಂಭವಾಗಲಿದೆ. 7 ಬಾರಿಯ ಚಾಂಪಿಯನ್ ಭಾರತ ಮತ್ತು 2 ಬಾರಿ ವಿಜೇತ ಪಾಕಿಸ್ತಾನ ತಂಡಗಳು ಪ್ರಶಸ್ತಿ ಮೇಲೆ ಕಣ್ಣು ನೆಟ್ಟಿವೆ. 2019ರ ವಿಶ್ವಕಪ್ ನಿಂದ ಏಕದಿನ ಪಂದ್ಯಗಳನ್ನು ಗೆಲ್ಲುವಲ್ಲಿ ಭಾರತ ಅತ್ಯಂತ ಯಶಸ್ವಿ ತಂಡ. ಪಾಕಿಸ್ತಾನವು ತನ್ನ ಮಾರಕ ವೇಗದ ಬೌಲರ್ ಗಳೊಂದಿಗೆ ಪ್ರಬಲ ಅಗ್ರ ಕ್ರಮಾಂಕ ಹೊಂದಿದೆ.
ಪಾಕಿಸ್ತಾನ ತಂಡಕ್ಕೆ ಹೋಲಿಸಿದರೆ, ಭಾರತ ಕೆಲವು ವಿಭಾಗದಲ್ಲಿ ಹಿಂದೆ ಬಿದ್ದಂತೆ ಕಾಣುತ್ತದೆ. ಅದರಲ್ಲಿ ಪ್ರಮುಖವಾಗಿ ಟೀಮ್ ಇಂಡಿಯಾದ ಬೌಲರ್ ಗಳಿಗೆ ಬ್ಯಾಟಿಂಗ್ ಮತ್ತು ಬ್ಯಾಟ್ಸಾಮ್ಯಾನ್ ಗಳಿಗೆ ಬೌಲಿಂಗ್ ಬರುವುದಿಲ್ಲ. ಟಾಪ್ ಆರ್ಡರ್ ಬ್ಯಾಟರ್ ಗಳು ಭರ್ಜರಿ ಪ್ರದರ್ಶನ ನೀಡಿದ್ದಲ್ಲಿ ಯಾವುದೇ ತಂಡವನ್ನು ಸೋಲಿಸುವ ಕ್ಷಮತೆ ಬ್ಲ್ಯೂ ಬಾಯ್ಸ್ ಗಳಿಗಿದೆ.

ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ಜಸ್ಪ್ರೀತ್ ಬುಮ್ರಾ ರಂತಹ ಸ್ಟಾರ್ ಆಟಗಾರರು ಗಾಯದಿಂದ ಮರಳಿದ ಬಳಿಕ ತಂಡ ಸೇರಿಕೊಂಡಿದ್ದಾರೆ. ನಾಯಕ ರೋಹಿತ್ ಶರ್ಮಾ 2018 ರಲ್ಲಿ ಒಮ್ಮೆ ತಂಡಕ್ಕೆ ಏಕದಿನ ಏಷ್ಯಾಕಪ್ ಪ್ರಶಸ್ತಿಯನ್ನು ಗೆಲ್ಲಿಸಿ ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಬಾರಿ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಜತೆಗೆ ತಂಡವನ್ನು ಚಾಂಪಿಯನ್ ಮಾಡುವ ಜವಾಬ್ದಾರಿಯೂ ಯುವ ಆಟಗಾರರ ಮೇಲಿದೆ.
ತಂಡದ ಶಕ್ತಿ 2019ರ ಏಕದಿನ ವಿಶ್ವಕಪ್ ನಿಂದ ಭಾರತ 57 ಏಕದಿನ ಪಂದ್ಯಗಳನ್ನು ಆಡಿದೆ. ತಂಡವು 34 ಗೆಲುವುಗಳನ್ನು ಹೊಂದಿದ್ದು, ಇದು ಎಲ್ಲಾ ತಂಡಗಳಿಗಿಂತಲೂ ಹೆಚ್ಚು. ತಂಡವು ಈ ಹಿಂದೆ ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಗಳನ್ನು ಏಕದಿನ ಸರಣಿಯಲ್ಲಿ ಸೋಲಿಸಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭಮನ್ ಗಿಲ್ ಅವರಂತಹ ಆಟಗಾರರೊಂದಿಗೆ ಅನುಭವಿ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಕೂಡ ತಂಡಕ್ಕೆ ಮರಳಿದ್ದಾರೆ.
ಕೆಳ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಬ್ಯಾಟಿಂಗ್ ಆಳ ನೀಡಬಲ್ಲರು. ಜಸ್ಪ್ರೀತ್ ಬುಮ್ರಾ, ವಾಪಸಾತಿಯೊಂದಿಗೆ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಸದ್ಯಕ್ಕೆ ಉನ್ನತ ದರ್ಜೆಯಲ್ಲಿದ್ದಾರೆ. ಶಾರ್ದೂಲ್ ಠಾಕೂರ್, 2019 ರ ವಿಶ್ವಕಪ್ ನಂತರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಕೂಡ ತಂಡದ ಭಾಗವಾಗಿದ್ದಾರೆ.
ಜಡೇಜಾ ಜೊತೆಗೆ ಕುಲದೀಪ್ ಯಾದವ್ ಕೂಡ ಸ್ಪಿನ್ ವಿಭಾಗವನ್ನು ಬಲಪಡಿಸುತ್ತಿದ್ದಾರೆ. ಶ್ರೇಯಸ್ ಅಯ್ಯರ್, ರಾಹುಲ್ ಮತ್ತು ಬುಮ್ರಾ ಗಾಯದ ನಂತರ ಮರಳಿದ್ದಾರೆ. ಬುಮ್ರಾ ಐರ್ಲೆಂಡ್ ಸರಣಿಯಲ್ಲಿ 4 ವಿಕೆಟ್ ಪಡೆಯುವ ಮೂಲಕ ಉತ್ತಮ ಫಾರ್ಮ್ ಲಕ್ಷಣಗಳನ್ನು ತೋರಿಸಿದ್ದು, ಆದರೆ ಉಳಿದ 2 ಆಟಗಾರರ ಫಾರ್ಮ್ ತಂಡಕ್ಕೆ ಸಮಸ್ಯೆಯಾಗಬಹುದು.
ಜಡೇಜಾ ನಂತರ 7ನೇ ಕ್ರಮಾಂಕದಲ್ಲಿ ಉಳಿದಿರುವ ತಂಡದ 4 ಆಟಗಾರರ ಬ್ಯಾಟಿಂಗ್ ತೀರಾ ದುರ್ಬಲವಾಗಿದೆ. ಕುಲದೀಪ್, ಬುಮ್ರಾ, ಶಮಿ ಮತ್ತು ಸಿರಾಜ್ ಅವರು ಬ್ಯಾಟಿಂಗ್ ನಲ್ಲಿ ಯಾವುದೇ ಕಾಣಿಕೆ ನೀಡುತ್ತಿಲ್ಲ. ಇದು ನಿಜಕ್ಕೂ ತಂಡದ ತಲೆನೋವು ಹೆಚ್ಚಿಸಿದೆ. ಎಡಗೈ ವೇಗಿಗಳ ವಿರುದ್ಧ ತಂಡದ ಬಹುತೇಕ ಬ್ಯಾಟ್ಸಮ್ಯಾನ್ ಗಳು ತೊಂದರೆ ಅನುಭವಿಸುತ್ತಿದ್ದಾರೆ.
ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಭಾರತ ತಂಡಕ್ಕೆ ಸಮಸ್ಯೆಗಳನ್ನು ಉಂಟುಮಾಡುವ ಎಡಗೈ ವೇಗಿಗಳನ್ನು ಹೊಂದಿವೆ. ಮತ್ತೊಂದೆಡೆ, ಟೀಂ ಇಂಡಿಯಾದಲ್ಲಿ ಒಬ್ಬ ಎಡಗೈ ವೇಗಿ ಇಲ್ಲ. ಈ ಎಲ್ಲ ಅಂಶಗಳಲ್ಲಿ ಮೆಟ್ಟಿನಿಂತು ಟೀಮ್ ಇಂಡಿಯಾ ಸೊಗಸಾದ ಪ್ರದರ್ಶನ ನೀಡಿದ್ದೇ ಆದಲ್ಲಿ ಈ ಬಾರಿಯೂ ಪ್ರಶಸ್ತಿಯ ಕನಸು ನನಸಾಗುತ್ತದೆ.