ಭಾನುವಾರ, ಸೆಪ್ಟೆಂಬರ್ 15ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ 2023ರ ಏಷ್ಯಾ ಕಪ್ ಫೈನಲ್ ಪಂದ್ಯ ನಡೆಯಲಿದ್ದು, 2023ರ ಏಕದಿನ ವಿಶ್ವಕಪ್ಗೆ ಮುನ್ನ ಏಷ್ಯಾದ ಅಧಿಪತಿ ಯಾರಾಗಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.
ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ರೋಚಕ ಸೋಲಿನ ನಂತರ ಭಾರತ ತಂಡ ಫೈನಲ್ನಲ್ಲಿ ಆಡುತ್ತಿದ್ದರೆ, ಶ್ರೀಲಂಕಾ ತಂಡ ಪಾಕಿಸ್ತಾನ ವಿರುದ್ಧ ಕೊನೆಯ ಬಾಲ್ನಲ್ಲಿ ಗೆಲುವಿನೊಂದಿಗೆ ಫೈನಲ್ಗೆ ಅರ್ಹತೆ ಪಡೆದಿದೆ.
ಬಾಂಗ್ಲಾದೇಶದ ಪಂದ್ಯಕ್ಕೂ ಮುನ್ನ ಭಾರತ ತಂಡ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸತತ ಗೆಲುವು ಸಾಧಿಸುವ ಮೂಲಕ ಫೈನಲ್ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿತ್ತು. ಆಟಗಾರರ ಗಾಯದ ಸಮಸ್ಯೆಯ ಹೊರತಾಗಿಯೂ ಆತಿಥೇಯ ಶ್ರೀಲಂಕಾ ತಂಡ ಭಾರತಕ್ಕೆ ಸವಾಲೊಡ್ಡಿತ್ತು.

ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದ್ದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯಕ್ಕೆ ವಾಪಸ್ಸಾಗಲಿದ್ದಾರೆ.
ಇನ್ನು ಭಾರತ ಮತ್ತು ಶ್ರೀಲಂಕಾ ನಡುವಿನ ಏಷ್ಯಾ ಕಪ್ ಫೈನಲ್ ಪಂದ್ಯ ಮಳೆಯಿಂದಾಗಿ ಪಂದ್ಯ ಆರಂಭಕ್ಕೂ ಮುನ್ನ ಮತ್ತು ಆಟದ ಮಧ್ಯೆದಲ್ಲಿ ಕೆಲವು ವಿರಾಮಗಳನ್ನು ಪಡೆಯಬಹುದು. ಕಳೆದ ಒಂದು ವಾರದಿಂದ ಕೊಲಂಬೊದಲ್ಲಿ ಮೋಡ ಮುಸುಕಿದ ಮತ್ತು ಮಳೆಯಿಂದ ಕೂಡಿದ ಹವಾಮಾನ ಇದೆ.

ಕೊಲಂಬೊದಲ್ಲಿ ನಡೆದ ಸೂಪರ್ 4 ಹಂತದ ಪಂದ್ಯಗಳಲ್ಲಿ 16 ಓವರ್ಗಳು ಕಡಿತಗೊಂಡಿವೆ. ಮೈದಾನ ಸಿಬ್ಬಂದಿ ಮಳೆಯಿಂದಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಮಳೆ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಇಡೀ ಮೈದಾನವನ್ನು ಕವರ್ ಮಾಡುತ್ತಿದ್ದಾರೆ.
ಸೆಪ್ಟೆಂಬರ್ 17ರಂದು ಕೊಲಂಬೊದಲ್ಲಿ ಶೇ.80ರಷ್ಟು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇದರಿಂದ ಏಷ್ಯಾ ಕಪ್ ಫೈನಲ್ ಪಂದ್ಯಕ್ಕೆ ವರುಣ ಅಡ್ಡಿಪಡಿಸುವ ನಿರೀಕ್ಷೆ ಇದೆ.
ಅಕ್ಯುವೆದರ್ ಪ್ರಕಾರ, ಸೆಪ್ಟೆಂಬರ್ 17ರಂದು ಸಂಜೆ 7.30ರ ವೇಳೆಗೆ ಶೇ.70ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಇನ್ನಿಂಗ್ಸ್ ಬ್ರೇಕ್ ಮುಗಿದು ಎರಡನೇ ಇನ್ನಿಂಗ್ಸ್ ಆರಂಭವಾಗುವ ಸಮಯವಿದು. ಮಳೆಯಿಂದಾಗಿ ಪಂದ್ಯವು ತಡವಾಗಿ ಆರಂಭವಾಗುವುದನ್ನು ಮತ್ತು ಅದೇ ಕಾರಣದಿಂದ ಓವರ್ಗಳನ್ನು ಕಡಿತಗೊಳಿಸುವುದನ್ನು ಹಿಂದಿನ ಪಂದ್ಯಗಳಲ್ಲಿ ಈಗಾಗಲೇ ನೋಡಿದ್ದೇವೆ.
2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಹಂತಕ್ಕಿಂತ ಭಿನ್ನವಾಗಿ ಫೈನಲ್ ಪಂದ್ಯಕ್ಕೆ ಮೀಸಲು ದಿನ ನಿಗದಿಯಾಗಿದೆ. ಸೂಪರ್ 4 ಹಂತದಲ್ಲಿ ಮೀಸಲು ದಿನ ಪಡೆದ ಏಕೈಕ ಪಂದ್ಯವೆಂದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಹಣಾಹಣಿ. ಪಂದ್ಯವು ಸಂಪೂರ್ಣವಾಗಿ ನಡೆಯಲು ಸಾಧ್ಯವಾಗದಿದ್ದರೆ, ಸಣ್ಣ ಆಟವಾದರೂ, ಅದು ಮರುದಿನ ಮುಂದುವರಿಯಲಿದೆ.
ಸೆಪ್ಟೆಂಬರ್ 17ರಂದೇ ಪಂದ್ಯವನ್ನು ಪೂರ್ಣಗೊಳಿಸಲು ಆಯೋಜಕರು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಲಿದ್ದಾರೆ. ಇದೇ ವೇಳೆ, ಸೆಪ್ಟೆಂಬರ್ 18ರ ಹವಾಮಾನ ಮುನ್ಸೂಚನೆಯು ಉತ್ತಮವಾಗಿಲ್ಲ. ಮೀಸಲು ದಿನವೂ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ.