ಸದ್ಯ ಶ್ರೀಲಂಕಾದಲ್ಲಿ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಗೆ ಮಳೆ ಬೆದರಿಕೆ ಒಡ್ಡುತ್ತಿದೆ. ಇದು ಕೊಲಂಬೊದಲ್ಲಿ ನಡೆಯಬೇಕಿದ್ದ ಸೂಪರ್ 4 ಮತ್ತು ಫೈನಲ್ ಪಂದ್ಯಗಳಿಗೆ ದೊಡ್ಡ ಆತಂಕವಾಗಿತ್ತು.
ಇದೀಗ ಶ್ರೀಲಂಕಾ ರಾಜಧಾನಿಯಲ್ಲಿನ ಹವಾಮಾನವು ಸುಧಾರಣೆಯ ಲಕ್ಷಣಗಳನ್ನು ಕಾಣುತ್ತಿರುವುದರಿಂದ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಮತ್ತು ಫೈನಲ್ ಪಂದ್ಯಗಳನ್ನು ಕೊಲಂಬೊದಲ್ಲಿಯೇ ನಡೆಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮಂಗಳವಾರ ನಿರ್ಧರಿಸಿದೆ.
ಕೆಲವು ದಿನಗಳಿಂದ ಕೊಲಂಬೊದಲ್ಲಿ ಭಾರೀ ಮಳೆ ಸುರಿದ ನಂತರ, ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಮತ್ತು ಫೈನಲ್ ಪಂದ್ಯಗಳನ್ನು ಹಂಬಂಟೋಟಾಗೆ ಸ್ಥಳಾಂತರಿಸಬಹುದು ಎಂದು ವರದಿಯಾಗಿದ್ದವು.

ಸೂಪರ್ 4 ಮತ್ತು ಫೈನಲ್ ಪಂದ್ಯಗಳನ್ನು ಕೊಲಂಬೊದಲ್ಲೇ ಆಡಿಸುವ ನಿರ್ಧಾರಕ್ಕೆ ಬರುವ ಮೊದಲು ಶ್ರೀಲಂಕಾ ಕ್ರಿಕೆಟ್ (ಎಸ್ಎಲ್ಸಿ), ಆತಿಥೇಯ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಅಧಿಕೃತ ಪ್ರಸಾರಕರೊಂದಿಗೆ ಎಸಿಸಿ ಮಾತುಕತೆ ನಡೆಸಿದೆ ಎಂದು ಪಿಟಿಐ ವರದಿ ಮಾಡಿದೆ.
ಪಂದ್ಯಾವಳಿಯ ಬ್ರಾಡ್ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ತಮ್ಮ ಉಪಕರಣಗಳು ಮತ್ತು ಸಿಬ್ಬಂದಿಯನ್ನು ದಕ್ಷಿಣದ ಜಿಲ್ಲೆಯಾದ ಹಂಬಂಟೋಟಾಗೆ ಸ್ಥಳಾಂತರಿಸುವ ತೊಂದರೆಗಳನ್ನು ಎಸಿಸಿ ವಿವರಿಸಿದೆ.
ವಾಸ್ತವವಾಗಿ, ಕಳೆದ ಕೆಲವು ವಾರಗಳಿಂದ ಬರ ಅನುಭವಿಸುತ್ತಿರುವುದರಿಂದ ಐದು ಏಷ್ಯಾ ಕಪ್ ಸೂಪರ್ 4 ಪಂದ್ಯಗಳು ಮತ್ತು ಫೈನಲ್ಗೆ ಹಂಬಂಟೋಟವನ್ನು ಪರ್ಯಾಯ ತಾಣವಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯೇ ಸೂಚಿಸಿತ್ತು.
ಸೆಪ್ಟೆಂಬರ್ 10ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದೊಂದಿಗೆ ಸೂಪರ್ 4ರ ಶ್ರೀಲಂಕಾ ಲೆಗ್ ಆರಂಭವಾಗಲಿದೆ. 2023ರ ಏಷ್ಯಾ ಕಪ್ನಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು ಎರಡನೇ ಬಾರಿಗೆ ಎದುರಿಸಲಿದೆ.
ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಅರ್ಧಶತಕಗಳ ನೆರವಿನಿಂದ ಭಾರತ 266 ರನ್ ಕಲೆಹಾಕಿತ್ತು. ಆದರೆ ಉಭಯ ತಂಡಗಳ ನಡುವಿನ ಆ ಲೀಗ್ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತು.
ಮುಂದಿನ ಪಂದ್ಯಗಳನ್ನು ಪಲ್ಲೆಕೆಲೆ ಮತ್ತು ದಂಬುಲ್ಲಾಗೆ ಸ್ಥಳಾಂತರಿಸುವ ಆಲೋಚನೆಯನ್ನು ಎಸಿಸಿ ಮಾಡಿತ್ತು, ನಂತರ ಅದನ್ನು ಕೈಬಿಡಲಾಯಿತು.
ಪಲ್ಲೆಕೆಲೆಯಲ್ಲಿ ಕೂಡ ಭಾರೀ ಮಳೆಯಾಗುತ್ತಿರುವಾಗ, ದಂಬುಲ್ಲಾದ ರಂಗಿರಿ ಅಂತಾರಾಷ್ಟ್ರೀಯ ಕ್ರೀಡಾಂಗಣವು ಹೊಸ ಫ್ಲಡ್ಲೈಟ್ಗಳನ್ನು ಮತ್ತು ಇತರ ಕೆಲವು ಸೌಲಭ್ಯಗಳನ್ನು ಸ್ಥಾಪಿಸಲಾಗುತ್ತಿದೆ. ಭಾರತದ ಎರಡೂ ಗುಂಪಿನ ಪಂದ್ಯಗಳು ಮಳೆ-ಬಾಧಿತವಾಗಿವೆ.
ಕ್ಯಾಂಡಿಯ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಘರ್ಷಣೆ ಶನಿವಾರದ ಭಾರೀ ಮಳೆಯಿಂದಾಗಿ ಒಂದು ಇನ್ನಿಂಗ್ಸ್ನ ನಂತರ ರದ್ದಾಯಿತು. ಆದರೆ, ಸೋಮವಾರ ನೇಪಾಳ ವಿರುದ್ಧದ ಭಾರತದ ಪಂದ್ಯವೂ ಮಳೆಯಿಂದಾಗಿ ಓವರ್ ಕಡಿತಗೊಳಿಸಿ ಆಟಬೇಕಾಯಿತು.