ಏಷ್ಯಾಕಪ್ ಟೂರ್ನಿ ಅಂತ್ಯವಾಗಿದ್ದು ಟೀಮ್ ಇಂಡಿಯಾ ದಾಖಲೆಯ 8ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದು ವೇಗದ ಬೌಲರ್ ಮೊಹಮ್ಮದ್ ಸಿರಾಜ್. ಪಂದ್ಯದ ನಾಲ್ಕನೇ ಓವರ್ನಲ್ಲಿ ಶ್ರೀಲಂಕಾ ತಂಡದ 4 ವಿಕೆಟ್ಗಳನ್ನು ಕಬಳಿಸಿದ ಅವರು ಪಂದ್ಯದಲ್ಲಿ ಒಟ್ಟು 6 ವಿಕೆಟ್ಗಳನ್ನು ಪಡೆಯುವ ಮೂಲಕ ಲಂಕಾ ತಂಡಕ್ಕೆ ಊಹಿಸಲೂ ಸಾಧ್ಯವಾಗದ ಆಘಾತ ನೀಡಿದರು.
ಈ ಅಮೋಘ ಬೌಲಿಂಗ್ ಪ್ರದರ್ಶನ ಬಗ್ಗೆ ಸ್ವತಃ ಮೊಹಮ್ಮದ್ ಸಿರಾಜ್ ಪ್ರತಿಕ್ರಿಯೆ ನೀಡಿದ್ದು ಸ್ವತಃ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದು ತನಗೆ ಕನಸಿನಂತೆ ಭಾಸವಾಗುತ್ತಿದೆ ಎಂದು ಈ ಅದ್ಭುತ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಇದೇ ವರ್ಷ ತಿರುವನಂತಪಿರಂನಲ್ಲಿ ಶ್ರೀಲಂಕಾ ವಿರುದ್ಧವೇ ಐದು ವಿಕೆಟ್ಗಳ ಗೊಂಚಲು ಪಡೆಯುವ ಅವಕಾಶ ಕಳೆದುಕೊಂಡಿದ್ದೆ ಎನ್ನುವುದನ್ನು ನೆನಪಿಸಿಕೊಂಡಿದ್ದಾರೆ.

"ಇದು ಕನಸಿನ ರೀತಿ ಅನುಭವವಾಗುತ್ತಿದೆ. ಕಳೆದ ಬಾರಿ ಶ್ರೀಲಂಕಾ ವಿರುದ್ಧವೇ ತಿರುವನಂತಪುರಂನಲ್ಲಿ ಇದೇ ರೀತಿಯ ಪ್ರದರ್ಶನ ನೀಡಿದ್ದೆ. ಆರಂಭದಲ್ಲಿಯೇ ನಾಲ್ಕು ವಿಕೆಟ್ಗಳನ್ನು ಪಡೆದುಕೊಂಡಿದ್ದೆ, ಆದರೆ ಐದು ವಿಕೆಟ್ಗಳ ಗೊಂಚು ಸಾಧ್ಯವಾಗಿರಲಿಲ್ಲ. ನಿಮಗೆ ಎಷ್ಟು ಅರ್ಹತೆಯಿದೆಯೋ ಅಷ್ಟೆ ದೊರೆಯುತ್ತದೆ ಎನ್ನುವುದನ್ನು ಅಂದು ಅರ್ಥ ಮಾಡಿಕೊಂಡಿದ್ದೆ" ಎಂದಿದ್ದಾರೆ ಮೊಹಮ್ಮದ್ ಸಿರಾಜ್.
ಈ ಪಂದ್ಯದಲ್ಲಿ ಸಿರಾಜ್ ಆರು ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಸಿರಾಜ್ ಈ ಪಂದ್ಯದಲ್ಲಿ ಮಾಡಿರುವ ಬೌಲಿಂಗ್ ಪ್ರದರ್ಶನ ಏಷ್ಯಾಕಪ್ ಟೂರ್ನಿಯಲ್ಲಿಯೇ ಎರಡನೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಎನಿಸಿಕೊಂಡಿದೆ. ಅಜಂತಾ ಮೆಂಡಿಸ್ ಕೂಡ ಆರು ವಿಕಟ್ಗಳನ್ನು ಪಡೆದುಕೊಂಡು ಈ ದಾಖಲೆ ಬರೆದಿದ್ದರು.
ಇನ್ನು ಈ ಸಂದರ್ಭದಲ್ಲಿ ತಾನು ವಿಶೇಷವಾಗಿ ಏನನ್ನೂ ಪ್ರಯತ್ನಿಸದೆ ಬ್ಯಾಟರ್ಗಳೇ ತಪ್ಪೆಸಗುವಂತೆ ಮಾಡಿದೆ ಎಂದಿದ್ದಾರೆ. "ಇಂದು ವಿಶೇಷವಾಗಿ ಏನನ್ನೂ ನಾನು ಪ್ರಯತ್ನಿಸಲಿಲ್ಲ. ವೈಟ್ಬಾಲ್ ಕ್ರಿಕೆಟ್ನಲ್ಲಿ ನಾನು ಯಾವಾಗಲೂ ಸ್ವಿಂಗ್ಗಾಗಿ ಪ್ರಯ್ನಿಸುತ್ತೇನೆ. ಆದರೆ ಕಳೆದ ಪಂದ್ಯದಲ್ಲಿ ನನಗೆ ಅದು ಹೆಚ್ಚು ಸಹಾಯಮಾಡಿರಲಿಲ್ಲ. ಆದರೆ ಇಂದು ಸ್ವಿಂಗ್ ಆಗುತ್ತಿತ್ತು. ನಾನು ಹೆಚ್ಚು ಔಟ್ ಸ್ವಿಂಗ್ ಮೂಲಕ ವಿಕೆಟ್ ಪಡೆದೆ. ಬ್ಯಾಟರ್ಗಳು ಚೆಂಡನ್ನು ಡ್ರೈವ್ಗೆ ಪ್ರಯತ್ನಿಸುಂತೆ ಮಾಡಿದ್ದೆ" ಎಂದಿದ್ದಾರೆ ಮೊಹಮ್ಮದ್ ಸಿರಾಜ್.
ಇನ್ನು ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಆರು ವಿಕೆಟ್ಗಳ ಗೊಂಚಲು ಪಡೆದ ಬಳಿಕ ಬಾಲಂಗೋಚಿಗಳನ್ನು ಹಾರ್ದಿಕ್ ಪಾಂಡ್ಯ ಕೆಡವುವಲ್ಲಿ ಯಶಸ್ವಿಯಾದರು. ಅಂತಿಮ ಮೂರು ವಿಕೆಟ್ಗಳು ಹಾರ್ದಿಕ್ ಪಾಲಾಯಿತು. ಈ ಮೂಲಕ ಶ್ರೀಲಂಕಾ ತಂಡ 50 ರನ್ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ ಸುಲಭ ಗುರಿ ನಿಗದಿಪಡಿಸಿತು.
ಇನ್ನು ಟೀಮ್ ಇಂಡಿಯಾ ಈ ಸುಲಭ ಗುರಿಯನ್ನು ಕೇವಲ 6.1 ಓವರ್ಗಳಲ್ಲಿಯೇ ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು. ಆರಂಭಿಕ ಆಟಗಾರರಾದ ಶುಬ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ಪಂದ್ಯವನ್ನು ಶೀಘ್ರದಲ್ಲಿಯೇ ಮುಗಿಸಲಿ ಕಾರಣವಾದರು. ಈ ಮೂಲಕ ಭಾರತ ಏಷ್ಯಾಕಪ್ ಟೂರ್ನಿಯಲ್ಲಿ ಚಾಂಪಿಯನ್ ಎನಿಸಿಕೊಂಡಿದೆ.