ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಕಣಕ್ಕಿಳಿಯಲು ಸರ್ವಸನ್ನಧವಾಗಿದೆ. ಎರಡು ತಂಡಗಳು ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಅರ್ಹವಾಗಿಯೇ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದೆ. ಈ ಮಹತ್ವದ ಪಂದ್ಯದಲ್ಲಿ ತಮ್ಮ ಅತ್ಯುತ್ತಮ ಆಟಗಾರರ ಪಡೆಯೊಂದಿಗೆ ಎರಡು ತಮಡಗಳು ಕೂಡ ಕಣಕ್ಕಿಳಿಯುತ್ತಿದ್ದು ಪಂದ್ಯದಲ್ಲಿ ಯಾರ ಕೈ ಮೇಲಾಗಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಆದರೆ ಈ ಪಂದ್ಯದಲ್ಲಿ ಶ್ರೀಲಂಕಾ ತಂಡದ ಪ್ರಮುಖ ಸ್ಪಿನ್ ಬೌಲಿಂಗ್ ಅಸ್ತ್ರವಾಗಿರುವ ಮಹೀಶ್ ತೀಕ್ಷಣ ಕಣಕ್ಕಿಳಿಯುವುದಿಲ್ಲ ಎನ್ನುವುದು ಪಂದ್ಯದ ಆರಂಭಕ್ಕೂ ಮುನ್ನವೇ ಸ್ಪಷ್ಟವಾಗಿದೆ. ಕೊಲಂಬೋದ ಸ್ಪಿನ್ ಸ್ನೇಹಿ ಪಿಚ್ನಲ್ಲಿ ತಂಡದ ಪ್ರಮುಖ ಸ್ಪಿನ್ನರ್ ಕಣಕ್ಇಳಿಯದಿರಲು ಕಾರಣ ಏನು ಎನ್ನುವುದು ಅಭಿಮಾನಿಗಳಿಗೆ ಸಹಜವಾಗಿಯೇ ಉದ್ಭವವಾಗುವ ಪ್ರಶ್ನೆ. ಅದಕ್ಕೆ ಉತ್ತರ ಇಲ್ಲಿದೆ.

ಶ್ರೀಲಂಕಾ ತಂಡ ಸಾಕಷ್ಟು ಅಡೆತಡೆಗಳ ಮಧ್ಯೆಯೂ ಇತ್ತೀಚಿನ ಕೆಲ ತಿಂಗಳುಗಳಲ್ಲಿ ಅತ್ಯುದ್ಭುತವಾದ ಫಾರ್ಮ್ ಹೊಂದಿದೆ. ತಂಡದ ಬಹುತೇಕ ಆಟಗಾರರು ಅದ್ಭುತವಾದ ಪ್ರದರ್ಶನ ನೀಡುತ್ತಿದ್ದು ಸಂಘಟಿತವಾಗಿ ಎಲ್ಲಾ ತಂಡಗಲಿಗೂ ಭಾರೀ ಪೈಪೊಟಿ ನೀಡಲು ಯಶಸ್ವಿಯಾಗಿದೆ. ಇನ್ನು ಕಳೆದ ವರ್ಷ ಟಿ20 ಮಾದರಿಯಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ಚಾಂಪಿಯನ್
ಆಗಿ ಹೊರಹೊಮ್ಮಿತ್ತು. ಇದೀಗ ಈ ಬಾರಿಯೂ ಅದೇ ಸಾಧನೆಯನ್ನುಯ ಪುನರಾವರ್ತಿಸುವ ವಿಶ್ವಾಸದಲ್ಲಿದೆ ಲಂಕಾ ಪಡೆ.
ಇನ್ನು ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮಹೀಶ್ ತೀಕ್ಷಣ ಆಡದೆ ಇರಲು ಕಾರಣ ಅವರು ಗಾಯಕ್ಕೆ ತುತ್ತಾಗಿದ್ದಾರೆ. ಹ್ಯಾಮ್ಸ್ಟ್ರಿಂಜ್ ಗಾಯಕ್ಕೆ ತೀಕ್ಷಣ ತುತ್ತಾಗಿರುವ ಕಾರಣ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಅವರು ಅಲಭ್ಯವಾಗಲಿದ್ದಾರೆ. ಇದು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿಕೊಂಡು ಬಂದ ಶ್ರೀಲಂಕಾ ತಂಡಕ್ಕೆ ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಸಲಾಗಿದೆ.
ಪಂದ್ಯಕ್ಕೂ ಮುನ್ನಾದಿನ ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಮಹೀಶ್ ತೀಕ್ಷಣ ಗಾಯದ ಬಗ್ಗೆ ಖಚಿತಪಡಿಸಿದ್ದು ಫೈನಲ್ಗೆ ಲಭ್ಯವಿರುವುದಿಲ್ಲ ಎನ್ನುವುದನ್ನು ಬಹಿರಂಗಪಡಿಸಿದರು. ಹೀಗಾಗಿ ಫೈನಲ್ ಪಂದ್ಯದಲ್ಲಿ ತೀಕ್ಷಣ ಬದಲಿಗೆ ಯಾರಿಗೆ ಅವಕಾಶ ದೊರೆಯಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಇನ್ನು ಏಷ್ಯಾಕಪ್ ಫೈನಲ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿಯೂ ಗಾಯದ ಸಮಸ್ಯೆ ಕಾಣಿಸಿಕೊಂಡಿದೆ. ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಲ್ರೌಂಡರ್ ಅಕ್ಷರ್ ಪಟೇಲ್ ಫೈನಲ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಬಿಸಿಸಿಐ ಈ ಬಗ್ಗೆ ಶನಿವಾರವೇ ಖಚಿತ ಪಡಿಸಿದ್ದು ವಾಶಿಂಗ್ಟನ್ ಸುಂದರ್ ಅವರ ಬದಲಿಗೆ ತಂಡವನ್ನು ಸೇರಿಕೊಂಡಿದ್ದಾರೆ ಎಂದು ಮಾಹಿತಿ ನೀಡಿತ್ತು.