ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಯ ಆರಂಭಕ್ಕೆ ಇನ್ನು ಕೇವಲ ಒಂದು ವಾರ ಮಾತ್ರವೇ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಆಟಗಾರರು ಈ ಟೂರ್ನಿಗೆ ಅಧಿಕೃತವಾಗಿ ಅಭ್ಯಾಸ ಆರಂಭಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಏಷ್ಯಾಕಪ್ಗೆ ಆಯ್ಕೆಯಾಗಿರುವ ಐರ್ಲೆಂಡ್ ಪ್ರವಾಸದಲ್ಲಿ ಇಲ್ಲದ ಆಟಗಾರರು ಇಂದು ಬೆಂಗಳೂರಿಗೆ ಬಂದಿಳಿದಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆನಿ(ಎನ್ಸಿಎ)ಯಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ರಾಹುಲ್ ದ್ರಾವಿಡ್ ನೇತೃತ್ವದ ಕೋಚಿಂಗ್ ತಂಡದ ಮಾರ್ಗದರ್ಶನದಲ್ಲಿ ಭಾರತ ತಂಡದ ಆಟಗಾರರು ಗುರುವಾರದಿಂದ ಅಭ್ಯಾಸವನ್ನು ಆರಂಭಿಸಲಿದ್ದಾರೆ. ಐರ್ಲೆಂಡ್ ಪ್ರವಾಸದಲ್ಲಿರುವ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಆಟಗಾರರಾದ ಪ್ರಸಿದ್ಧ್ ಕೃಷ್ಣ, ಜಸ್ಸಪ್ರೀತ್ ಬೂಮ್ರಾ ಹಾಗೂ ಸಂಜು ಸ್ಯಾಮ್ಸನ್ ಮುಂದಿನ ಮೂರು ದಿನಗಳಲ್ಲಿ ಈ ಶಿಬಿರವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಏಕದಿನ ಸರಣಿಯ ಮುಕ್ತಾಯದ ಬಳಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದುಕೊಂಡಿದ್ದರು. ಕೆಲ ಆಟಗಾರರು ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಐರ್ಲೆಂಡ್ನ ಡಬ್ಲಿನ್ಗೆ ಪ್ರಯಾಣ ಬೆಳೆಸಿದ್ದರೆ ಹಾರ್ದಿಕ್ ಪಾಂಡ್ಯ ಸೂರ್ಯಕುಮಾರ್ ಯಾದವ್ ಸೇರಿದಂತೆ ಇನ್ನೂ ಕೆಲ ಆಟಗಾರರು ವಿಂಡೀಸ್ ವಿರುದ್ಧದ ಟಿ20 ಸರಣಿಯ ಬಳಿಕ ಭಾರತಕ್ಕೆ ಮರಳಿದ್ದರು.
ಇನ್ನು ಕಳೆದ ವರ್ಷದ ಜುಲೈ ತಿಂಗಳ ಬಳಿಕ ಟೀಮ್ ಇಂಡಿಯಾ ಪೂರ್ಣಪ್ರಮಾಣದ ಸಾಮರ್ಥ್ಯದಲ್ಲಿ ಸಂಘಟಿತವಾಗಿ ಏಕದಿನ ಸರಣಿಯಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಈ ಹಂತದಲ್ಲಿ ತಂಡವಾಗಿ ಏಷ್ಯಾಕಪ್ಗೆ ಅಭ್ಯಾಸ ನಡೆಸುವುದು ಬಹಳ ಮುಖ್ಯವಾಗಲಿದೆ. ಶ್ರೀಲಂಕಾದ ಕ್ಯಾಂಡಿ ಹಾಗೂ ಕೊಲೊಂಬೋದ ನಿಧಾನಗತಿಯ ಪಿಚ್ ದೃಷ್ಟಿಯಲ್ಲಿಟ್ಟುಕೊಂಡು ಟೀಮ್ ಇಂಡಿಯಾ ಆಟಗಾರರು ಅಬ್ಯಾಸವನ್ನು ನಡೆಸಲಿದ್ದಾರೆ.
ಇನ್ನು ಕಳೆದ ಸೋಮವಾರವಷ್ಟೇ ಟೀಮ್ ಇಂಡಿಯಾದ ಆಟಗಾರರ ಬಳಗವನ್ನು ಬಿಸಿಸಿಐನ ಆಯ್ಕೆ ಮಂಡಳಿ ಘೋಷಣೆ ಮಾಡಿತ್ತು. ಈ ತಂಡದಲ್ಲಿ ಕೆಎಲ್ ರಾಹುಲ್ ಶ್ರೇಯಸ್ ಐಯ್ಯರ್ ತಂಡಕ್ಕೆ ವಾಪಸ್ ಆಗಿದ್ದು ಈ ಇಬ್ಬರು ಆಟಗಾರರು ಕೂಡ ನೇರವಾಗಿ ಏಷ್ಯಾನಲ್ಲಿಯೇ ಆಡಲಿದ್ದಾರೆ. ಹೀಗಾಗಿ ಈ ಆಟಗಾರ ಬ್ಯಾಟಿಂಗ್ ಲಯ ಬಹಳ ಮುಖ್ಯವಾಗಿರಲಿದೆ. ಇನ್ನು ಕೆಎಲ್ ರಾಹುಲ್ ಆರಂಭಿಕ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯ ಬಗ್ಗೆಯೂ ಆಯ್ಕೆ ಮಂಡಳಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಸುಳಿವು ನೀಡಿದ್ದರು.
ಇನ್ನು ಯುಜುವೇಂದ್ರ ಚಾಹಲ್ ಏಷ್ಯಾಕಪ್ಗೆ ಆಯ್ಕೆಯಾಗದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪೂರ್ಣಕಾಲಿಕ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಸ್ಪಿನ್ ವಿಭಾಗದಲ್ಲಿ ಸಾಥ್ ನೀಡಲಿದ್ದಾರೆ. ಇನ್ನು ಭಾರತದ ವೇಗದ ಬೌಲಿಂಗ್ ವಿಭಾಗ ಸಾಕಷ್ಟು ಬಲಿಷ್ಠವಾಗಿ ತೋರುತ್ತಿದ್ದು ಬೂಮ್ರಾ ಹಾಗೂ ಪ್ರಸಿದ್ಧ್ ಕೃಷ್ಣ ಗಾಯದಿಂದ ಕಮ್ಬ್ಯಾಕ್ ಆದ ಬಳಿಕ ಉತ್ತಮ ಲಯದಲ್ಲಿದ್ದಂತೆ ತೋರುತ್ತಿದ್ದಾರೆ. ಇನ್ನು ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡಿಕೊಂಡು ಬರುತ್ತಿದ್ದು ಶಾರ್ದೂಲ್ ಠಾಕೂರ್ ಕೂಡ ಸಾಥ್ ನೀಡಲಿದ್ದಾರೆ.
ಟೀಮ್ಇಂಡಿಯಾ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ