ಭಾನುವಾರ ಮಳೆಯಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್-4 ಸುತ್ತಿನ ಪಂದ್ಯ ಪೂರ್ಣ ನಡೆಯಲಿಲ್ಲ. ಆದರೆ, ಈಗ ಪಂದ್ಯವು ಮೀಸಲು ದಿನ ಅಂದರೆ ಸೋಮವಾರದಂದು (ಸೆ 11) ನಡೆಯಲಿದೆ. ಆದರೆ ಭಾರತ-ಪಾಕಿಸ್ತಾನದ ಪಂದ್ಯ ಮೀಸಲು ದಿನದಂದೂ ಪೂರ್ಣವಾಗದಿದ್ದರೆ ಅಥವಾ ರದ್ದುಗೊಂಡರೆ ಏನಾಗುತ್ತದೆ?
ಇದೇ ವೇಳೆ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಫೈನಲ್ ತಲುಪಬಹುದೇ? ಈ ಎಲ್ಲ ಲೆಕ್ಕಾಚಾರದ ಚರ್ಚೆ ಆರಂಭವಾಗಿವೆ. ಹವಾಮಾನ ಇಲಾಖೆಯ ಪ್ರಕಾರ, ಸೋಮವಾರ ಕೊಲಂಬೊದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಟೀಂ ಇಂಡಿಯಾದ ಫೈನಲ್ ಆಡುವ ಕನಸು ಭಗ್ನವಾಗಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಒಂದು ವೇಳೆ ಪಂದ್ಯ ರದ್ದಾದರೆ ಉಭಯ ತಂಡಗಳು ತಲಾ 1 ಅಂಕ ಪಡೆಯಲಿವೆ. ಈ ಮೂಲಕ 2 ಪಂದ್ಯಗಳ ಬಳಿಕ ಪಾಕಿಸ್ತಾನ 3 ಅಂಕ ಗಳಿಸಲಿದೆ. ಆದರೆ ಭಾರತ ತಂಡವು 1 ಪಂದ್ಯವನ್ನು ಆಡಿದ ನಂತರ 1 ಅಂಕವನ್ನು ಹೊಂದಿರುತ್ತದೆ. ಅದೇ ಸಮಯದಲ್ಲಿ ಪಾಕಿಸ್ತಾನದ ನಂತರ ಭಾರತ ತಂಡ ಶ್ರೀಲಂಕಾ ವಿರುದ್ಧ ಆಡಲಿದೆ.
ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು ಸೋಲಿಸಿದರೆ ಟೀಂ ಇಂಡಿಯಾ 5 ಅಂಕಗಳೊಂದಿಗೆ ಫೈನಲ್ ತಲುಪ ಬಹುದು. ಅದೇ ಸಮಯದಲ್ಲಿ, ಭಾರತ ತಂಡವು ಶ್ರೀಲಂಕಾ ಅಥವಾ ಬಾಂಗ್ಲಾದೇಶ ವಿರುದ್ಧ ಯಾವುದೇ ಪಂದ್ಯದಲ್ಲಿ ಸೋತರೆ, ನಂತರ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ.

ಪಾಕಿಸ್ತಾನ ತನ್ನ ಹಿಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿತ್ತು. ಸೂಪರ್-4 ಸುತ್ತಿನಲ್ಲಿ ಬಾಂಗ್ಲಾದೇಶ ಇದುವರೆಗೆ 2 ಪಂದ್ಯಗಳನ್ನು ಆಡಿದೆ. ಎರಡೂ ಪಂದ್ಯಗಳಲ್ಲಿ ಶಕಿಬ್ ಅಲ್ ಹಸನ್ ಪಡೆ ಸೋಲು ಕಂಡಿದೆ. ಶ್ರೀಲಂಕಾ ತನ್ನ ಮೊದಲ ಸೂಪರ್-4 ಸುತ್ತಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿತ್ತು. ಈ ಮೂಲಕ ದಶೂನ್ ಶನಕ ತಂಡ 2 ಅಂಕ ಗಳಿಸಿದೆ.
ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೆ ಬಹುತೇಕ ಅರ್ಹತೆ ಪಡೆಯಲಿದೆ. ಹೀಗಾಗಿ ಟೀಮ್ ಇಂಡಿಯಾಗೆ ಎರಡೂ ಪಂದ್ಯಗಳು ಮಹತ್ವದ್ದಾಗಿವೆ. ಸೋಮವಾರ ಪೂರ್ಣ ಪ್ರಮಾಣದ ಆಟ ನಡೆಯಬೇಕೆಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಅಲ್ಲದೆ ಟೀಮ್ ಇಂಡಿಯ ಗೆಲುವಿನ ಗೆರೆ ದಾಟುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಫೈನಲ್ ಕನಸು ಸುಲಭವಾಗುತ್ತದೆ.
ಭಾನುವಾರ ಮಳೆಯಿಂದಾಗಿ ಪಂದ್ಯಾರದ್ದಾಗ 24.1 ಗಳ ಪಂದ್ಯ ಮಾತ್ರ ನಡೆಯಿತು. ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಆರಂಭ ಪಡೆಯಿತು. ಟೀಮ್ ಇಂಡಿಯಾದ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಅರ್ಧ ಶತಕ ಬಾರಿಸಿ ತಂಡಕ್ಕೆ ನೆರವಾದರು. ಮಳೆಯಿಂದಾಗಿ ಪಂದ್ಯ ನಿಂತಾಗ ಭಾರತ 2 ವಿಕೆಟ್ ನಷ್ಟಕ್ಕೆ 147 ರನ್ ಸೇರಿಸಿದೆ.