ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾ ಫೈನಲ್ಗೆ ಪ್ರವೇಶಿಸಿದ್ದು ಚಾಂಪಿಯನ್ ಪಟ್ಟಕ್ಕೇರಲು ಕೇವಲ ಒಂದು ಹೆಜ್ಜೆಯಷ್ಟೇ ಹಿಂದಿದೆ. ಶ್ರೀಲಂಕಾ ತಂಡವನ್ನು ಭಾನುವಾರ ಭಾರತ ಫೈನಲ್ನಲ್ಲಿ ಎದುರಿಸಲಿದ್ದು 8ನೇ ಬಾರಿಗೆ ಏಷ್ಯಾ ಕಪ್ ಟ್ರೋಫಿಯನ್ನು ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಓರ್ವ ಆಟಗಾರನ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ವಿಶೇಷ ಮಾತುಗಳನ್ನಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾದ ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಬಗ್ಗೆ ಸುನಿಲ್ ಗವಾಸ್ಕರ್ ವಿಶೇಷವಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಕುಲ್ದೀಪ್ ಭಾರತ ತಂಡದ ಪರವಾಘಿ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಪಡೆದ ಬೌಲರ್ ಆಗಿದ್ದಾರೆ. ಆಡಿರುವ ಮೂರು ಇನ್ನಿಂಗ್ಸ್ಗಳಲ್ಲಿ ಕುಲ್ದೀಪ್ 9 ವಿಕೆಟ್ ಸಂಪಾದಿಸಿದ್ದಾರೆ. ಇನ್ನು ಕೊಲಂಬೋದಲ್ಲಿಯೇ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಐದು ವಿಕೆಟ್ಗಳ ಗೊಂಚಲನ್ನು ಕೂಡ ಪಡೆದಿದ್ದಾರೆ ಎನ್ನುವುದು ಗಮನಾರ್ಹ.

ಈ ಬಗ್ಗೆ ಮಾತನಾಡುತ್ತಾ ಸುನಿಲ್ ಗವಾಸ್ಕರ್, "ಕುಲ್ದೀಪ್ ಯಾದವ್ ಎಲ್ಲರಿಗೂ ತನ್ನ ತಾಕತ್ತು ಏನು ಎನ್ನುವುದನ್ನು ತೋರಿಸಿದ್ದಾರೆ. ಬಲಗೈ ಆಗಿರಲಿ ಅಥವಾ ಎಡಗೈ ಆಗಿರಲಿ ರಿಸ್ಟ್ ಸ್ಪಿನ್ ಆಗಿದ್ದರೆ ವಿಕೆಟ್ ಪಡೆಯುತ್ತೀರಿ. ವಿಕೆಟ್ ಎನ್ನುವುದು ವೈಟ್ವಾಲ್ ಕ್ರಿಕೆಟ್ನಲ್ಲಿ ಅತ್ಯುತ್ತಮ ಡಾಟ್ ಬಾಲ್. ಅಲ್ಲದೆ ಅವರು ಸ್ವಲ್ಪ ಫ್ಲ್ಯಾಟ್ ಆಗಿಯೂ ಬೌಲಿಂಗ್ ನಡೆಸುತ್ತಾರೆ. ಅದು ಚೆಂಡು ಗಾಳಿಯಲ್ಲಿ ಹೆಚ್ಚು ಹೊತ್ತು ಇರುವಂತೆ ಮಾಡುವುದಿಲ್ಲ. ಹಾಗಾಗಿ ಆತನ ಚೆಂಡನ್ನು ಎದುರಿಸುವುದು ಬ್ಯಾಟರ್ಗಳಿಗೆ ಹೆಚ್ಚಿನ ಸವಾಲು" ಎಂದಿದ್ದಾರೆ ಗವಾಸ್ಕರ್.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಆಡುವ ಬಳಗದಿಮದ ವಿಶ್ರಾಂತಿ ಪಡೆದುಕೊಂಡಿದ್ದರು. ಶ್ರೀಲಂಕಾ ವಿರುದ್ಧ ಆಡಿದ್ದ ತಂಡದಲ್ಲಿ ಭಾರತ ಐದು ಬದಲಾವನೆಯೊಂದಿಗೆ ಕಣಕ್ಕಿಳಿದಿತ್ತು. ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ತೀವ್ರ ಪೈಪೋಟಿಯನ್ನು ನೀಡಿದ್ದರೂ ಗೆಲುವು ಸಾಧ್ಯವಾಗಿರಲಿಲ್ಲ.
ಇನ್ನು ಟೀಮ್ ಇಂಡಿಯಾ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಿದ್ದಾಗ ಯುವ ಸ್ಪಿನ್ನರ್ ವೆಲ್ಲಲಗೆ ವಿರುದ್ಧ ಹಿನ್ನಡೆ ಅನುಭವಿಸಿತ್ತು. ಭಾರತದ ಐವರು ಬ್ಯಾಟರ್ಗಳಿಗೆ ವೆಲ್ಲಲಗೆ ಫೆವಿಲಿಯನ್ ಹಾದಿ ತೋರಿಸಿದ್ದರು. ಹಾಗಾಗಿ ವೆಲ್ಲಲ ಬೌಲಿಂಗನ್ನು ಭಾರತೀಯ ಬ್ಯಾಟರ್ಗಳು ಯಾವ ರೀತಿ ಎದುರಿಸಬಹುದು ಎನ್ನುವ ಬಗ್ಗೆಯೂ ಸಲಹೆ ನೀಡಿದ್ದಾರೆ.
"ನನ್ನ ಪ್ರಕಾರ ಭಾರತೀಯ ಬ್ಯಾಟರ್ಗಳು ವೆಲ್ಲಲಗೆ ಎಸೆದಲ್ಲಿ ಪಿಚ್ಚನ್ನು ಸಾಧ್ಯವಾದಷ್ಟು ಬೇಗನೆ ಕಂಡುಕೊಳ್ಳಬೇಕು. ಈ ಪಿಚ್ನಲ್ಲಿ ಅಂಥಾ ಎಸೆತವನ್ನು ಎದುರಿಸುವುದು ಸುಲಭವಿಲ್ಲ. ಆದರೆ ಪ್ರತಿ ಬಾರಿ ಆತ ಬೌಲಿಂಗ್ ನಡೆಸಿದಾಗಲೂ ಅದು ಕೆಲ ಹೊತ್ತು ಗಾಳಿಯಲ್ಲಿರುತ್ತದೆ. ಅಂಥಾ ಸಂದರ್ಭದಲ್ಲಿ ವೇಗವಾದ ಕಾಳ್ಚಲನೆಯೊಂದಿಗೆ ಅದನ್ನು ಡ್ರೈವ್ ಮಾಡಬೇಕು. ಪಿಚ್ ಫ್ಲ್ಯಾಟ್ ಆಗಿದ್ದು ಹೆಚ್ಚು ತಿರುವು ಇಲ್ಲ ಎಂದಾಗ ಇದನ್ನು ಪ್ರಯತ್ನಿಸಬಹುದು. ಆತನನ್ನು ಹೆಚ್ಚು ಮೇಲುಗೈ ಸಧಿಸಲು ಬಿಡಬಾರದು ಯೋಚಿಸುವಂತೆ ಮಾಡಬೇಕು" ಎಂದಿದ್ದಾರೆ ಗವಾಸ್ಕರ್.