ಆಡಿರುವ ಎರಡು ಪಂದ್ಯಗಳನ್ನು ಗೆದ್ದು ಈಗಾಗಲೇ ಏಷ್ಯಾ ಕಪ್ ಟಿ20 ಟೂರ್ನಿಯ ಸೂಪರ್ 4 ಹಂತಕ್ಕೆ ತಲುಪಿದ್ದು, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ, ಓಮನ್ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಟೀಮ್ ಇಂಡಿಯಾ ಏಷ್ಯಾ ಕಪ್ನ ಸೂಪರ್ 4 ಹಂತಕ್ಕೆ ಅಜೇಯವಾಗಿ ಹೋಗವ ಇರಾದೆಯನ್ನು ಹಾಕಿಕೊಂಡಿದೆ.
ಈಗಾಗಲೇ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿರುವುದು, ಶುಕ್ರವಾರ ಸಹ ಇದೇ ಪ್ರದರ್ಶನವನ್ನು ಮುಂದುವರೆಸುವ ಇರಾದೆಯನ್ನು ಹೊಂದಿದೆ. ಈಗಾಗಲೇ ಯುಎಇ ವಿರುದ್ಧ 9 ವಿಕೆಟ್ ಹಾಗೂ ಪಾಕ್ ವಿರುದ್ಧ 7 ವಿಕೆಟ್ ಜಯ ಸಾಧಿಸಿರುವ ಸೂರ್ಯಕುಮಾರ್ ಯಾದವ್ ಪಡೆ ಮತ್ತೊಂದು ಗೆಲುವಿನ ಕನಸು ಕಾಣುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಗಾಳಿ ಬೀಸುವ ಸಾಧ್ಯತೆ ಇದೆ.

ಟೀಮ್ ಇಂಡಿಯಾದ ಬ್ಯಾಟಿಂಗ್ ಬಲಾಢ್ಯವಾಗಿದೆ. ಸೂಪರ್ ಸ್ಟಾರ್ ಬ್ಯಾಟರ್ಗಳಾದ ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ತಂಡಕ್ಕೆ ಉತ್ತಮ ಆರಂಭವನ್ನು ನೀಡಬಲ್ಲರು. ಅಲ್ಲದೆ ಟಿ20 ಕ್ರಿಕೆಟ್ನ ನಂಬರ್ 1 ಬ್ಯಾಟರ್ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಬೇಕಿದೆ. ಈ ಹಿಂದಿನ ಎರಡೂ ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ ವೇಗವಾಗಿ ರನ್ ಕಲೆ ಹಾಕುವಲ್ಲಿ ಸಫಲರಾಗಿದ್ದಾರೆ. ಆದರೆ ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಮೂರನೇ ಪಂದ್ಯದಲ್ಲಿ ಅಭಿಷೇಕ್ ದೊಡ್ಡ ಇನಿಂಗ್ಸ್ ಕಟ್ಟಿ ಭರವಸೆ ಮೂಡಿಸುವ ಅವಶ್ಯಕತೆ ಇದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಎದುರಾಳಿ ಬೌಲರ್ಗಳನ್ನು ಕಾಡಬಲ್ಲರು.
ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಂಡದ ಜಯದಲ್ಲಿ ಮಿಂಚುತ್ತಿದ್ದಾರೆ. ಇವರು ಇದೇ ಈ ಪ್ರದರ್ಶನವನ್ನು ಮುಂದುವರೆಸುವ ಅನಿವಾರ್ಯತೆ ಇದೆ. ಇನ್ನು ಈ ಪಂದ್ಯದಲ್ಲಿ ಶಿವಂ ದುಬೆ ಹಾಗೂ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಿದರೆ ಬೆಸ್ಟ್. ಶಿವಂ ಬದಲಿಗೆ ರಿಂಕು ಸಿಂಗ್, ಬುಮ್ರಾ ಬದಲಿಗೆ ಅರ್ಷದೀಪ್ ಸಿಂಗ್ಗೆ ಅವಕಾಶ ನೀಡಿದರೆ ಒಳ್ಳೆಯದು. ಮುಂದಿನ ಪಂದ್ಯಗಳು ಟೀಮ್ ಇಂಡಿಯಾಕ್ಕೆ ಮಹತ್ವದಾಗಿದ್ದು ಅವರ ಅವಶ್ಯಕತೆ ಹೆಚ್ಚಿರುತ್ತದೆ. ಹೀಗಾಗಿ ಇವರಿಗೆ ವಿಶ್ರಾಂತಿ ನೀಡಬೇಕು.

ಭಾರತದ ಸ್ಟಾರ್ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಇತ್ತೀಚಿಗೆ ಐಸಿಸಿ ಬಿಡುಗಡೆ ಮಾಡಿರುವ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದಾರೆ. ಇವರು ಓಮನ್ ಬ್ಯಾಟರ್ಗಳಿಗೆ ಕಾಟ ನೀಡಬಲ್ಲರು. ಇನ್ನು ಟೂರ್ನಿಯುದ್ಧಕ್ಕೂ ಭರ್ಜರಿ ಬೌಲಿಂಗ್ ನಡೆಸಿರುವ ಕುಲ್ದೀಪ್ ಯಾದವ್ ಮತ್ತೊಮ್ಮೆ ತಮ್ಮ ಶಿಸ್ತು ಬದ್ಧ ದಾಳಿಯಿಂದ ಎದುರಾಳಿಗಳನ್ನು ಕಾಡಬೇಕಿದೆ. ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಅಜೇಯವಾಗಿ ಮುಂದಿನ ಹಂತಕ್ಕೆ ಪ್ರವೇಶಿಸುವ ಟೀಮ್ ಇಂಡಿಯಾದ ಕನಸು ನನಸಾಗಲು ಈ ಆಟಗಾರರು ಅಬ್ಬರಿಸುವ ಅವಶ್ಯಕತೆ ಇದೆ.