

ದುಬೈ, ಸೆಪ್ಟೆಂಬರ್ 26: ತಾನು ಆಡಿರುವ ಒಟ್ಟು 13 ಏಕದಿನ ಪಂದ್ಯಗಳಲ್ಲಿ ಅತ್ಯಂತ ಹತಾಶೆಗೀಡಾದ ಕ್ಷಣವದು. 2016ರಂದು ಭಾರತ ತಂಡಕ್ಕಾಗಿ ಆಡಿದ ಚೊಚ್ಚಲ ಪಂದ್ಯದಿಂದ ಹಿಡಿದು ಇಲ್ಲಿವರೆಗಿನ ಪಂದ್ಯಗಳಲ್ಲಿ ನಾನು ನಿಜಕ್ಕೂ ತುಂಬಾ ಹತಾಶೆಗೀಡಾದ ಕ್ಷಣವದು ಎಂದು ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಹೇಳಿದ್ದಾರೆ.
ಸೆಪ್ಟೆಂಬರ್ 25ರಂದಿನ ಏಷ್ಯಾ ಕಪ್ ಸೂಪರ್ ಫೋರ್ 5ನೇ ಪಂದ್ಯವಾಗಿ ಭಾರತ-ಅಫ್ಘಾನಿಸ್ತಾನ ಮುಖಾಮುಖಿಯಲ್ಲಿ ಭಾರತದ ಇನ್ನಿಂಗ್ಸ್ ನಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಔಟಾದರು. ಆದರೆ ಅದು ನಿಜವಾಗಿಯೂ ಔಟಾಗಿರಲಿಲ್ಲ. ಆದರೆ ಮೊದಲ ಬಾರಿ ರಾಹುಲ್ ಔಟ್ ತೀರ್ಪಿನ ಪರಾಮರ್ಶೆಗಾಗಿ ಕೋರಿಕೊಂಡಿದ್ದರಿಂದ ಧೋನಿ ಹೊರ ನಡೆಯಬೇಕಾಗಿತ್ತು. (ಚಿತ್ರ ಕೃಪೆ: ಎಎನ್ಐ)
ಇದನ್ನು ನೆನಪಿಸಿಕೊಂಡು ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ ರಾಹುಲ್ ಹತಾಶೆ ವ್ಯಕ್ತಪಡಿಸಿದರು. 'ಒಂದು ರಿವ್ಯೂ ಕೇಳಲು ಅವಕಾಶವಿದ್ದಾಗ ಇಂಥ ಇಕ್ಕಟ್ಟಿಗೆ ಬೀಳೋದಿದೆ. ಮೊದಲ ಕ್ಷಣ ರಿವ್ಯೂ (ಅಂಪೈರ್ ಡಿಸಿಶನ್ ರಿವ್ಯೂ ಸಿಸ್ಟಮ್)ಗೆ ಅಪೀಲ್ ಮಾಡಿದ್ದೇ ಸರಿ ಅನ್ನಿಸಿತು. ಆದರೆ ಧೋನಿ ನಿಜವಾಗಿಯೂ ಔಟಾಗಿರಲಿಲ್ಲ ಎಂದು ಅರಿವಾದಾಗ, ನಾನು ರಿವ್ಯೂ ಕೇಳಿ ಇದ್ದ ಒಂದು ರಿವ್ಯೂ ಅವಕಾಶವನ್ನು ವ್ಯರ್ಥ ಮಾಡಿಕೊಳ್ಳಬಾರದಿತ್ತು ಎಂದೆನಿಸಿತ್ತು' ಎಂದು ರಾಹುಲ್ ಹೇಳಿದರು.
ಪಂದ್ಯದಲ್ಲಿ ಧೋನಿ ಅವರು ಜಾವೆದ್ ಅಹ್ಮದಿ ಅವರ ಓವರ್ ನಲ್ಲಿ ಎಲ್ಬಿಡಬ್ಲ್ಯೂ ಆಗಿ 8 ರನ್ ನೊಂದಿಗೆ ನಿರ್ಗಮಿಸಿದ್ದರು. ಡಿಆರ್ಎಸ್ ಗಮನಿಸಿದಾಗ ಅದರಲ್ಲಿ ಧೋನಿ ನಾಟ್ ಔಟ್ ಎಂದು ತೋರಿಸಿತ್ತು. ಆದರೆ ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು. ಆ ಮೊದಲೇ ಕೆಎಲ್ ರಾಹುಲ್ ಬ್ಯಾಟಿಂಗ್ ವೇಳೆ ಡಿಆರ್ಎಸ್ ಮನವಿ ಮಾಡಿದ್ದರು. ಆದರೆ ಡಿಆರ್ಎಸ್ ನಲ್ಲೂ ರಾಹುಲ್ ಔಟ್ ಎಂದೇ ಬಂದಿತ್ತು. ಹೀಗಾಗಿ ಮಾಡಬಹುದಾಗಿದ್ದ ಒಂದೇ ಒಂದು ಡಿಆರ್ಎಸ್ ಮನವಿ ವ್ಯರ್ಥವಾಗಿಯಾಗಿತ್ತು. ಧೋನಿ ಔಟ್ ಇಲ್ಲದಿದ್ದರೂ ಡಿಆರ್ಎಸ್ ಗೆ ಮನವಿ ಮಾಡಲು ಅವಕಾಶವಿರಲಿಲ್ಲ.!
ಸೆಪ್ಟೆಂಬರ್ 25ರ ಈ ಪಂದ್ಯದಲ್ಲಿ ಭಾರತವೇ ಸುಲಭ ಗೆಲುವು ಸಾಧಿಸುವ ನಿರೀಕ್ಷೆ ಮೂಡಿಸಿತ್ತಾದರೂ ಓವರ್ ಮುಗಿಯುತ್ತಲೇ ಪಂದ್ಯ ರೋಚಕ ಹಂತಕ್ಕೆ ಬಂತು. ಅಂತಿಮವಾಗಿ ಪಂದ್ಯ ಟೈ ಎನಿಸಿಕೊಂಡಿತು. ಒಂದುವೇಳೆ ಧೋನಿ ಕ್ರೀಸ್ ನಲ್ಲಿ ಉಳಿದಿದ್ದರೆ ಭಾರತ ಗೆಲ್ಲುವ ಸಾಧ್ಯತೆಯಿತ್ತು ಅನ್ನೋದು ಕ್ರಿಕೆಟ್ ಅಭಿಮಾನಿಗಳ ಅನಿಸಿಕೆ.