
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಯ ಕಾರ್ಯನಿರ್ವಾಹಕ ಮಂಡಳಿಯು ಈ ವರ್ಷದ ಏಷ್ಯಾಕಪ್ ಟಿ20ಯ ಭವಿಷ್ಯದ ಬಗ್ಗೆ ನಿರ್ಧಾರವನ್ನು ಮುಂದೂಡಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಏಷ್ಯಾ ಕಪ್ ಮುಂದೂಡಬಹುದೆಂಬ ಊಹಾಪೋಹಗಳ ನಡುವೆಯೇ ಎಸಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದೆ
ಈ ಟೂರ್ನಿಯನ್ನು ಸೆಪ್ಟೆಂಬರ್ನಲ್ಲಿ ಆಯೋಜನೆ ಮಾಡಲು ನಿಗದಿಗೊಳಿಸಲಾಗಿತ್ತು. ಆದರೆ ಕೊರೊನಾ ವೈರಸ್ನ ಕಾರಣದಿಂದಾಗಿ ಈ ಬಗ್ಗೆ ಸ್ಪಷ್ಟ ನಿಲುವನ್ನು ತೆಗದುಕೊಂಡಿಲ್ಲ. ಇನ್ನು ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನ ವಹಿಸಿಕೊಂಡಿದೆ. ಆದರೆ ಪಾಕಿಸ್ತಾನಕ್ಕೆ ಭಾರತ ತೆರಳದ ಕಾರಣ ತಟಸ್ಥ ಸ್ಥಳದಲ್ಲಿ ಆಯೋಜನೆಯಾಗಲಿದೆ.
ಟಿ20 ವಿಶ್ವಕಪ್ ವಿಚಾರವಾಗಿ ಐಸಿಸಿ ಯಾವ ರೀತಿಯ ನಿರ್ಧಾರವನ್ನು ತೆಗದುಕೊಳ್ಳಲಿದೆ ಎಂದು ಎಸಿಸಿ ಎದುರು ನೀಡುತ್ತಿದೆ. ಜೂನ್ ಹತ್ತನೇ ತರೀಕಿನಂದು ನಡೆಯುವ ಐಸಿಸಿ ಸಭೆಯಲ್ಲಿ ಈ ಬಗ್ಗೆ ಐಸಿಸಿ ತನ್ನ ತೀರ್ಮಾನವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಸೋಮವಾರ ಈ ಬಗ್ಗೆ ಎಸಿಸಿ ಸಭೆಸೇರಿತ್ತು. ಏಷ್ಯಾ ಕಪ್ ನಡೆಸುವ ಪ್ರಾಮುಖ್ಯತೆಯ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಗಿದೆ. ಕೊರೊನಾ ವೈರಸ್ನ ಪರಿಣಾಮಗಳ ಹಿನ್ನೆಲೆಯಲ್ಲಿ ಸಂಭವನೀಯ ಸ್ಥಳಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಯಿತು. ಮತ್ತು ಸೂಕ್ತ ಸಮಯದಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ನಿರ್ಧರಿಸಲಾಯಿತು ಎಂದು ಎಸಿಸಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ನಜ್ಮುಲ್ ಹಸನ್ ಮುಖ್ಯಸ್ಥರಾಗಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಉಪಾಧ್ಯಕ್ಷ ಜೈ ಶಾ ಇದೇ ಮೊದಲ ಬಾರಿಗೆ ಪಾಲ್ಗೊಂಡಿದ್ದರು.