ಶನಿವಾರ, ಸೆಪ್ಟೆಂಬರ್ 9ರಂದು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ.
ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ದಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.
ಲಾಹೋರ್ನಲ್ಲಿ ನಡೆದ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಸೋತಿರುವ ಬಾಂಗ್ಲಾದೇಶ ತಂಡ ಸದ್ಯ ಒತ್ತಡದಲ್ಲಿದ್ದಾರೆ. ಇಂದು ಶ್ರೀಲಂಕಾ ವಿರುದ್ಧ ಗೆಲ್ಲುವ ಮೂಲಕ ಪಂದ್ಯಾವಳಿಯಲ್ಲಿ ಉಳಿಯಲು ಬಯಸಿದ್ದಾರೆ. ಒಂದು ವೇಳೆ ಸೋತರೆ 2023ರ ಏಷ್ಯಾ ಕಪ್ನಿಂದ ಬಹುತೇಕ ಹೊರಬೀಳಲಿದೆ.

ಮತ್ತೊಂದೆಡೆ, ಶ್ರೀಲಂಕಾ ತಂಡ ಗುಂಪು ಹಂತದಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಈ ಹಿಂದೆ ಬಾಂಗ್ಲಾದೇಶ ತಂಡವನ್ನು ಐದು ವಿಕೆಟ್ಗಳಿಂದ ಸೋಲಿಸಿತ್ತು. ನಂತರ ಅಫ್ಘಾನಿಸ್ತಾನ ತಂಡವನ್ನು ಸೋಲಿಸಿ ಸೂಪರ್ 4ಗೆ ಅರ್ಹತೆ ಪಡೆದಿತ್ತು.
ದಸುನ್ ಶನಕ ನಾಯಕತ್ವದ ತಂಡವು ಇದೀಗ ಮತ್ತೊಮ್ಮೆ ಬಾಂಗ್ಲಾದೇಶ ತಂಡವನ್ನು ಎದುರಿಸುತ್ತಿದ್ದು, ಫೈನಲ್ಗೆ ಹತ್ತಿರವಾಗುವ ಗುರಿಯನ್ನು ಹೊಂದಿದೆ.
ಇನ್ನು ಕೊಲಂಬೊದಲ್ಲಿನ ಸದ್ಯದ ಹವಾಮಾನವು ಕ್ರಿಕೆಟ್ ಸ್ನೇಹಿಯಾಗಿಲ್ಲದ ಕಾರಣ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಪಂದ್ಯದ ಮೇಲೆ ಮಳೆ ಭೀತಿ ಎದುರಾಗಿದೆ. ಅಕ್ಯುವೆದರ್ ಪ್ರಕಾರ, ಕೊಲಂಬೊದಲ್ಲಿ ಸೆಪ್ಟೆಂಬರ್ 9, ಶನಿವಾರದಂದು ಶೇ.80ರಷ್ಟು ಮಳೆಯಾಗುವ ಸಾಧ್ಯತೆಯಿದೆ.
ಬಾಂಗ್ಲಾದೇಶ: ಮೊಹಮ್ಮದ್ ನಯಿಮ್, ಮೆಹಿದಿ ಹಸನ್ ಮಿರಾಜ್, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ತೌಹಿದ್ ಹೃದೋಯ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಶಮೀಮ್ ಹೊಸೈನ್, ನಸುಮ್ ಅಹ್ಮದ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್.
ಶ್ರೀಲಂಕಾ: ಪಾಥುಮ್ ನಿಸ್ಸಾಂಕ, ದಿಮುತ್ ಕರುಣರತ್ನೆ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಾಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಕಸುನ್ ರಜಿತ, ಮಥೀಶ ಪತಿರಾಣ.