ಏಷ್ಯಾ ಕಪ್ 2023ರ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ, ಪ್ರಶಸ್ತಿ ಸುತ್ತಿನ ಕಾದಾಟ ಭಾರತ ಮತ್ತು ಶ್ರೀಲಂಕಾ ನಡುವೆ ಸೆಪ್ಟೆಂಬರ್ 17 ರಂದು ನಡೆಯಲಿದೆ. ಕೊಲಂಬೊದಲ್ಲಿ ಕೆಟ್ಟ ಹವಾಮಾನದ ಕಾರಣ, ಫೈನಲ್ಗೆ ಹೆಚ್ಚುವರಿ ದಿನವನ್ನು ನೀಡಲಾಗಿದೆಯಾ ಎಂಬ ಪ್ರಶ್ನೆಗಳು ಮೂಡಿವೆ.
ಒಂದು ವೇಳೆ ಫೈನಲ್ ಪಂದ್ಯಕ್ಕೆ ಮಳೆ ಅಡಚಣೆಯಾದರೆ ಸೆಪ್ಟೆಂಬರ್ 18 ರಂದು ಪಂದ್ಯ ನಡೆಯಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸೂಪರ್ -4 ರ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಮೀಸಲು ದಿನವನ್ನು ಇಡಲಾಗಿತ್ತು. ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಕಾಟ ನೀಡಿದ್ದರಿಂದ ಮೀಸಲು ದಿನದಂದು ಪೂರ್ತಿ ಪಂದ್ಯವನ್ನು ಆಡಲಾಯಿತು.

ಈ ವೇಳೆ ಎಸಿಸಿ ಮಳೆ ಬಂದು ಪಂದ್ಯ ಎಲ್ಲಿ ನಿಂತಿತ್ತೋ, ಅಲ್ಲಿಂದಲೇ ಪಂದ್ಯವನ್ನು ಮುಂದುವರೆಸಲಾಗುವುದು ಎಂದು ತಿಳಿಸಿತ್ತು. ಸೂಪರ್-4 ರ ಈ ಏಕೈಕ ಪಂದ್ಯವನ್ನು ಹೊರತುಪಡಿಸಿ, ಕೊಲಂಬೊದಲ್ಲಿ ನಡೆಯಲಿರುವ ಅಂತಿಮ ಪಂದ್ಯಕ್ಕೂ ಮೀಸಲು ದಿನವನ್ನು ಇರಿಸಲಾಗಿದೆ ಎಂದು ಎಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡರೆ ಮರುದಿನ ಅಂದರೆ ಮೀಸಲು ದಿನದಂದು ಪಂದ್ಯ ನಡೆಯಲಿದೆ. ಎಸಿಸಿ ಎರಡೂ ಪಂದ್ಯಗಳಿಗೆ ಮೀಸಲು ದಿನವನ್ನು ಘೋಷಿಸಿತ್ತು. ಏಷ್ಯಾಕಪ್ನ ಸೂಪರ್-4 ನಲ್ಲಿ ಭಾರತವು ಮೊದಲು ಪಾಕಿಸ್ತಾನಕ್ಕೆ ಭಾರೀ ಪೆಟ್ಟು ನೀಡಿತು. ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಫೈನಲಿಗೆ ಹತ್ತಿರವಾಗುವ ಕನಸು ಹೊಂದಿದ್ದ ಪಾಕಿಸ್ತಾನಕ್ಕೆ ಆಘಾತವಾಗಿತ್ತು.
ಮೀಸಲು ದಿನದಂದು ನಡೆದ ಪಂದ್ಯದಲ್ಲಿ ಭಾರತ 228 ರನ್ಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು. ಈ ಪಂದ್ಯದ ಬಳಿಕ ನಡೆದ ಇನ್ನೊಂದು ಪಂದ್ಯದಲ್ಲಿ ಅಂದರೆ ಸೆಪ್ಟೆಂಬರ್ 12 ರಂದು ಭಾರತ ಶ್ರೀಲಂಕಾವನ್ನು 41 ರನ್ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಭಾರತ 11ನೇ ಬಾರಿಗೆ ಏಷ್ಯಾಕಪ್ನಲ್ಲಿ ಫೈನಲ್ ಪ್ರವೇಶಿಸಿದೆ.
ಇದೇ ಸಮಯದಲ್ಲಿ ಶ್ರೀಲಂಕಾ ಸೂಪರ್-4 ರ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿತ್ತು. ಆ ಬಳಿಕ ಭಾರತದ ಕೈಯಲ್ಲಿ ಸೋಲನ್ನು ಕಾಣಬೇಕಾಯಿತು. ಆದರೆ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಿತು. ಈ ರೋಚಕ ಪಂದ್ಯದಲ್ಲಿ ಶ್ರೀಲಂಕಾ ಕೊನೆಯ ಎಸೆತದಲ್ಲಿ ಪಾಕಿಸ್ತಾನವನ್ನು 2 ವಿಕೆಟ್ಗಳಿಂದ ಸೋಲಿಸಿ 13ನೇ ಬಾರಿಗೆ ಫೈನಲ್ಗೆ ಲಗ್ಗೆ ಇಟ್ಟಿತು.
ಒಂದು ವೇಳೆ ಫೈನಲ್ ಪಂದ್ಯದಲ್ಲಿ ಮಳೆ ಕಾಟ ನೀಡಿದರೂ ಸಹ, ಪಂದ್ಯವನ್ನು ಮೀಸಲು ದಿನದಂದು ಆಡಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ಪಂದ್ಯ, ಯಾವ ಹಂತದಲ್ಲಿ ಸ್ಥಗಿತಗೊಂಡಿತ್ತೋ, ಅಲ್ಲಿಂದಲೇ ಮೀಸಲು ದಿನದಂದು ಆಡುವ ತೀರ್ಮಾನವನ್ನು ಎಸಿಸಿ ತೆಗೆದುಕೊಂಡಿದೆ.