ಟೀಮ್ ಇಂಡಿಯಾ ಇನ್ನೇನು ಕೆಲವೇ ದಿನಗಳಲ್ಲಿ ಏಷ್ಯಾ ಕಪ್ ಟಿ20 ಟೂರ್ನಿಗೆ ತನ್ನ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ತಂಡದಲ್ಲಿ ಯಾರಿಗೆಲ್ಲ ಸ್ಥಾನ ಸಿಗಬಹುದು ಎಂಬ ಚರ್ಚೆಗಳು ಆರಂಭವಾಗಿವೆ. ಇನ್ನು ಏಷ್ಯಾ ಕಪ್ ವೇಳೆ ತಂಡವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆ ಸಹ ಉದ್ಭವಿಸಿದೆ. ಟೀಮ್ ಇಂಡಿಯಾ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಫಿಟ್ ಆಗಿದ್ದು ತಂಡವನ್ನು ಸೇರಿಕೊಳ್ಳ ಬಹುದು. ಈ ತಂಡದಲ್ಲಿ ಶುಭಮನ್ ಗಿಲ್ ಅವರಿಗೆ ಅವಕಾಶ ಸಿಗುತ್ತದಾ ಎಂಬ ಚರ್ಚೆಗಳು ಆರಂಭವಾಗಿವೆ. ಈ ಮಧ್ಯೆ ಟೀಮ್ ಇಂಡಿಯಾ ಕೋಚ್ ಇಂದು ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚಿಗೆ ಇಂಗ್ಲೆಂಡ್ನಲ್ಲಿ ನಡೆದ ಆಂಡರ್ಸನ್, ತೆಂಡೂಲ್ಕರ್ ಸರಣಿಯಲ್ಲಿ ಟೀಮ್ ಇಂಡಿಯಾದ ಕೋಚ್ ಗೌತಮ್ ಗಂಭೀರ್ ಕಾರ್ಯವನ್ನು ನಿರ್ವಹಿಸಿದ್ದರು. ಈ ವೇಳೆ ತಂಡ ಇಂಗ್ಲೆಂಡ್ನೆಲದಲ್ಲಿ ಸ್ಥಿರ ಪ್ರದರ್ಶನ ನೀಡಿದೆ. ಈ ವೇಳೆ ತಂಡ ಐದು ಪಂದ್ಯಗಳ ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿದೆ. ಇನ್ನು ಟೀಮ್ ಇಂಡಿಯಾ ಏಷ್ಯಾ ಕಪ್ಗಾಗಿ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಸಾಮಾಜಿಕ ತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ.

ಗೌತಮ್ ಗಂಭೀರ್ ಏಷ್ಯಾ ಕಪ್ಗೂ ಮುನ್ನ ಉಜ್ಜಯಿನಿಯ ಮಹಾಕಾಲನ ದರ್ಶನ ಪಡೆದರು. ಶುಕ್ರವಾರ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಳಗ್ಗೆ ನಡೆಯುವ ಭಸ್ಮ ಆರತಿಯಲ್ಲಿ ಗಂಭೀರ್ ಕಾಣಿಸಿಕೊಂಡರು. ಸ್ವಾತಂತ್ರ್ಯ ದಿನಾಚರಣೆಯ ಸುಸಂದರ್ಭದಲ್ಲಿ ಗೌತಮ್ ಗಂಭೀರ್ ವಿಶೇಷ ಪೂಜೆಯಲ್ಲಿ ಭಾಗವಹಿಸಿದರು. ಅಲ್ಲದೆ ಗಂಭೀರ್ ಅವರ ಜೊತೆ ಮಹಾಕಾಳನ ಭಸ್ಮ ಆರತಿಯಲ್ಲಿ ಗೌತಮ್ ಗಂಭೀರ್ ಅವರ ಪತ್ನಿ ನತಾಶಾ ಜೈನ್ ಮತ್ತು ಇಬ್ಬರೂ ಹೆಣ್ಣುಮಕ್ಕಳೊಂದಿಗೆ ಕಾಣಿಸಿಕೊಂಡರು. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ಏಷ್ಯಾ ಕಪ್ ಟಿ20 ಟೂರ್ನಿ ಸೆಪ್ಟಂಬರ್ 9ರಿಂದ ಆರಂಭವಾಗಲಿದೆ. ಭಾರತ ಆಯೋಜಿಸಲಿರುವ ಈ ಟೂರ್ನಿ ಯುಎಇನಲ್ಲಿ ನಡೆಯಲಿದೆ. ಏಷ್ಯಾ ಕಪ್ 2025 ರಲ್ಲಿ, ಭಾರತ ಸೆಪ್ಟೆಂಬರ್ 10 ರಂದು ತನ್ನ ಅಭಿಯಾನವನ್ನು ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಬ್ಲ್ಯೂ ಬಾಯ್ಸ್ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ಕಾದಾಟ ನಡೆಸಲಿದೆ. ಎರಡನೇ ಪಂದ್ಯದಲ್ಲಿ ಸಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಸೆ.14 ರಂದು ನಡೆಯಲಿದೆ. ಈ ಟೂರ್ನಿಯ ಫೈನಲ್ ಪಂದ್ಯ ಸೆಪ್ಟೆಂಬರ್ 28 ರವರೆಗೆ ನಡೆಯಲಿದೆ.
ಮಹಾಕಾಲನ ದರ್ಶನವನ್ನು ಟೀಮ್ ಇಂಡಿಯಾದ ಆಟಗಾರರು ಈಗಾಗಲೇ ಪಡೆದು ಯಶಸ್ಸು ಕಂಡಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಐಪಿಎಲ್ ಆರಂಭಕ್ಕೂ ಮುನ್ನ ಇದೇ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇವರು ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಅಲ್ಲದೆ ಇತ್ತೀಚಿಗೆ ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲೂ ಅಮೋಘ ಪ್ರದರ್ಶನ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.