ದುಬೈನಲ್ಲಿ ನಡೆಯುತ್ತಿರುವ ಅಂಡರ್ 19 ಏಷ್ಯಾಕಪ್ನಲ್ಲಿ ಫೈನಲ್ ಪ್ರವೇಶಿಸುವ ಭಾರತದ ಆಸೆ ಕಮರಿದೆ. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 4 ವಿಕೆಟ್ ಗಳಿಂದ ಬಾಂಗ್ಲಾದೇಶದ ವಿರುದ್ಧ ಸೋಲು ಕಂಡಿದೆ.
ಸೆಮೀಸ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 43 ಎಸೆತಗಳು ಬಾಕಿ ಇರುವಾಗಲೇ ಭಾರತವನ್ನು ಸೋಲಿಸಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ, ಬಾಂಗ್ಲಾದೇಶದ ಬಿಗುವಿನ ದಾಳಿಗೆ ನಲುಗಿತು. ಪರಿಣಾಮ 42.4 ಓವರ್ಗಳಲ್ಲಿ 188 ರನ್ ಗಳಿಗೆ ಆಲೌಟ್ ಆಯಿತು. ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 42.5 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 189 ರನ್ ಸೇರಿಸಿ ಫೈನಲ್ಗೆ ಪ್ರವೇಶ ಪಡೆಯಿತು.

ಟಾಸ್ ಗೆದ್ದ ಬಾಂಗ್ಲಾದೇಶದ ನಾಯಕ ಮಹ್ಫುಜುರ್ ರೆಹಮಾನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈ ನಿರ್ಧಾರವನ್ನು ಬೌಲರ್ಗಳು ಸಮರ್ಥಿಸಿಕೊಂಡರು. ಸಮಯಕ್ಕೆ ಅನುಸಾರವಾಗಿ ವಿಕೆಟ್ ಪಡೆದು ಅಬ್ಬರಿಸಿದರು. ಆರಂಭಿಕ ಜೋಡಿ 10 ರನ್ಗಳ ಅಂತರದಲ್ಲಿ ಪೆವಿಲಿಯನ್ಗೆ ಮರಳಿತು. 13 ರನ್ ತಲುಪುವ ವೇಳೆಗೆ ನಾಯಕ ಉದಯ್ (0) ಕೂಡ ಜವಾಬ್ದಾರಿ ಮರೆತರು.
ಭಾರತ ತಂಡದ ಪರ ಮುಶೀರ್ ಖಾನ್ (50) ಮತ್ತು ಮುರುಗನ್ ಅಭಿಷೇಕ್ (62) ಮಾತ್ರ ದೊಡ್ಡ ಇನ್ನಿಂಗ್ಸ್ ಕಟ್ಟಿ ತಂಡಕ್ಕೆ ನೆರವಾದರು. ಇವರನ್ನು ಬಿಟ್ಟರೆ ಯಾವುದೇ ಬ್ಯಾಟ್ಸ್ಮನ್ ಬಿಗ್ ಇನಿಂಗ್ಸ್ ಕಟ್ಟಲಿಲ್ಲ. 6 ಆಟಗಾರರು ಸಿಂಗಲ್ ಡಿಜಿಟ್ ನಲ್ಲಿಯೇ ಆಟ ಮುಗಿಸಿದರು. ಬಾಂಗ್ಲಾದೇಶ ಪರ ಮಾರೂಫ್ ಮೃಡಾ ನಾಲ್ಕು ವಿಕೆಟ್ ಪಡೆದರು.
ಸಾಧರಣ ಗುರಿಯನ್ನು ಹಿಂಬಾಲಿಸಿದ ಬಾಂಗ್ಲಾ ತಂಡದ ಆರಂಭ ಕಳಪೆಯಾಗಿತ್ತು. 34 ರನ್ ಆಗುವಷ್ಟರಲ್ಲಿ ತಂಡ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಲ್ಕನೇ ವಿಕೆಟ್ಗೆ ಅರಿಫುಲ್ ಇಸ್ಲಾಂ ಮತ್ತು ಅಹ್ರಾರ್ ಅಮೀನ್ ಜೊತೆಗೂಡಿ 138 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಅಲ್ಲದೆ ಗೆಲುವನ್ನು ತಮ್ಮ ತಂಡದತ್ತ ವಾಲಿಸಿಕೊಂಡರು. ಅರಿಫುಲ್ ಇಸ್ಲಾಂ 9 ಬೌಂಡರಿ, 4 ಸಿಕ್ಸರ್ ಸಹಾಯದಿಂದ 94 ರನ್ ಸಿಡಿಸಿದರೆ, ಅಹ್ರಾರ್ ಅಮೀನ್ 44 ರನ್ ಬಾರಿಸಿ ಜಯದಲ್ಲಿ ಮಿಂಚಿದರು.