ಏಷ್ಯಾ ಕಪ್ ಟೂರ್ನಿ ಬುಧವಾರದಿಂದಲೇ ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ. ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಮುಂದಿನ ಶನಿವಾರ ಆಡಲಿದ್ದು ಪಾಕಿಸ್ತಾನದ ವಿರುದ್ಧದ ಪಂದ್ಯದ ಮೂಲಕ ಈ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ. ಆದರೆ ಟೂರ್ನಿಯ ಮೊದಲ ಎರಡು ಪಂದ್ಯಗಳಿಗೆ ತಂಡದ ಅನುಭವಿ ಆಟಗಾರ ಕೆಎಲ್ ರಾಹುಲ್ ಅಲಭ್ಯವಾಗಲಿದ್ದು ಸ್ವತಃ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಖಚಿತಪಡಿಸಿದ್ದಾರೆ.
ಕೆಎಲ್ ರಾಹುಲ್ ತಿಡೆನೋವಿನ ಕಾರಣದಿಂದಾಗಿ ಐಪಿಎಲ್ ಕೊನೆಯ ಹಂತದ ಬಳಿಕ ಹೊರಗುಳಿದಿದ್ದರು. ಬಳಿಕ ಶಸ್ಸತ್ರಚಿಕಿತ್ಸೆಗೆ ಕೂಡ ಒಳಗಾಗಿದ್ದ ರಾಹುಲ್ ಏಷ್ಯಾಕಪ್ ಟೂರ್ನಿಗೂ ಮುನ್ನ ಫಿಟ್ನೆಸ್ ಕಂಡುಕೊಂಡಿದ್ದರು. ಆದರೆ ಏಷ್ಯಾ ಕಪ್ಗೆ ಸಿದ್ಧತೆ ನಡೆಸುತ್ತಿರುವಾಗಲೇ ಕೆಎಲ್ ರಾಹುಲ್ ಮತ್ತೆ ಗಾಯಕ್ಕೆ ತುತ್ತಾಗಿದ್ದರು.

ಕಳೆದ ವಾರ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ತಂಡದ ಆಯ್ಕೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ಕೆಎಲ್ ರಾಹುಲ್ ಮತ್ತೆ ಗಾಯಕ್ಕೆ ತುತ್ತಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಆರಂಭಿಕ ಒಂದೆರಡು ಪಂದ್ಯಗಳಿಂದ ಮಾತ್ರವೇ ಹೊರಗುಳಿಯಬಹುದು ಎನ್ನುವ ಸುಳಿವು ನೀಡಿದ್ದರು. ಇದೀಗ ಕೋಚ್ ದ್ರಾವಿಡ್ ಈ ಇದನ್ನು ಖಚಿತಪಡಿಸಿದ್ದಾರೆ.
ಏಷ್ಯಾಕಪ್ ಟೂರ್ನಿಯ ಮೊದಲ ಎರಡು ಪಂದ್ಯಗಳಿಂದ ಕೆಎಲ್ ರಾಹುಲ್ ಹೊರಗುಳಿಯಲಿದ್ದಾರೆ. ಶನಿವಾರ ಪಾಕಿಸ್ತಾನದ ವಿರುದ್ಧ ಭಾರತ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು ಆಡಿದರೆ ನಂತರ ನಡೆಯುವ ನೇಪಾಳ ವಿರುದ್ಧದ ಪಂದ್ಯದಿಂದ ರಾಹುಲ್ ಹೊರಗುಳಿಯಲಿದ್ದಾರೆ. ಅದಾದ ಬಳಿಕ ತಂಡಕ್ಕೆ ರಾಹುಲ್ ಮರಳಲಿದ್ದಾರೆ ಎಂದು ಕೋಚ್ ರಾಹುಲ್ ದ್ರಾವಿಡ್ ಬಹಿರಂಗಪಡಿಸಿದರು.
ಪಾಕಿಸ್ಥಾನದ ವಿರುದ್ಧದ ಭಾರತ ಮೊದಲ ಪಂದ್ಯವನ್ನು ಶನಿವಾರ ಸಪ್ಟೆಂಬರ್ 2ರಂದು ಆಡಲಿದ್ದೆ ಇದಕ್ಕಾಗಿ ಭಾರತ ತಂಡದ ಜೊತೆಗೆ ರಾಹುಲ್ ಶ್ರೀಲಂಕಾಗೆ ಪ್ರಯಾಣಿಸುವುದಿಲ್ಲ ಎಂದಿದ್ದಾರೆ ರಾಹುಲ್ ದ್ರಾವಿಡ್. ಶ್ರೀಲಂಕಾಗೆ ಪ್ರಯಾಣ ಬೆಳೆಸುವದಕ್ಕೂ ಮುನ್ನ ಬೆಂಗಳೂರಿನಲ್ಲಿ ಕೋಚ್ ದ್ರಾವಿಡ್ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ.
"ಕೆಎಲ್ ರಾಹುಲ್ ಬಗ್ಗೆ ಸ್ಪಷ್ಟತೆಯನ್ನು ನೀಡಬೇಕಿದೆ. ಅವರು ಈ ವಾರ ನಮ್ಮೊಂದಿಗೆ ನಿಜಕ್ಕೂ ಉತ್ತಮವಾಗಿ ಕಳೆದಿದ್ದಾರೆ. ಅವರು ಅಭ್ಯಾಸವನ್ನು ಕೂಡ ನಡೆಸಿದ್ದು ಅದ್ಭುತವಾಗಿ ಚೇತರಿಕೆ ಕಂಡಿದ್ದಾರೆ. ಆದರೆ ಅವರು ಮೊದಲ ಭಾಗಕ್ಕೆ ಲಭ್ಯವಾಗುವುದಿಲ್ಲ. ಕ್ಯಾಂಡಿಯಲ್ಲಿ ನಡೆಯಲಿರುವ ಪಂದ್ಯಗಳಿಗೆ ಅಲಭ್ತವಾಗಲಿದ್ದಾರೆ" ಎಂದು ರಾಹುಲ್ ಡ್ರಾವಿಡ್ ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತ ಆಗಸ್ಟ್ 30ರಂದು ಶ್ರೀಲಂಕಾಗೆ ಪ್ರಯಾಣ ಬೆಳೆಸಲಿದ್ದು ಈ ತಂಡದ ಜೊತೆಗೆ ರಾಹುಲ್ ತೆರಳುವುದಿಲ್ಲ ಎನ್ನುವುದನ್ನು ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ. ಎನ್ಸಿಎನಲ್ಲಿ ಆಗಸ್ಟ್ 4ರಂದು ಅವರ ಫಿಟ್ನೆಸ್ ಬಗ್ಗೆ ಸ್ಪಷ್ಟತೆಯನ್ನು ಪಡೆದುಕೊಳ್ಳಲಾಗುತ್ತದೆ ಎಂದಿದ್ದು ಮುಂದಿನ ಪಂದ್ಯಗಳಿಗೆ ಲಭ್ಯವಾಗುವ ಬಗ್ಗೆ ಅಂದು ಖಚಿತ ಮಾಹಿತಿ ದೊರೆಯಲಿದೆ ಎಂದಿದ್ದಾರೆ.
ಇನ್ನು ಭಾರತ ತಂಡದ ಆಟಗಾರರು ಬೆಂಗಳೂರಿನ ಆಲೂರಿನಲ್ಲಿ 6 ದಿನಗಳ ಶಿಬಿರದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕೋಚ್ ದ್ರಾವಿಡ್ ಕೂಡ ತಂಡದ ಜೊತೆಗಿದ್ದರು. ಈ ಮೂಲಕ ಏಷ್ಯಾ ಕಪ್ ಟೂರ್ನಿಗೆ ಟೀಮ್ ಇಂಡಿಯಾ ಸಿದ್ಧತೆ ನಡೆಸಿದೆ. ಇನ್ನು ಕೆಎಲ್ ರಾಹುಲ್ ಅವರಿಗೆ ಕವರ್ ಆಗಿ ಮೀಸಲು ಆಟಗಾರನಾಗಿ ಸಂಜು ಸ್ಯಾಮ್ಸನ್ ತಂಡದ ಜೊತೆಗೆ ಪ್ರಯಾಣಿಸಲಿದ್ದಾರೆ.
India squad: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.