ಭಾನುವಾರ, ಸೆಪ್ಟೆಂಬರ್ 10ರಂದು ಕೊಲಂಬೊದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ 2023ರ ಏಷ್ಯಾ ಕಪ್ ಪಂದ್ಯಾವಳಿಯ ರೋಚಕ ಸೂಪರ್ 4 ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ ಭಾರತೀಯ ಆಟಗಾರನೊಬ್ಬ ತವರಿಗೆ ಮರಳಿದ್ದಾರೆ ಎಂದು ವರದಿಯಾಗಿದೆ.
2023ರ ಏಷ್ಯಾ ಕಪ್ ಪಂದ್ಯಾವಳಿಗೆ 17 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿತ್ತು. ಗಮನಾರ್ಹವಾಗಿ, ಕೆಎಲ್ ರಾಹುಲ್ ಬ್ಯಾಕ್ಅಪ್ ಆಗಿ ಸಂಜು ಸ್ಯಾಮ್ಸನ್ ಅವರನ್ನು ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಇದು ಕ್ರಿಕೆಟ್ ಅಭಿಮಾನಿಗಳು ಮತ್ತು ತಜ್ಞರ ನಡುವೆ ಚರ್ಚೆಯನ್ನು ಹುಟ್ಟುಹಾಕಿತು.

ಕೆಎಲ್ ರಾಹುಲ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದರು ಮತ್ತು ಬೆಂಗಳೂರಿನ ಎನ್ಸಿಎನಲ್ಲಿ ತರಬೇತಿ ಪಡೆದು ಫಿಟ್ನೆಸ್ ಪೂರ್ಣಗೊಳಿಸುವ ಹಂತದಲ್ಲಿದ್ದರು. ಹೀಗಾಗಿ ಪಾಕಿಸ್ತಾನ ಮತ್ತು ನೇಪಾಳ ವಿರುದ್ಧದ ಮೊದಲೆರಡು ಗುಂಪು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಅನುಪಸ್ಥಿತಿ ಪರಿಗಣಿಸಿ ಸಂಜು ಸ್ಯಾಮ್ಸನ್ ಆಡುವ ನಿರೀಕ್ಷೆಗಳಿದ್ದವು.
ಇದೀಗ ಕೆಎಲ್ ರಾಹುಲ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಅಗತ್ಯವಿರುವ ಎಲ್ಲಾ ಫಿಟ್ನೆಸ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಪಾಸ್ ಮಾಡಿದರು. ಈ ಬೆಳವಣಿಗೆಯು 2023ರ ಏಷ್ಯಾ ಕಪ್ ಪಂದ್ಯಾವಳಿಯಿಂದ ಸಂಜು ಸ್ಯಾಮ್ಸನ್ ಹೊರಬಿದ್ದಿದ್ದು, ತವರಿಗೆ ಮರಳಿದ್ದಾರೆ.

ದೈನಿಕ್ ಜಾಗರಣ್ ಖಚಿತಪಡಿಸಿದಂತೆ, ಭಾರತ ತಂಡದ ಮ್ಯಾನೇಜ್ಮೆಂಟ್ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಬಿಡುಗಡೆ ಮಾಡುವ ಕಠಿಣ ನಿರ್ಧಾರ ತೆಗೆದುಕೊಂಡಿತು.
ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ಗಾಗಿ ಭಾರತದ 15-ಸದಸ್ಯರ ತಂಡದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಪರಿಗಣಿಸಲಾಗಿಲ್ಲ.
ಸಂಜು ಸ್ಯಾಮ್ಸನ್ ಅವರು ಶ್ರೀಲಂಕಾದಿಂದ ಭಾರತಕ್ಕೆ ಮರಳುತ್ತಿದ್ದಂತೆ, ಕೆಎಲ್ ರಾಹುಲ್ ನೇರವಾಗಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ಸಜ್ಜಾಗಿದ್ದಾರ. ಸೆಪ್ಟೆಂಬರ್ 10ರಂದು ಪಾಕಿಸ್ತಾನದ ವಿರುದ್ಧ ಹೈ-ವೋಲ್ಟೇಜ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅಥವಾ ಇಶಾನ್ ಕಿಶನ್ ಬದಲಿಗೆ ಸ್ಥಾನ ಪಡೆಯಬಹುದು.
ಭಾರತ ತಂಡದ 5ನೇ ಕ್ರಮಾಂಕದ ಬ್ಯಾಟರ್ ಆಗಿ ಕೆಎಲ್ ರಾಹುಲ್ ಅವರಿಗೆ ನಿರ್ಣಾಯಕ ಪಾತ್ರವನ್ನು ನೀಡಲಾಗಿದ್ದು, ತಂಡಕ್ಕೆ ಮರಳಿರುವುದು ಬ್ಯಾಟಿಂಗ್ ವಿಭಾಗದಲ್ಲಿ ಬಲ ತಂದಿದೆ.
ಇನ್ನು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಆಯ್ಕೆ ಸಮಿತಿಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಮಧ್ಯಮ ಕ್ರಮಾಂಕದ ಪಾತ್ರದಲ್ಲಿ ಸಂಜು ಸ್ಯಾಮ್ಸನ್ಗಿಂತ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡುವ ಮೂಲಕ ಆಯ್ಕೆಗಾರರು ಸರಿಯಾದ ಆಯ್ಕೆ ಮಾಡಿದ್ದಾರೆ ಎಂದಿದ್ದಾರೆ.
2023ರ ಐಪಿಎಲ್ ಸಮಯದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ತೊಡೆ ಗಾಯಕ್ಕೆ ತುತ್ತಾದರು. ಬಳಿಕ ಲಂಡನ್ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಪಡೆದು, ಎನ್ಸಿಎನಲ್ಲಿ ದೀರ್ಘ ಸಮಯದ ಪುನರ್ವಸತಿ ಕೂಡ ಪಡೆದು ಫಿಟ್ನೆಸ್ಗೆ ಮರಳಿದ್ದಾರೆ.