ಢಾಕಾ. ಫೆ.22. ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಸೋಮವಾರ ಅಭ್ಯಾಸ ಮಾಡುವ ವೇಳೆ ಬೆನ್ನಿನ ಸ್ನಾಯು ಸೆಳೆತಕ್ಕೆ ಒಳಗಾಗಿ ಗಾಯಗೊಂಡಿದ್ದಾರೆ. ಏಷ್ಯಾಕಪ್ ಟ್ವೆಂಟಿ 20 ಟೂರ್ನಿ ಆರಂಭಕ್ಕೂ ಮುನ್ನ ಭಾರತಕ್ಕೆ ಒಂದು ದೊಡ್ಡ ಹೊಡೆತ ಬಿದ್ದಿದೆ.
ಭಾರತ ತಂಡದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಮೈದಾನದಲ್ಲಿ ಅಭ್ಯಾಸ ಮಾಡುವ ವೇಳೆ ಬೆನ್ನು ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಅವರು ಚೇತರಿಸಿಕೊಳ್ಳುವ ವರೆಗೆ 30 ವರ್ಷದ ಗುಜರಾತ್ ಆಟಗಾರ ಎಡಗೈ ಬ್ಯಾಟ್ಸ್ ಮನ್ ಮತ್ತು ವಿಕೇಟ್ ಕೀಪರ್ ಪಾರ್ಥಿವ್ ಪಟೇಲ್ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಭಾರತ ಕ್ರಿಕೆಟ್ ಕೌನ್ಸಿಲ್ (ಬಿಸಿಸಿಐ) ಸೋಮವಾರ ತಿಳಿಸಿದೆ.
ಏಷ್ಯಾಕಪ್ 2016 : ತಂಡಗಳು | ವೇಳಾಪಟ್ಟಿ
ವೇಗದ ಬೌಲರ್ ಮಹಮದ್ ಶಮಿ ಅವರು ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿ ಏಷ್ಯಾ ಕಪ್ ನಿಂದ ಹೊರ ಉಳಿದಿದ್ದಾರೆ. ಇವರ ಬದಲಿಗೆ ಭುವನೇಶ್ವರ್ ಕುಮಾರ್ ತಂಡ ಸೇರಲಿದ್ದಾರೆ. ಈಗ ಗಾಯದ ಮೇಲೆ ಬರೆ ಎನ್ನುವಂತೆ ಮ್ಯಾಚ್ ವಿನ್ನರ್ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಗಾಯಗೊಂಡಿದ್ದರಿಂದ ಭಾರತಕ್ಕೆ ಒಂದು ದೊಡ್ಡ ಆಘಾತವಾಗಿದೆ.

ಪಾರ್ಥಿವ್ ಪಟೇಲ್ ಅವರು 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಿ-20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಟಿ-20ಗೆ ಪಾದಾರ್ಪಣೆ ಮಾಡಿದ್ದಾರೆ. 2011 ಇಂಗ್ಲೆಂಡ್ ವಿರುದ್ಧ ಆಡಿದ ಇವರ ಕೊನೆ ಪಂದ್ಯವಾಗಿದೆ. ಇದುವರೆವಿಗೂ 20 ಟೆಸ್ಟ್, 38 ಏಕದಿನ ಕ್ರಿಕೆಟ್, 2 ಟಿ20 ಪಂದ್ಯವನ್ನಾಡಿರುವ ಪಟೇಲ್ ಗೆ ಏಷ್ಯಾಕಪ್ ಹೊಸ ಅನುಭವ. [ಏಷ್ಯಾ ಕಪ್ ಟಿ-20 ಟೂರ್ನಿಯಿಂದ ಶಮಿ ಔಟ್]
ಇದೆ ಫೆ.24 ರಂದು ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಕಳೆದ 12 ಅವೃತ್ತಿಯ ಏಷ್ಯಾಕಪ್ 50 ಓವರ್ ಗಳ ಪಂದ್ಯವನ್ನು ಕಂಡಿತ್ತು. ಈ ಬಾರಿ ಮೊಟ್ಟ ಮೊದಲ ಸಲ 20 ಓವರ್ ಗಳ ಪಂದ್ಯಗಳು ನಡೆಯಲಿವೆ.
ಬಾಂಗ್ಲಾದೇಶದಲ್ಲಿ ಏಷ್ಯಾಕಪ್ ನಂತರ ಭಾರತದಲ್ಲಿ ಐಸಿಸಿ ವಿಶ್ವ ಟಿ 20 ಟೂರ್ನಮೆಂಟ್ ಮಾರ್ಚ್ 8 ರಿಂದ ಏಪ್ರಿಲ್ 3 ರ ತನಕ 16 ತಂಡಗಳು ಚುಟುಕು ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ (ಒನ್ ಇಂಡಿಯಾ ಸುದ್ದಿ)