ಹಾರ್ದಿಕ್ ಪಾಂಡ್ಯ ವಿಚಾರದಲ್ಲಿ ಭಾರತ ಈ ತಪ್ಪು ಮಾಡಬಾರದು: ಸಂಜಯ್ ಮಂಜ್ರೇಕರ್

ಪಾಕಿಸ್ತಾನದ ವಿರುದ್ಧದ ಪಂದ್ಯ ಹೊರತು ಪಡಿಸಿದರೆ ಹಾರ್ದಿಕ್ ಪಾಂಡ್ಯ ಭಾರತದ ಪರವಾಗಿ ನೀಡುತ್ತಿರುವ ಪ್ರದರ್ಶನ ತಂಡಕ್ಕೆ ಸಾಕಷ್ಟು ಆತ್ಮವಿಶ್ವಾಸ ಮೂಡಿಸಿದೆ. ಬ್ಯಾಟರ್ ಹಾಗೂ ಬೌಲರ್ ಎರಡೂ ವಿಭಾಗದಲ್ಲಿಯೂ ಹಾರ್ದಿಕ್ ತಂಡದ ಪ್ರಮುಖ ಅಸ್ತ್ರ ಎಂದು ವಿಶ್ಲೇಷಿಸಲಾಗುತ್ತಿದೆ. ಈ ನಿರೀಕ್ಷೆಗೆ ಪೂರಕವಾಗಿಯೇ ಬಹುತೇಕ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಪ್ರದರ್ಶನ ನೀಡಿದ್ದಾರೆ. ಆದರೆ ಪಾಕ್ ವಿರುದ್ಧ ಸೂಪರ್ 4 ಹಂತದಲ್ಲಿ ಹಾರ್ದಿಕ್ ಪಾಂಡ್ಯ ಎಡವಿರುವುದು ಮತ್ತೊಂದು ರೀತಿಯ ಚರ್ಚೆಗೆ ಕಾರಣವಾಗಿದೆ.
ಚುಟುಕು ಮಾದರಿಯಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಮೂರನೇ ವೇಗದ ಬೌಲರ್ ಆಗಿ ಬಳಸಿಕೊಳ್ಳಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ ಪಾಕಿಸ್ತಾನದ ವಿರುದ್ಧದ ಪಂದ್ಯದ ಬಳಿಕ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಪ್ರತಿಕ್ರಿಯೆ ನಿಡಿದ್ದು ಈ ಪಂದ್ಯ ಭಾರತಕ್ಕೆ ಮಹತ್ವದ ಪಾಠ ಹೇಳಿದೆ ಎಂದಿದ್ದಾರೆ.

ಮೂರನೇ ವೇಗಿಯಾಗಿ ಹಾರ್ದಿಕ್ ಬೇಡ
ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಮೂರನೇ ವೇಗಿಯಾಗಿ ಬಳಸಿಕೊಳ್ಳುವುದು ಸೂಕ್ತವಲ್ಲ ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬದಲಾಗಿ ಅವರನ್ನ ನಾಲ್ಕನೇ ವೇಗಿಯಾಗಿ ಬಳಸಿಕೊಳ್ಳಬೇಕು ಎಂದಿದ್ದಾರೆ. ಪಾಕಿಸ್ತಾನ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಮೂರನೇ ವೇಗಿಯಾಗಿ ಕಣಕ್ಕಿಳಿದು ನಾಲ್ಕು ಓವರ್ಗಳ ಬೌಲಿಂಗ್ ನಡೆಸಿದ ಹಾರ್ದಿಕ್ 44 ರನ್ಗಳನ್ನು ಬಿಟ್ಟುಕೊಟ್ಟಿದ್ದರು. ಹಾಗಾಘಿ ಅವರನ್ನು ನಾಲ್ಕನೇ ಬೌಲರ್ ಆಗಿ ಬಳಸಿಕೊಳ್ಳಬೇಕು. ಒಂದು ವೇಳೆ ಹೆಚ್ಚು ರನ್ ಬಿಟ್ಟುಕೊಟ್ಟರೆ ಅವರಿಗೆ ಕಡಿಮೆ ಓವರ್ಗಳನ್ನು ನೀಡಬಹುದು ಎಂದಿದ್ದಾರೆ ಮಂಜ್ರೇಕರ್.

ಈ ಅಂಶಗಳನ್ನು ಖಂಡಿತಾ ಪರಿಗಣಿಸಬಹುದು
ಮುಂದುವರಿದು ಮಾತನಾಡಿದ ಸಂಜಯ್ ಮಂಜ್ರೇಕರ್ "ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೆಲ ಪ್ರಮುಖ ಅಂಶಗಳನ್ನು ಗಮನಿಸಬಹುದು. ರೋಹಿತ್ ಶರ್ಮಾ ಕೂಡ ಮೈದಾನದಲ್ಲಿ ಸಿಡುಕಿದ್ದರು. ನಾನು ಗಮನಿಸಿದ ಒಂದು ಅಂಶವನ್ನು ಖಂಡಿತವಾಗಿಯೂ ಅವರು ಕೂಡ ಗಮನಹರಿಸಿರುತ್ತಾರೆ. ಒಂದು ವೇಳೆ ಭಾರತ ತಂಡ ಕೇವಲ ಮೂರು ವೇಗಿಗಳನ್ನು ಮಾತ್ರವೇ ಆಡಿಸಬೇಕಾದ ಸಂದರ್ಭ ಬಂದರೆ ಆಗ ಆ ಮೂವರಲ್ಲಿ ಹಾರ್ದಿಕ್ ಪಾಂಡ್ಯ ಇರಲು ಸಾಧ್ಯವಿಲ್ಲ" ಎಂದಿದ್ದಾರೆ ಸಂಜಯ್ ಮಂಜ್ರೇಕರ್.

4ನೇ ವೇಗಿಯಾಗಿ ಆತ ಶ್ರೇಷ್ಠ
ಹಾರ್ದಿಕ್ ಪಾಂಡ್ಯ ನಾಲ್ಕನೇ ವೇಗಿಯಾಗಿ ತಂಡದಲ್ಲಿದ್ದರೆ ಅದು ಬಹಳ ಉತ್ತಮ ಸಂಗತಿಯಾಗಿದೆ. ಅಂಥಾ ಸಂದರ್ಭದಲ್ಲಿ ಅವರೇನಾದರೂ ದುಬಾರಿಯಾಗಿದ್ದರೂ ಅವರ ಬದಲಿಗೆ ಮತ್ತೋರ್ವ ಬೌಲರ್ ದಾಳಿ ನಡೆಸಬಹುದು. ಅವರು ವಿಕೆಟ್ ಪಡೆದರೆ ತಂಡಕ್ಕೆ ಉತ್ತಮವಾದ ಸಂಗತಿ. ವಿಕೆಟ್ ಪಡೆಯದಿದ್ದರೂ ಆಗ ದೊಡ್ಡ ಸಂಗತಿಯಾಗಲಾರದು" ಎಂದಿದ್ದಾರೆ ಸಂಜಯ್ ಮಂಜ್ರೇಕರ್.

ಕುತೂಹಲ ಮೂಡಿಸಿದೆ ಲಂಕಾ ವಿರುದ್ಧದ ಸ್ಕ್ವಾಡ್
ಇನ್ನು ಮಂಗಳವಾರ ಭಾರತ ಶ್ರೀಲಂಕಾ ತಂಡದ ವಿರುದ್ಧ ಸೂಪರ್ 4 ಹಂತದ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿರುವ ಭಾರತ ಹಿನ್ನಡೆಯಲ್ಲಿದ್ದು ಈ ಪಂದ್ಯವನ್ನು ಗೆಲ್ಲುವ ಒತ್ತಡದಲ್ಲಿದೆ. ಸಾಮರ್ಥ್ಯದಲ್ಲಿ ಶ್ರೀಲಂಕಾ ಪಡೆಗಿಂತ ಸಾಕಷ್ಟು ಬಲಿಷ್ಠವಾಗಿ ಕಾಣಿಸುವ ಭಾರತ ತಂಡಕ್ಕೆ ಬೌಲಿಂಗ್ ಪ್ರದರ್ಶನ ತಲೆನೋವು ತಂದಿಟ್ಟಿದೆ. ಇನ್ನು ಈ ಪಂದ್ಯದಲ್ಲಿ ಭಾರತದ ಆಡುವ ಬಳಗದಲ್ಲಿ ಯಾವೆಲ್ಲಾ ಬದಲಾವಣೆ ಮಾಡಬಹುದು ಎಂಬುದು ಕುತೂಹಲ ಮೂಡಿಸಿದೆ.
ಭಾರತ ಸಂಪೂರ್ಣ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಯುಜುವೇಂದ್ರ ಚಾಹಲ್, ಅರ್ಷ್ದೀಪ್ ಸಿಂಗ್, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ , ಆವೇಶ್ ಖಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications