ಭಾರತ ಕ್ರಿಕೆಟ್ ತಂಡ ಇತ್ತೀಚಿಗೆ ದುಬೈನಲ್ಲಿ ನಡೆದ ಏಷ್ಯಾ ಕಪ್ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ವೇಳೆ ಟೀಮ್ ಇಂಡಿಯಾ ಚಾಂಪಿಯನ್ ಆದ್ರೂ ಸಹ ಏಷ್ಯಾ ಕಪ್ ಟ್ರೋಫಿಯನ್ನು ಪಡೆಯುವಲ್ಲಿ ನಿರಾಕರಿಸಿತು. ಕಾರಣ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಹಾಗೂ ಏಷ್ಯಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷರೂ ಆಗಿರುವ ಮೊಹ್ಸಿನ್ ಖಾನ್ ಅವರು ಟ್ರೋಫಿಯನ್ನು ವಿಜೇತರಿಗೆ ನೀಡಬೇಕಿತ್ತು. ಆದರೆ ಟೀಮ್ ಇಂಡಿಯಾ ಮೊಹ್ಸಿನ್ ಖಾನ್ ಅವರ ವೇದಿಕೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿ, ಸಮಾರೋಪ ಸಮಾರಂಭವನ್ನು ಬಹಿಷ್ಕರಿಸಿತು.
ಈ ಸುದ್ದಿ ಎಲ್ಲರಿಗೂ ತಿಳಿದೇ ಇದೆ. ಮೊಹ್ಸಿನ್ ಖಾನ್ ಸಮಾರೋಪ ಸಮಾರಂಭದ ಬಳಿಕ ಏಷ್ಯಾ ಕಪ್ ಟ್ರೋಫಿಯನ್ನು ತಮ್ಮೊಂದಿಗೆ ಪಾಕ್ಗೆ ಕೊಂಡೊಯ್ದರು. ಆ ಬಳಿಕ ಈ ವಿಚಾರ ಮಾಧ್ಯಮಕ್ಕೆ ಆಹಾರವಾಯಿತು. ಈ ವೇಳೆ ಬಿಸಿಸಿಐ ಸಹ ಐಸಿಸಿಗೆ ದೂರು ನೀಡುವು ಸೂಚನೆಯನ್ನು ನೀಡಿತ್ತು. ಆಗ ಮೊಹ್ಸಿನ್ ಖಾನ್ ಟ್ರೋಫಿಯನ್ನು ಬಿಸಿಸಿಐಗೆ ಹಸ್ತಾಂತರಿಸುವುದಾಗಿ ತಿಳಿಸಿದ್ದರು. ಆದರೆ ಈಗ ಮತ್ತೊಂದು ಸುದ್ದಿ ಹೊರ ಬರುತ್ತಿದೆ.

ಮೊಹ್ಸಿನ್ ನಖ್ವಿ ಏಷ್ಯಾ ಕಪ್ ಟ್ರೋಫಿಯನ್ನು ದುಬೈನಲ್ಲಿರುವ ಏಷ್ಯಾನ್ ಕೌನ್ಸಿಲ್ ಕಟ್ಟದಲ್ಲಿ ಲಾಕ್ ಮಾಡಿ ಇಡುವುದಾಗಿ ತಿಳಿಸಿದ್ದಾರೆ. ಟ್ರೋಫಿಯ ಎಸಿಸಿ ಕಚೇರಿಯಲ್ಲಿದ್ದು, ಅಧ್ಯಕ್ಷರ ಅನುಮೋದನೆ ಹಾಗೂ ಉಪಸ್ಥಿತಿಯಿಲ್ಲದೆ ಯಾರಿಗೂ ಟ್ರೋಫಿ ನೀಡುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಅವರೇ ಖುದ್ದಾಗಿ ಬಿಸಿಸಿಐ ಅಥವಾ ಭಾರತ ತಂಡಕ್ಕೆ ನೀಡುವುದಾಗಿ ಸ್ಪಷ್ಟ ಸೂಚನೆ ನೀಡಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆಯಿಂದಾಗಿ, ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯನ್ನು ಈ ಬಾರಿ ದುಬೈನಲ್ಲಿ ಆಡಿಸಲಾಗಿತ್ತು. ಭಾರತ ಏಷ್ಯಾ ಕಪ್ ಟೂರ್ನಿಯನ್ನು ಆಯೋಜಿಸಿತ್ತು. ಈ ಟೂರ್ನಿಯ ಉದ್ದಕ್ಕೂ ಭಾರತ, ಪಾಕ್ ಆಟಗಾರರೊಂದಿಗೆ ಕೈ ಕುಲಕಲಿಲ್ಲ. ಇಷ್ಟೇ ಅಲ್ಲದೆ ನಖ್ವಿ ಸಾಮಾಜಿಕ ಮಾಧ್ಯದಲ್ಲಿ ಈ ಬಗ್ಗೆ ರಾಜಕೀಯ ಪ್ರೇರಿತ ಹೇಳಿಕೆಯನ್ನು ಸಹ ನೀಡಿದ್ದರು. ಇನ್ನು ಬಿಸಿಸಿಐ ನಖ್ವಿ ಅವರ ನಿಲುವನ್ನು ಐಸಿಸಿ ಸಭೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ. ಇನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರನ್ನು ಬದಲಾವಣೆ ಮಾಡುವಂತೆ ಕೇಳಿಕೊಳ್ಳುವ ಸಾಧ್ಯತೆಯೂ ಇದೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಒಂದೇ ಗ್ರುಪ್ನಲ್ಲಿ ಸ್ಥಾನ ಪಡೆದಿದ್ದವು. ಅಲ್ಲದೆ ಲೀಗ್ ಹಂತ, ಸೂಪರ್ 4, ಫೈನಲ್ ಸೇರಿದಂತೆ ಮೂರು ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದವು. ಭಾರತ ತಂಡ ಅಮೋಘ ಪ್ರದರ್ಶನ ನೀಡಿ ಪಂದ್ಯಾವಳಿಯ ಉದ್ದಕ್ಕೂ ಅಜೇಯ ಓಟವನ್ನು ಮುಂದುವರೆಸಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧವೂ ಅಬ್ಬರಿಸಲು ಪ್ಲ್ಯಾನ್ ಮಾಡಿಕೊಂಡಿದೆ.