ಸೋಮವಾರ, ಸೆಪ್ಟೆಂಬರ್ 4ರಂದು ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುವ 2023ರ ಏಷ್ಯಾ ಕಪ್ ಪಂದ್ಯಾವಳಿಯ 5ನೇ ಪಂದ್ಯದಲ್ಲಿ ಭಾರತ ಮತ್ತು ಕ್ರಿಕೆಟ್ ಶಿಶು ನೇಪಾಳ ತಂಡಗಳು ಮುಖಾಮುಖಿಯಾಗುತ್ತಿವೆ.
ಇಂದಿನ ಪಂದ್ಯ ಉಭಯ ತಂಡಗಳ ನಡುವಿನ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಇಲ್ಲಿ ಗೆಲ್ಲುವ ತಂಡ ಪಂದ್ಯಾವಳಿಯ ಸೂಪರ್ 4 ಹಂತಕ್ಕೆ ಅರ್ಹತೆ ಪಡೆಯಲಿದೆ. ಮೇಲ್ನೋಟಕ್ಕೆ ಭಾರತವೇ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಶನಿವಾರದಂದು ಪಾಕಿಸ್ತಾನ ತಂಡದ ವಿರುದ್ಧದ ಭಾರತದ ಮೊದಲ ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿತ್ತು. ಹೀಗಾಗಿ ನೇಪಾಳ ವಿರುದ್ಧದ ಮುಂದಿನ ಪಂದ್ಯದ ಮುನ್ಸೂಚನೆಯು ಪ್ರಕಾಶಮಾನವಾಗಿ ಕಾಣುತ್ತಿಲ್ಲ, ಹವಾಮಾನ ಇಲಾಖೆಯು ಗುಡುಗು ಸಹಿತ ಮಳೆ ಮತ್ತು ಮೋಡದ ಮುಸುಕಿದ ವಾತಾವರಣದ ಮುನ್ಸೂಚನೆ ನೀಡಿದೆ.
ಇನ್ನು ಎರಡೂ ತಂಡಗಳ ಸಮೀಕರಣ ಸರಳವಾಗಿದ್ದು, ಸೋಮವಾರದ ಪಂದ್ಯವನ್ನು ಗೆದ್ದು ಸೂಪರ್ 4ಕ್ಕೆ ಅರ್ಹತೆ ಪಡೆಯಲು ಎದುರು ನೋಡುತ್ತಿವೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದುಗೊಂಡರೆ, ಉಭಯ ತಂಡಗಳು ತಲಾ 1 ಅಂಕ ಗಳಿಸುತ್ತಾರೆ ಮತ್ತು ಭಾರತವು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ.
ಭಾರತ ತಂಡ 2 ಪಂದ್ಯಗಳಿಂದ 2 ಅಂಕಗಳೊಂದಿಗೆ ಲೀಗ್ ಹಂತ ಮುಗಿಸಲಿದೆ ಮತ್ತು ನೇಪಾಳ ತಂಡ 2 ಪಂದ್ಯಗಳಿಂದ ಕೇವಲ 1 ಅಂಕವನ್ನು ಹೊಂದಲಿದೆ.

ಇನ್ನು ಭಾರತ ತಂಡದ ಆಡುವ 11ರ ಬಳಗದ ಬಗ್ಗೆ ಮಾತನಾಡುವುದಾದರೆ, ವೇಗಿ ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ತಮ್ಮ ಮೊದಲ ಮಗುವಿಗೆ ಜನ್ಮ ನೀಡುವ ಕಾರಣ ಜೊತೆಗಿರಲು ಮುಂಬೈಗೆ ಮರಳಿದ್ದಾರೆ. ಭಾರತ ತಂಡ ಸೂಪರ್ 4 ಹಂತಕ್ಕೆ ಅರ್ಹತೆ ಪಡೆದರೆ ಜಸ್ಪ್ರೀತ್ ಬುಮ್ರಾ ಶ್ರೀಲಂಕಾಗೆ ಮರಳುವ ಸಾಧ್ಯತೆ ಇದೆ.
ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಶಮಿ ಆಡುವ 11ರಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಆದರೆ, ತಂಡದ ಮ್ಯಾನೇಜ್ಮೆಂಟ್ ವೇಗಿ ಪ್ರಸಿದ್ಧ್ ಕೃಷ್ಣ ಅವರ ಫಿಟ್ನೆಸ್ ಅನ್ನು ಪರೀಕ್ಷಿಸಲು ಎದುರು ನೋಡಬಹುದು.
ಪ್ರಸಿದ್ಧ್ ಕೃಷ್ಣ ಅವರು ಜಸ್ಪ್ರೀತ್ ಬುಮ್ರಾ ಜೊತೆಗೆ ಕಳೆದ ತಿಂಗಳು ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಸಮಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪುನರಾಗಮನ ಮಾಡಿದರು.
ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತದ ಅಗ್ರ ಬ್ಯಾಟಿಂಗ್ ಕ್ರಮಾಂಕವು ವಿಫಲವಾದ ನಂತರ, ಸೂರ್ಯಕುಮಾರ್ ಯಾದವ್ ಅಥವಾ ತಿಲಕ್ ವರ್ಮಾಗೆ ನೇಪಾಳ ವಿರುದ್ಧ ಅವಕಾಶ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಮತ್ತೊಂದೆಡೆ, ನೇಪಾಳ ತಂಡದಲ್ಲಿ ಭೀಮ್ ಶಾರ್ಕಿ ಅವರು ಮೀಸಲು ಬ್ಯಾಟರ್ ಆಗಿ ತಂಡದ ಭಾಗವಾಗಿದ್ದಾರೆ. ಆದರೆ ಮುಲ್ತಾನ್ನಲ್ಲಿ ನಡೆದ 2023ರ ಏಷ್ಯಾ ಕಪ್ನ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 238 ರನ್ಗಳಿಂದ ಸೋತ ಅದೇ 11ರ ಬಳಗವನ್ನು ನೇಪಾಳ ಕಣಕ್ಕಿಳಿಸಬಹುದು.
ಭಾರತ ಮತ್ತು ನೇಪಾಳ ತಂಡಗಳ ಸಂಭಾವ್ಯ ಆಡುವ 11ರ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ/ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.
ನೇಪಾಳ: ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ರೋಹಿತ್ ಪೌಡೆಲ್ (ನಾಯಕ), ಆರಿಫ್ ಶೇಖ್, ಸೋಂಪಾಲ್ ಕಾಮಿ, ದೀಪೇಂದ್ರ ಸಿಂಗ್ ಐರಿ, ಗುಲ್ಸನ್ ಝಾ, ಕುಶಾಲ್ ಮಲ್ಲಾ, ಕರಣ್ ಕೆಸಿ, ಸಂದೀಪ್ ಲುಮಿಶ್ಚಾನೆ, ಲಲಿತ್ ರಾಜಬನ್ಶಿ.